ಅಕ್ರಮ ಭೂಖರೀದಿ ಐಶ್ವರ್ಯ ರೈ ಮೇಲೆ ಕೇಸು
ಮುಂಬೈ, ಜೂ. 24 : ವಿವಾದಿತ ಪ್ರದೇಶವನ್ನು ಅಕ್ರಮವಾಗಿ ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಬಚ್ಚನ್ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಗಾಳಿಯಂತ್ರ ಸ್ಥಾಪನೆಗಾಗಿ ಸುಜಲಾನ್ ಎನರ್ಜಿ ಎಂಬ ಕಂಪನಿ ವಿದ್ಯುತ್ ಉತ್ಪಾದಿಸಲು ಉತ್ತರ ಮಹಾರಾಷ್ಟ್ರದಲ್ಲಿರುವ ರೈತರ ಮತ್ತು ಹಿಂದುಳಿದ ವರ್ಗದ ಜನರ ಬೆಲೆ ಬಾಳುವ ಭೂಮಿಯನ್ನು ಸುಜಲಾನ್ ಕಂಪನಿಯ ಮುಖ್ಯಸ್ಥೆ ತುಳಸಿಬಾಯಿ ತಂತಿ ಎಂಬುವವರು ಕಡಿಮೆ ದರ ಅಂದರೆ ಕೇವಲ 7000 ರುಪಾಯಿಗೆ ಪ್ರತಿ ಎಕರೆಯಂತೆ ಖರೀದಿಸಿದ್ದರು.
ಆನಂತರ ಕಂಪನಿ ತಮಗೆ ಬೇಕಿರುವ ಸಿನಿಮಾ ತಾರೆಯರಿಗೆ, ಕ್ರಿಕೆಟ್ ಆಟಗಾರರಿಗೆ ದೊಡ್ಡ ಮೊತ್ತಕ್ಕೆ ಈ ಭೂಮಿಯನ್ನು ಮಾರಾಟ ಮಾಡಿತ್ತು. ಕಂಪನಿಯ ಈ ಕ್ರಮ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಭೂಮಿ ಖರೀದಿಸಿದವರಲ್ಲಿ ಐಶ್ವರ್ಯ ರೈ ಪ್ರಮುಖರಾಗಿದ್ದಾರೆ. ಆದರೆ, ವಿವಾದಿತ ಪ್ರದೇಶ ಎಂದು ಸರಕಾರ ಈಗಾಗಲೇ ಘೋಷಿಸಿದ್ದರೂ ಆ ಭೂಮಿಯನ್ನು ಖರೀದಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಐಶ್ವರ್ಯ ರೈ ಜೊತೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಕೂಡಾ ವಿವಾದಿತ ಭೂಮಿ ಖರೀದಿಸಿರುವ ಸುದ್ದಿಯಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಮಹಾರಾಷ್ಟ್ರ ಇಂಧನ ಸಚಿವ ವಿನಯ್ ಕೋರೆ ಆದೇಶ ನೀಡಿದ್ದಾರೆ.
(ಏಜನ್ಸೀಸ್)


Click it and Unblock the Notifications











