ಭಾರತಿ ವಿಷ್ಣುವರ್ಧನ್ ಅವರಿಗೆ ಅವಮಾನ
'ಆಪ್ತರಕ್ಷಕ' ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ (ಕೃಷ್ಣಕುಮಾರ್) ಅವರು ಡಾ.ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಕನಿಷ್ಠ ಸೌಜನ್ಯವನ್ನು ತೋರದೆ ಅವಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಗುರುವಾರ(ಫೆ.18) 'ಆಪ್ತರಕ್ಷಕ' ಪ್ರೀಮಿಯರ್ ಪ್ರದರ್ಶನ ಏರ್ಪಡಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಜನಜಂಗುಳಿ ನಡುವೆ 'ಆಪ್ತರಕ್ಷಕ' ಪ್ರೀಮಿಯರ್ ಶೋ ನೋಡಲು ಭಾರತಿ ಅವರಿಗೆ ಇಷ್ಟವಿರಲಿಲ್ಲ. ಭಾರತಿ ವಿಷ್ಣುವರ್ಧನ್ ಅವರು ತಮ್ಮ ಬಂಧು ಮಿತ್ರರೊಂದಿಗೆ ಖಾಸಗಿಯಾಗಿ 'ಆಪ್ತರಕ್ಷಕ' ಚಿತ್ರವನ್ನು ನೋಡಲು ಬಯಸಿದ್ದರು. ಇದಕ್ಕಾಗಿ ನಿರ್ಮಾಪಕ ಕೃಷ್ಣಪ್ರಜ್ವಲ್ ಅವರು ಮೈಸೂರು ರಸ್ತೆಯಲ್ಲಿರುವ ಬಿಗ್ ಸಿನಿಮಾಸ್ ನಲ್ಲಿ ಚಿತ್ರವನ್ನು ವೀಕ್ಷಿಸುವಂತೆ ಹೇಳಿದ್ದರು.
ಭಾರತಿ ವಿಷ್ಣುವರ್ಧನ್ ಅವರು ತಮ್ಮ ಬಂಧು ಮಿತ್ರರ ಜೊತೆ ಆಪ್ತರಕ್ಷಕ ವೀಕ್ಷಿಸಲು ಇಚ್ಛಿಸಿದ್ದರು. ಆದರೆ ಕೃಷ್ಣಪ್ರಜ್ವಲ್ ಇದಕ್ಕೆ ನಿರಾಕರಿಸಿದ್ದರು. ವಿಧಿಯಿಲ್ಲದೆ ಭಾರತಿ ಅವರು ಮಲ್ಲೇಶ್ವರಂನ ಚಿತ್ರಮಂದಿರವೊಂದರಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಫೆ.18ರ ಸಂಜೆ ಖಾಸಗಿ ಪ್ರದರ್ಶನ ಏರ್ಪಡಿಸಿದ್ದರು. ಕೃಷ್ಣ ಪ್ರಜ್ವಲ್ ಮಾಡಿದ ಒಂದು ಘನಂದಾರಿ ಕೆಲಸ ಎಂದರೆ ಆಪ್ತರಕ್ಷಕ ರೀಲುಗಳನ್ನು ಅಲ್ಲಿಗೆ ಕಳುಹಿಸಿದ್ದು.
ಖಾಸಗಿ ಪ್ರದರ್ಶನಕ್ಕಾಗಿ ಭಾರತಿ ಅವರು ಆತ್ಮೀಯರಾದ ನಟಿ ಲೀಲಾವತಿ, ಸರೋಜಾದೇವಿ, ತಾರಾ ಸೇರಿದಂತೆ ಹಲವರನ್ನು ಆಹ್ವಾನಿಸಿದ್ದರು. ಅಲ್ಲಿ ಸರಿಯಾದ ಆಸನ ವ್ಯವಸ್ಥೆಯಿಲ್ಲದೆ ಭಾರತಿ ವಿಷ್ಣವರ್ಧನ್ ಅವರು ಪ್ಲಾಸ್ಟಿಕ್ ಚೇರೊಂದರ ಮೇಲೆ ಕುಳಿತು 'ಆಪ್ತರಕ್ಷಕ' ಚಿತ್ರವನ್ನು ನೋಡಿ ಖುಷಿಪಟ್ಟಿದ್ದಾರೆ.


Click it and Unblock the Notifications











