ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಪ್ರದರ್ಶನ ರದ್ದು
"ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ. ಆದರೆ ಜನಕ್ಕೆ ಚಿತ್ರ ತಲುಪಿಲ್ಲ. ಕಲೆಕ್ಷನ್ ಬೇರೆ ಕಡಿಮೆಯಾಗಿದೆ. ಚಿತ್ರಮಂದಿರದ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ವಿಧಿ ಇಲ್ಲದೆ ಚಿತ್ರ ಪ್ರದರ್ಶನವನ್ನು ನಿಲ್ಲಿಸುವಂತೆ ವಿತರಕರಿಗೆ ಹಾಗೂ ಥಿಯೇಟರ್ ಮಾಲೀಕರಿಗೆ ಮನವಿ ಮಾಡುತ್ತಿದ್ದೇನೆ".
ಇದು 'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದ ನಿರ್ಮಾಪಕ ಕಮ್ ನಿರ್ದೇಶಕ ಎಚ್ ವಿ ರವೀಂದ್ರ ಅವರ ನೋವಿನ ಮಾತು. ತಮ್ಮ ಚೊಚ್ಚಲ ಚಿತ್ರಕ್ಕೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ರು.3.28 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆಯಂತೆ.
ಈಗಾಗಲೆ 40 ಚಿತ್ರಮಂದಿರಗಳಿಂದ ಈ ಚಿತ್ರವನ್ನು ತೆಗೆಯಲು ಸೂಚಿಸಲಾಗಿದೆ. ಇನ್ನುಳಿದ ಚಿತ್ರಮಂದಿರಗಳಲ್ಲಿ ಲಾಭದ ಆಸೆಯನ್ನು ಬಿಟ್ಟಿದ್ದೇನೆ. ಫಿಲಂ ಚೇಂಬರ್ನಿಂದ ನ್ಯಾಯ ಸಿಗುತ್ತದೆ ಎಂಬ ಭರವಸೆಯೂ ಇಲ್ಲ. ಹಾಗಾಗಿ ತಮ್ಮ ಚಿತ್ರವನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಆದರೆ ಬಲ್ಲ ಮೂಲಗಳ ಪ್ರಕಾರ, ಪ್ರೇಮ್ ಅಭಿನಯದ ಮತ್ತೊಂದು ಚಿತ್ರ ಧನ್ ಧನಾ ಧನ್ ಈ ವಾರ ತೆರೆ ಕಾಣುತ್ತಿದೆ. ಪ್ರೇಮ್ ಅಭಿನಯದ ಎರಡು ಚಿತ್ರಗಳು ಒಂದರ ಹಿಂದೆ ಒಂದು ಬಿಡುಗಡೆಯಾಗುತ್ತಿರುವುದೇ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದ ಎತ್ತಂಗಡಿಯಾಗಲು ಕಾರಣ ಎನ್ನಲಾಗಿದೆ.
ರವೀಂದ್ರ ಹೇಳುವುದೇನೆಂದರೆ, ಧನ್ ಧನಾ ಧನ್ ಚಿತ್ರವನ್ನು ಒಂದು ಅಥವಾ ಎರಡು ವಾರಗಳ ಬಳಿಕ ಬಿಡುಗಡೆ ಮಾಡಿ ಎಂದು ಆ ಚಿತ್ರದ ನಿರ್ಮಾಪಕರನ್ನು ವಿನಂತಿಸಿಕೊಂಡೆವು. ಆದರೆ ಅವರು ತುಂಬಾ ಹಣಕಾಸು ತೊಂದರೆಗೆ ಸಿಲುಕಿರುವ ಕಾರಣ ಸಾಧ್ಯವಿಲ್ಲ ಎಂದಿದ್ದಾರಂತೆ.
ಉತ್ತಮ ಪ್ರಶಂಸೆಗೆ ಪಾತ್ರವಾಗಿತ್ತು ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರ. ಜೂ.17ರಂದು ರಾಜ್ಯದಾದ್ಯಂತ ಈ ಚಿತ್ರ 49 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ದಿಢೀರ್ ಎಂದು ಚಿತ್ರ ಪ್ರದರ್ಶನ ರದ್ದು ಮಾಡುತ್ತಿರುವುದು ಚಿತ್ರೋದ್ಯಮದಲ್ಲಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ತನ್ನದೇ ಚಿತ್ರಗಳ ಬಗ್ಗೆ ಇಷ್ಟೆಲ್ಲಾ ರಾದ್ಧಾಂತವಾಗುತ್ತಿದ್ದರೂ ಲವ್ಲಿ ಸ್ಟಾರ್ ಪ್ರೇಮ್ ನಾಪತ್ತೆಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











