ಮತ್ತೊಂದು ವಿವಾದದ ಸುಳಿಯಲ್ಲಿ ಹರೀಶ್ 'ಗನ್'

ಚಿತ್ರದ ನಿರ್ಮಾಪಕ ಕೆ. ಮುರುಳಿ ಅವರು 'ಗನ್' ಸೋಲಿನಿಂದ ಆಗಿರುವ 75 ಲಕ್ಷ ರು.ನಷ್ಟು ನಷ್ಟವನ್ನು ಸಹ ನಿರ್ಮಾಪಕ ಮತ್ತು ನಿರ್ದೇಶಕ ಹರೀಶ್ ಅವರೇ ತುಂಬಿಕೊಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಹರೀಶ್ ರಾಜ್ ಹೈಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ಮನೆ ಮುಂದೆ ಬಂದು ಗಲಾಟೆ ಮಾಡಿ ಮನೆಮಂದಿಗೆಲ್ಲ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದರಿಂದ ನಮಗೆ ಅವಮಾನವಾಗಿದೆ ಎಂದು ದೂರಿತ್ತಿದ್ದಾರೆ.
ಚಿತ್ರದ ಸೋಲಿನ ಭಾರವನ್ನು ನಿರ್ದೇಶಕ ಹರೀಶ್ ಮೇಲೆಯೇ ಹೊರಿಸಿರುವ ನಿರ್ಮಾಪಕ ಮುರುಳಿ, ಕಡಿಮೆ ಬಜೆಟ್ ನಲ್ಲಿ ಚಿತ್ರ ನಿರ್ಮಿಸು ಎಂದು ಹೇಳಿದ್ದರೂ, ತಮಗೇ ತಿಳಿದ ಫೈನಾನ್ಸರ್ ಗಳನ್ನು ಕರೆತಂದು, ಬಜೆಟ್ ಏರಿಸಿ ಈಗ ಸೋತಿದ್ದರಿಂದ ನಷ್ಟಕ್ಕೆ ಕಾರಣವಾಗಿದ್ದಾರೆ. ಇದರಿಂದ ನಷ್ಟದ ಭಾರವನ್ನು ಹರೀಶ್ ಅವರೇ ಹೊರಬೇಕು ಎಂದು ಮುರುಳಿ ಹೇಳಿದ್ದಾರೆ. ನಷ್ಟ ತುಂಬಿಕೊಡದಿದ್ದರೆ ವಂಚನೆಯ ಕೇಸು ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ.
ಚಿತ್ರ ಎತ್ತಂಗಡಿಯ ಸುದ್ದಿ ಸುತ್ತಾಡುತ್ತಿದ್ದಾಗ ಸಂತೋಷ್ ಚಿತ್ರಮಂದಿರದ ಮೇಲೆ ಹತ್ತಿ, ಕತ್ತಿ ಕೈಯಲ್ಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದ ಹರೀಶ್, ಗೆ ಆತ್ಮಹತ್ಯೆಯ ನಾಟಕವಾಡೆಂದು ಹೇಳಿದ್ದೇ ಮುರುಳಿ ದಂಪತಿಗಳು ಎಂಬ ಬಾಂಬ್ ಎಸೆದಿದ್ದಾರೆ. ಇದನ್ನು ಮುರುಳಿ ದಂಪತಿಗಳು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಚಿತ್ರಗಳಲ್ಲಿ ನಟಿಸುವಾಗ ಹರೀಶ್ ಒಳ್ಳೆ 'ಕಲಾಕಾರ' ಎಂಬುದೇನೋ ಸರಿ, ಆದರೆ ನಿಜಜೀವನದಲ್ಲಿ ಕೂಡ ನಟಿಸುತ್ತಾರೆಂದು ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇಲ್ಲಿ ಅನೇಕ ಪ್ರಶ್ನೆಗಳಿಗೆ ಹರೀಶ್ ಅವರೇ ಉತ್ತರಿಸಬೇಕಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುರುಳಿ ದಂಪತಿಗಳೇ ಹೇಳಿದ್ದನ್ನು ಇವರು ಕೇಳಿದ್ದೇಕೆ? ಆ ಸಂದರ್ಭದಲ್ಲೇ ಇದನ್ನೇಕೆ ಹರೀಶ್ ಪ್ರಸ್ತಾಪಿಸಲಿಲ್ಲ? ಅವರು ಹೇಳಿದಂತೆ ಇವರು ಮಾಡಿದ್ದರೆ ಅದೆಲ್ಲ ಒಂದು ನಾಟಕವೆ? ಹರಿಸಿದ ಕಣ್ಣೀರೆಲ್ಲ ಮೊಸಳೆ ಕಣ್ಣೀರೆ? ಮೊದಲೇ ಕನ್ನಡ ಚಿತ್ರಗಳು ಓಡುತ್ತಿಲ್ಲ. ಜೇಬು ತೂತಾಗಿರುವ ನಿರ್ಮಾಪಕರೇ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಿರ್ದೇಶನ ಮಾಡಿ ತೆರೆಮರೆಯಲ್ಲಿ ಸಹ ನಿರ್ಮಾಪಕರೂ ಆಗಿದ್ದ ಹರೀಶ್ ಅವರು ನಷ್ಟದ ಭಾರವನ್ನು ಹೊರಬಾರದೇಕೆ?


Click it and Unblock the Notifications











