ಗ್ರಾಹಕ ಕೇಳಿದ್ದು ಕೊಡಿ, ಇಲ್ಲಾ ಡಬ್ಬಿಂಗ್ ಇರ್ಲಿ ಬಿಡಿ
ಇದು ಪಕ್ಕ ಕಪ್ಪಿ ತೂಕ ನೋಡ್ರಿ ಸರ್...ಕಾಪಿ ಚಿಟಿ ನೋಡಿ ಬರಿಬ್ಯಾಡ್ರಿ, ಅದೇ ಕಾಪಿ ಚೀಟಿನ ಪರೀಕ್ಷ ಕೋಣೆಲಿ ಬಾಯಪಾಠ ಮಾಡಿ ಬರೀರಿ ಅಂದಂಗೆ ಆಯಿತು!
ನಮಸ್ಕಾರ್ರಿ, ನಾನ ಜಯತೀರ್ಥ ರೀ ಅಂತ ಮೊನ್ನೆ ನಮ್ಮ ದೊಸ್ತಗ ಕೈ ಮಾಡಿದ್ರೆ , ಏಮಿ ನಮಸ್ಕಾರ ಮಂಡಿ, ಎಲ್ಲ ಸೌಖ್ಯಮ?ಏಳವುನ್ನರು ಮೀರು ಅಂದ! ಮೊದ್ಲೇ ಉರಿ ಉರಿ ಬಿಸಿಲ ದಿನದಾಗ ಒಮ್ಮೆ ಶಾಕ್ ಹೊಡದಂಗಾತು.
ಹೌದ್ರಿ ಮಹಾರಯ್ರೆ. ಏನ್ರೋ ಏನಿದು ಅಂತ ಕೇಳಿದ್ರೆ ಬ್ಲಾಕ್ ಟಿಕೆಟ್ ತಗೊಂಡು ರಜನಿಕಾಂತ್ ತೆಲುಗು ಪಿಕ್ಚರ್ ನೋಡಿಬಂದಿವಿ, ಆ ಭಾಷೆನು ಅರ್ಥ ಅಗ್ಲಾಕತ್ತೈತಿ ಅಂತ ಖುಷಿಯಿಂದ ಹೇಳಿದ್ದು ನೋಡಿ ಇವರಿಗೆ ಕಾಲಾಗಿನ ಕೆರ ತಗೊಂಡು ಹೊಡಿಬೇಕು ಅಂತ ಅನಿಸದೆ ಇರ್ಲಿಲ್ಲ.
ಅದ್ಯಾಕ್ರೋ ಕನ್ನಡ ಬಿಟ್ಟು ಪರಭಾಷಾ ಪಿಕ್ಚರ್ ನೋಡೋ ರೋಗ ಅಂದ್ರೆ, ಇವರ ಭಾಷಣ ಕೇಳಿ ಹೆಂಗಿತ್ತು: ನಮ್ಮ ಕನ್ನಡದ ಮಂದಿ ರಜನೀಕಾಂತ್, ಟಾಮ್ ಕ್ರೂಸ್, ಚೀರಂಜೀವಿ, ಇವರನ್ನೆಲ್ಲ ನೋಡ್ಬೇಕು ಅಂದ್ರೆ ತೆಲುಗು, ತಮಿಳ್, ಇಂಗ್ಲಿಷ್ ದಾಗ ನೋಡ್ಬೇಕು. ನೋಡಿ ನೋಡಿ ನಮ್ಮ ಜನ ಆಯಾ ಭಾಷೆ ಕಲಿಲಾಕತ್ತ್ಯಾರು ನೋಡ್ರಿ.
ಬಹಳ ಮಂದಿ ನನ್ನ ಗೆಳ್ಯಾರ ರೆಸುಮೆ ನೋಡಿದ್ರೆ ಭಾಷೆಗಳಲ್ಲಿ ತೆಲುಗು,ತಮಿಳ್ ಎಲ್ಲಾನು ಸೇರಿಸಿರ್ತಾರೆ. ಅದ್ಹೆಂಗ ಗೊತ್ತು ನಿಂಗ ಮಗನ ಅಂತ ಕೇಳಿದ್ರೆ:"ಇಲ್ಲೋಲೆ ಮಗನ ಮೊನ್ನೆ ಒಂದೆರಡು ತೆಲುಗು, ತಮಿಳ್ ಪಿಕ್ಚರ್ ನೋಡಿ ಬಂದಿವು, ಸಣ್ಣಗೆ ಅವು ಅರ್ಥ ಆಗ್ತಾ ಇದಾವು ಅಂತ ನಂಗೆ ಮಖಕ್ಕೆ ಹೊಡಿದಂಗೆ ಹೇಳಿದ್ರು ನೋಡ್ರಿ."
ಒಂದು ಕ್ಷಣ ನಂಗೆ ಅನಿಸ್ಲಾಕತ್ತಿತ್ತು, ಏನು ಮಾಡುದರಿ ನಾವಂತೂ ಏನೂ ಮಾಡಕ್ಕಾಗಲ್ಲ ನಮ್ಮ ಉದ್ಯಮ ಡಬ್ಬಿಂಗ ವಿರೋಧಿ ಇದೆ, ಅದಕ್ಕೆ ಮುಚ್ಕೊಂಡು ಅರ್ಥ ಆಗದೆ ಇದ್ರೂ ತಮಿಳ್, ತೆಲುಗು, ಮಲಯಾಳಂ ನಲ್ಲೆ ಆಯ ಚಿತ್ರನೋಡಿ ಖುಷಿಪಡಬೇಕು ಅನ್ನೋ ಪರಿಸ್ಥಿತಿ ಹುಟ್ಟಿ ಹಾಕ್ಯಾರ.
ಗ್ರಾಹಕನೇ ರಾಜ ತಿಳ್ಕೋರಿ:ಅಲ್ಲರಿ ಗ್ರಾಹಕರಾಗಿ ನಮಗೆ ಬೇಕಾಗೋ ಸೇವೆಗಳಲ್ಲಿ ಆಯ್ಕೆ ನಮಗ ಇರಬೇಕೋ ಅಥವಾ ಸೇವೆ ನೀಡೊನಿಗೆ ಇರ್ಬೇಕು. ಒಂದೇ ಸಲ ವಿಚಾರ ಮಾದ್ರಿ, ನೀವು ನಿಮ್ಮ ಊರಾಗ ಹೋಟೆಲಕ ಹೋದ್ರಿ ಅಲ್ಲಿ ನಿಮ್ಮ ಮುಂದೆ ಸೆರ್ವೆರ್ ಬಂದು ಉಪ್ಪಿಟ್ಟು, ಇಡ್ಲಿ, ದೋಸೆ, ಉತ್ತಪ್ಪ, ವಡೆ, ಅಂತ ಒಂದು ದೊಡ್ಡ ಲಿಸ್ಟೇ ವದರ್ತಾನೆ ಆವಾಗ ನಿಮಗೇನು ಬೇಕೋ ನೀವು ತಗೊತಿರಿ ಹೌದಲ್ಲರಿ? ಹಿಂಗ ಇರ್ಬೇಕಾದ್ರ ಇನ್ನ ನಮ್ಮ ಮನರಂಜನೆಗೆ ಅಂತ ಇರೋ ಸಿನಿಮಾದಾಗೂ ನಾವು ಅದನ್ನ ಕಾಣಬೇಕಲ್ಲ?
ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ನಮ್ಮ ಕಣ್ಣಿಗೆ ಸುಣ್ಣ ಹಾಕಲಾ ಕತ್ತಾರ : ನಮ್ಮ ಕೆ.ಎಫ್.ಸಿ.ಸಿ ನೋಡ್ರಿ ಹಿಂದೆ ಮುಂದೆ ನೋಡದೆ ಡಬ್ಬಿಂಗ್ ಬ್ಯಾಡ್ರೋ ಬ್ಯಾಡ್ರೋ ಅಂತ ಹೊಯ್ಕೋಳ ಕತ್ತ್ಯಾರು, ಸಾಮಾನ್ಯ ಮಂದಿ ನಾವು ಮಾಡುವಸ್ಟು ವಿಚಾರರೆ ಇವರ ಮಾಡ್ತಾರ, ಅದೇನೋ ಅಪ್ಪ ಹಾಕಿದ ಆಲದ ಮರ ಅಂತ ಹೇಳಿ ಅದನ್ನ ಕಂಟಿನ್ಯೂ ಮಾಡಿದ್ರೆ ಹೆಂಗ್ ನಡಿಬೇಕ್ರಿ ಬಾಳೇ? ಈಗ ಜಗತ್ತು ಭಾಳ ಮುಂದು ಹೊಗೈತಿರಿ..
ನಾವು ಬೇರೆ ಭಾಷೆ ಸಿನೆಮಾನ ಕನ್ನಡದಾಗ ಡಬ್ಬ ಮಾಡಿದ್ರೆ ನಮ್ಮ ಮಂದಿಗೆ ಕೆಲಸ ಸಿಗತಾವು, ಸಿನೆಮಾ ನಂಬಿ ಬದ್ಕೋ ಎಷ್ಟು ಕುಟುಂಬಗಳು 2 ಹೊತ್ತು ಚಂದಂಗ ಊಟ ಮಾಡ್ತಾರೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಕನ್ನಡದಾಗೆ ಕಾರ್ಟೂನ್, ಡಿಸ್ಕವೆರಿ, ಅನಿಮಲ್ ಪ್ಲಾನೆಟ್, ಪೋಗೋ ಎಲ್ಲ ನೋಡ್ತಾರೆ.
ದೂರದ ಬೆಟ್ಟ ಕಣ್ಣಿಗೆ ಸಣ್ಣಗೆ ಚಂದಂಗೆ ಕಾಣತೈತಿ ಅಂತ ಅದನ್ನ ದೂರಿಂದ ನೋಡಿದ್ರೆ ಏನು ಲಾಭ ಇಲ್ಲ್ರಿ, ಬೆಟ್ಟ ಹತ್ತಿ ಅದರ ಮಜಾ ತಗೋಬೇಕು ಅಂದ್ರೆ ನಾವು ಬೆಟ್ಟ ಹತ್ತಾಕ ಬೇಕು! ಇದೆ ರೀತಿ ನಮ್ಮ ಕನ್ನಡ ಸಿನಿಮಾ ಮಂದಿ ದೂರದಿಂದ ನೋಡಿ ಡಬ್ಬಿಂಗ್ ಬ್ಯಾಡ, ಅದರಿಂದ ನಮ್ಮ ಜನಕ್ಕೆ ಹಾಳು ಅಂತ ಸುಳ್ಳು ವಾದಿಸಾಕತ್ತ್ಯಾರು!
ಇಂಥ ಮೂರ್ಖರಿಗೆ ನಮಂಥ ಕಲಿತ ಮಂದಿ ಬುದ್ಧಿ ಹೇಳಿ ನಮಗೆ ಏನೋ ಬೇಕಾದ್ದು ನಾವು ಆರಿಸ್ಕೊತಿವಿ, ನಿಮ್ಮ ಬದಕು ಹಸನ ಮಾಡ್ತಿವಿ ಅಂದ್ರೆ, ಇವರು ಒಪ್ಪಬೇಕ್ರಿ ಸರ್. ನನಗು ಮಿಷನ್ ಇಂಪಾಸಿಬಲ್ ಅನ್ನೋ ಫಿಲ್ಮದಾಗ ಅದನ ನೋಡ್ರಿ ಟಾಮ್ ಕ್ರೂಸ್ ಅವನ್ನ ಸಿನಿಮಾ ಕನ್ನಡದಾಗ ನೋಡ್ಬೇಕು ಭಾಳ ಆಶಾ ಐತಿ, ಆದರ ನೋಡ್ರಿ ಎಂಥ ಜನ ನಮಗೆ ಏನು ಬೇಕೋ ಅದನ್ನ ನೋಡಾಕ ಬಿಡವಲ್ಲರು.
ಸಣ್ಣವರು ಇದ್ದಗಿಂದ ನಮ್ಮ ಕನ್ನಡ ಸಾಲಿ ಮಾಸ್ತರು ಹೇಳ್ತಿದ್ರು "ಗ್ರಾಹಕನೇ ರಾಜ, ಗ್ರಾಹಕ ಹೇಳಿದಂಗೆ ವ್ಯಾಪಾರಿ ಕೇಳಬೇಕು, ಅವನಿಗೆ ಏನು ಬೇಕೋ ಅದನ್ನ ನಾವು ಕೊಡಬೇಕಂತ", ಆದ್ರ ನಮ್ಮ ಕೆ.ಎಫ್.ಸಿ.ಸಿಯ ನೀತಿ ನೋಡಿದ್ರೆ ಇದಕ್ಕ ತದ್ವಿರುದ್ಧ ನಡೆದುಕೊಂಡು ನಮಗೆ ದ್ರೋಹ ಬಗ್ಯಾಕತ್ತದ. ಇದನ್ನ ಮುಂದವರೆಸಿದ್ರ ನಮ್ಮ ಜನಕ್ಕೆ ಇವ್ರು ಹಳ್ಳಾ ಹಿಡಿಸುದು ಗ್ಯಾರಂಟಿರಪ್ಪೋ!
ನಮ್ಮ ಮಂದಿಯಿಂದ ನಮಗೆ ದ್ರೋಹ: ತಿಂದ ಮನಿಗೆ ಕಣ್ಣು ಹಾಕೋ ಜನ ಈಗ ನೋಡ್ರಿ, ನಮ್ಮ ನಟ ಅಶೋಕ್ ನಾಯಕ್ತ್ವದಾಗ ಇವರೆಲ್ಲ ಸೇರಿ ಡಬ್ಬಿಂಗ್ ಬ್ಯಾಡ ಅಂತ ಮತ್ತ ತಮ್ಮ ಹಳೆ ಜಿದ್ದ ಶುರು ಮಾಡ್ಯಾರ. ನಾನಂತೂ ಇವರ ವಿರುದ್ಧ ನನ್ನ ಹಕ್ಕಿನ ಪರವಾಗಿ ನಿಲ್ಲತಿನಿ. ಭಾಳ ವಿಚಾರ ಮಾಡಬ್ಯಾಡ್ರಿ, ಕನ್ನಡಕ್ಕೆ ದ್ರೋಹ ಬಗ್ಯಾರ ಜೊತೆ ಸೇರಿ ನಾಲ್ಕು ಮನೆ ಹಾಳು ಮಾಡಿದ್ರೆ ಕೂಡಲ ಸಂಗಮ ದೇವ ನಿಮ್ಮನ್ನ ಮೆಚ್ಚನ್ಗಿಲ್ಲ..ಹಂಗಾದ್ರೆ ಇದನ್ನ ಉಳಿಸಾಕ ನೀವು ನನ್ನ ಜೊತೆ ಹೆಜ್ಜೆ ಹಾಕ್ತಿರಿಲ್ಲ ಮತ್ತ? ಎಲ್ಲರಿಗೂ ಅಡ್ಡ ಬಿದ್ದೆ...ನೀವೇನಂತೀರಾ? ನಮಗೆ ಇಮೇಲ್ ಕಳಿಸಿ.


Click it and Unblock the Notifications











