ಬೆಳಗ್ಗೆಯಿಂದ ಸಂಜೆತನಕ ನಡೆದ ರಮ್ಯಾ ರಾಮಾಯಣ
ಕನ್ನಡ ಚಿತ್ರೋದ್ಯಮದಲ್ಲಿ ಬೆಳಗ್ಗೆ ಆರಂಭವಾದ ನಾಟಕೀಯ ಬೆಳವಣಿಗೆಗಳು ಸಂಜೆಯಾದರೂ ಮುಗಿಯುವ ಸೂಚನೆಗಳು ಕಂಡುಬಂದಿಲ್ಲ. ರಮ್ಯಾ ರಾಮಾಯಣ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಸಾಗಿದ್ದು ರೋಚಕ ಅಂತ್ಯ ಕಾಣುವ ಲಕ್ಷಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಇಂದು ಬೆಳಗ್ಗಿನಿಂದ ಸಂಜೆಯ ಕ್ಷಣಕ್ಷಣಕ್ಕೆ ಬದಲಾದರಮ್ಯಾಯಣದ ಸುದ್ದಿ ತುಣುಕುಗಳು ಹೀಗಿವೆ.
ಇಂದು ಬೆಳಗ್ಗೆ ವರನಟ ಡಾ.ರಾಜ್ ಕುಮಾರ್ ಸಮಾಧಿ ಬಳಿಗೆ ದೌಡಾಯಿಸಿದ ನಿರ್ಮಾಪಕರು ಮೌನ ಪ್ರತಿಭಟನೆ ನಡೆಸಲು ಮುಂದಾದರು. ಕಲಾವಿದರ ವಿರುದ್ಧ ಧರಣಿ ಸತ್ಯಾಗ್ರಹ ನಡೆಸುವುದಾಗಿ 'ದಂಡಂ ದಶಗುಣಂ' ನಿರ್ಮಾಪಕ ಗಣೇಶ್ ಸೇರಿದಂತೆ ಹಲವರು ಘೋಷಿಸಿದರು. ಬಳಿಕ ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ಮೌನ ಪ್ರತಿಭಟನೆಯಿಂದ ಹಿಂದೆ ಸರಿದರು.
ಏತನ್ಮಧ್ಯೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಅವರ ಮುಂದಾಳತ್ವದಲ್ಲಿ ರಮ್ಯಾ ರಾಮಾಯಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದರು. ಶಿವಣ್ಣನನ್ನು ಎಳೆದು ತರುವ ತೆರೆಮರೆಯ ಕಸರತ್ತುಗಳು ವಿಫಲವಾಗಿವೆ. 'ಜೋಗಯ್ಯ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಶಿವಣ್ಣ ಸಂಜೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರವಾಣಿಯಲ್ಲಿ ತಿಳಿಸಿದ್ದಾರೆ.
ಕಡೆಗೂ ನಿರಾಶರಾಗದ ನಿರ್ಮಾಪಕರು ಫಿಲಂ ಚೇಂಬರ್ ಬಳಿಗೆ ತೆರಳಿ ಅಲ್ಲಿನ ಡಾ.ರಾಜ್ ಪುತ್ಥಳಿಗೆ ಹಾರ ಹಾಕಿ ಜೈಕಾರಗಳನ್ನು ಕೂಗಿದರು. "ನಿರ್ಮಾಪಕರೇ ಅನ್ನದಾತ ಎಂದ ಅಣ್ಣಾವ್ರಿಗೆ ಜೈ" ಎಂದು ಕೂಗಿ ತಮ್ಮ ಸಿಟ್ಟನ್ನು ಕೊಂಚ ಕಡಿಮೆ ಮಾಡಿಕೊಂಡರು. ಮಂಗಳವಾರ ಸಂಜೆ 4.30ಕ್ಕೆ ಸಭೆ ಸೇರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಏತನ್ಮಧ್ಯೆ ಫಿಲಂ ಚೇಂಬರ್ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಸುಳಿವಿಲ್ಲ.
ಇದಕ್ಕೂ ಮುನ್ನ ನಿರ್ಮಾಪಕರ ಒಂದು ಗುಂಪು ಜೆ ಪಿ ನಗರದಲ್ಲಿರುವ ಅಂಬರೀಷ್ ಅವರ ಮನೆಗೆ ಬಂದದ್ದಾಗಿ ಸುದ್ದಿ. ಆದರೆ ಅಂಬರೀಷ್ ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕದೆ ತಮ್ಮ ಬಿಗಿ ಪಟ್ಟನ್ನು ಸಡಿಲಿಸಿಲ್ಲ. ಅವರು ಇಂದು (ಮಾ.22) ಸಂಜೆ 7.30ಕ್ಕೆ ಸಭೆ ಸೇರಲಿದ್ದಾರೆ. ಫಿಲಂ ಚೇಂಬರ್ ಏನು ನಿರ್ಧಾರ ತೆಗೆದುಕೊಳ್ಳಲಿದೆ ಅದಕ್ಕೆ ಕಲಾವಿದರ ನಿಲುವೇನು ಎಂಬುದು ಅಂಬರೀಷ್ ಮನೆಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ.
'ದಂಡಂ ದಶಗುಣಂ' ವಿವಾದ ಮೆಗಾ ಧಾರಾವಾಹಿಯಂತೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದರೆ ದಿಢೀರೆಂದು ಎಂಟ್ರಿ ಕೊಟ್ಟ ರಮ್ಯಾ ಮತ್ತೊಂದು ತಿರುವು ನೀಡಿದರು. ತನಗೆ ಸಂದಾಯವಾಗಿದ್ದ ರು.4 ಲಕ್ಷಗಳನ್ನು ನಿರ್ಮಾಪಕ ಮುನಿರತ್ನ ಕೈಯಲ್ಲಿ ಗಣೇಶ್ ಅವರಿಗೆ ಹಿಂತಿರುಗಿಸಿದ್ದಾರೆ. ರಮ್ಯಾ ಬಾಕಿ ಸಂಭಾವನೆಯನ್ನು ಮುನಿರತ್ನ ಮೂಲಕ ಗಣೇಶ್ ಹಿಂತಿರುಗಿಸಿದ್ದರು. ಸ್ವತಃ ಗಣೇಶ್ ಅವರೇ ತನಗೆ ರು.4 ಲಕ್ಷ ಕೊಡಲಿ. ಅದುಬಿಟ್ಟು ಮುನಿರತ್ನ ಕೈಲಿ ಕೊಟ್ಟು ಕಳುಹಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಇದರಿಂದ ಕುಪಿತರಾದ ನಿರ್ಮಾಪಕ ಎ ಗಣೇಶ್ ಇಂದು ಸಂಜೆ ಅಂಬಿ ಮನೆಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ನಿರ್ಮಾಪಕರು ಮತ್ತು ಕಲಾವಿದರ ಜಗಳದಲ್ಲಿ ಫಿಲಂ ಚೇಂಬರ್ ಅನಾಥವಾಗಿದೆ. ಇವರು ಅವರ ಮೇಲೆ ಅವರು ಇವರ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಫಿಲಂ ಚೇಂಬರ್ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.


Click it and Unblock the Notifications











