ನಾಗತಿಹಳ್ಳಿ ವಿರುದ್ಧ ಐಂದ್ರಿತಾ ಬಾಯ್ಬಿಟ್ಟ ಕಟು ಸತ್ಯ
ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ 'ನೂರು ಜನ್ಮಕು' ಇದೇ ಶುಕ್ರವಾರ(ಮೇ.21) ಬಿಡುಗಡೆಯಾಗುತ್ತಿದೆ. ಆದರೆ ಚಿತ್ರದ ನಾಯಕಿ ಐಂದ್ರಿತಾ ರೇ ಮಾತ್ರ ಚಿತ್ರದ ಪ್ರಚಾರ, ಪತ್ರಿಕಾಗೋಷ್ಠಿಗಳಿಂದ ದೂರವೇ ಉಳಿದಿದ್ದರು. ಐಂದ್ರಿತಾ ರೇ ನಾಪತ್ತೆಯಾಗಿದ್ದು ಯಾಕೆ? ಇಷ್ಟಕ್ಕೂ ಆಕೆಯನ್ನು 'ನೂರು ಜನ್ಮಕು' ಪ್ರಚಾರದಿಂದ ದೂರ ಇಟ್ಟಿದ್ದು ಯಾಕೆ?
ಮಕಾವಿನಲ್ಲಿ ಐಂದ್ರಿತಾ ರೇಗೆ ನಾಗತಿಹಳ್ಳಿ ಕಪಾಳಮೋಕ್ಷ ಮಾಡಿದ ಬಳಿಕ ಇಬ್ಬರ ನಡುವಿನ ಅಂತರ ದೂರವಾಗಿತ್ತು.ನಾಗತಿಹಳ್ಳಿ ಲಂಪಟ(womanizer) ಎಂದು ಐಂದ್ರಿತಾ ಆರೋಪಿಸಿದ್ದರು. ಕಡೆಗೆ ಫಿಲಂ ಚೇಂಬರ್ ಮಧ್ಯಸ್ಥಿಕೆಯಲ್ಲಿ ಇಬ್ಬರ ನಡುವಿನ ಕದನಕ್ಕೆ ಅಂತ್ಯ ಹಾಡಲಾಗಿತ್ತು. ಇದೆಲ್ಲಾ ನಡೆದು ಹೋದ ಕತೆ.
ಆದರೆ ಬರುಬರುತ್ತಾ ನಾಗತಿಹಳ್ಳಿ 'ನೂರು ಜನ್ಮಕು' ಚಿತ್ರದ ಪ್ರಚಾರ ಕಾರ್ಯಕ್ರಮಗಳಿಂದ ತಮ್ಮನ್ನು ದೂರ ಇಟ್ಟರು. ಚಿತ್ರದ ಕಾರ್ಯಕ್ರಮಗಳಿಗೆ ತಮ್ಮನ್ನು ಕರೆಯುತ್ತಿರಲಿಲ್ಲ ಎಂದು ಐಂದ್ರಿತಾ ಇದೀಗ ಬಾಯ್ಬಿಟ್ಟಿದ್ದಾರೆ. ಚಿತ್ರದ ಪ್ರಚಾರ ಕಾರ್ಯಗಳಿಂದ ಆದಷ್ಟು ತಮ್ಮನ್ನು ದೂರವಿಡುವ ತಂತ್ರವನ್ನು ನಾಗತಿಹಳ್ಳಿ ಮಾಡಿದರು ಎಂದಿದ್ದಾರೆ.
'ನೂರು ಜನ್ಮಕು' ಚಿತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಎರಡು ಸುದ್ದಿಗೋಷ್ಠಿಗಳಿಗೂ ತಮ್ಮನ್ನು ಆಹ್ವಾನಿಸದಂತೆ ಜಾಗ್ರತೆ ವಹಿಸಿದರು. ಚಿತ್ರದ ನಿರ್ಮಾಪಕ ವಿನಯ್ ಲಾಡ್ ಹಾಗೂ ಚಿತ್ರದ ನಾಯಕ ನಟ ಸಂತೋಷ್ ಇಬ್ಬರೂ ಆಪ್ತಮಿತ್ರರು. ನಾಗತಿಹಳ್ಳಿ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಇವರಿಬ್ಬರೂ ಪ್ರಯತ್ನಿಸಲೇ ಇಲ್ಲ. ತಮ್ಮನ್ನು ಚಿತ್ರದ ಪ್ರಚಾರ ಕಾರ್ಯಗಳಿಗೆ ಕರೆಯುವ ಕನಿಷ್ಠ ಸೌಜನ್ಯವನ್ನು ತೋರಲಿಲ್ಲ ಎಂದು ದೂರಿದ್ದಾರೆ.


Click it and Unblock the Notifications











