ರಮ್ಯಾ ಕೈಕೊಟ್ಟಿದ್ದಕ್ಕೆ ಆದ ನಷ್ಟ ಹತ್ತು ಲಕ್ಷ
ಶಂಕರೇಗೌಡರು ಗಡ್ಡನೀವಿಕೊಳ್ಳಲು ಕಾರಣ ರಮ್ಯಾ. ನಟಿ ರಮ್ಯಾ ಮನಸೋಇಚ್ಛೆ ಇಂಗ್ಲಿಷ್ನಲ್ಲಿ ಕೆಟ್ಟಾತಿಕೆಟ್ಟ ಪದಗಳಿಂದ ಜರೆದ ನಂತರ ಜಸ್ಟ್ ಮಾತ್ಮಾತಲ್ಲಿ ಹಾಡಿನ ಚಿತ್ರೀಕರಣಕ್ಕೆ ತೊಂದರೆಯಾಗಿದೆ. ಹಾಕಿದ್ದ ಸೆಟ್ಟು, ರಮ್ಯಾ ಬಳಕೆಗೆಂದು ಕ್ಯಾರವಾನ್ಗೆ ಕೊಟ್ಟಿದ್ದ ಅಡ್ವಾನ್ಸು ಎಲ್ಲವೂ ಸೇರಿ ಕನಿಷ್ಠ ಹತ್ತು ಲಕ್ಷ ರೂಪಾಯಿ ಶಂಕರೇಗೌಡರ ಜೇಬಿಗೆ ಹೊರೆಯಾಗಿದೆ.
ಸೆಲೆನಾ ಜೈಟ್ಲಿಯನ್ನು ಕರೆತಂದು ಶ್ರೀಮತಿ ಚಿತ್ರದಲ್ಲಿ ತೊಡಗುವಂತೆ ಮಾಡಿದಾಗಲೂ ರಮ್ಯಾ ಕೊಟ್ಟಂಥ ಕಾಟವನ್ನು ಅವರು ಅನುಭವಿಸಿರಲಿಲ್ಲವಂತೆ. ಸಂಭಾವನೆಯಲ್ಲಿ ರಮ್ಯಾ ಹಾಗೂ ಸೆಲೆನಾ ನಡುವಿನ ಅಂತರ ಕೇವಲ 3 ಲಕ್ಷ ರೂಪಾಯಿ. ಸೆಲೆನಾಗೆ 25ಲಕ್ಷ. ಹೊರಗಿನ ನಟಿಯರಿಗಿಂತ ನಮ್ಮಲ್ಲೇ ಇರುವ ಪ್ರತಿಭಾವಂತರಿಗೆ ಅವಕಾಶ ಕೊಡುವುದು ನಿರ್ಮಾಪಕ ಶಂಕರೇಗೌಡರ ಉದ್ದೇಶ. ಆದರೆ, ರಮ್ಯಾ ಕೊಟ್ಟ ಕಾಟವನ್ನು ನೆನಪಿಸಿಕೊಳ್ಳುವಾಗ ಅವರು ಖಿನ್ನರಾಗುತ್ತಾರೆ.
ರಮ್ಯಾ ಆತ್ಮಹತ್ಯೆ ಯತ್ನ ಸುಳ್ಳು
ನೃತ್ಯ ನಿರ್ದೇಶಕ ಹರ್ಷ ಅವರೊಟ್ಟಿಗೆ ಜಗಳವಾಡಿದ ಮೇಲೆ ಚಿತ್ರೀಕರಣ ನಡೆಯುತ್ತಿದ್ದ ಜಾಗದಲ್ಲಿ ಇರಲು ರಮ್ಯಾಗೆ ಇಷ್ಟವಿರಲಿಲ್ಲ. ಅದಕ್ಕೇ ಅವರು ಒಂದು ಮಾತ್ರೆ ನುಂಗಿದ್ದಾರೆ. ಮೈಗ್ರೇನ್ ಸಮಸ್ಯೆಗೆಂದು ಮಲ್ಯ ಆಸ್ಪತ್ರೆ ವೈದ್ಯರು ಬರೆದುಕೊಟ್ಟ ಮಾತ್ರೆ ಅದು. ಅದನ್ನು ನುಂಗಿದ ಕೆಲವೇ ನಿಮಿಷಗಳಲ್ಲಿ ಕಣ್ಣುಮುಚ್ಚಿ ಕುರ್ಚಿಗೊರಗಿದ್ದಾರೆ.
ಶಂಕರೇಗೌಡರಿಗೋ ಆತಂಕ. ಏನಾಯಿತು ಎಂದು ಗಾಬರಿಯಿಂದ ಕೇಳಲಾಗಿ, ರಮ್ಯಾ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆದೇಶ ನೀಡಿದ್ದಾರೆ. ಅಲ್ಲಿಗೆ ಹೋದರೆ ವೈದ್ಯರು ಮುಸಿಮುಸಿ ನಕ್ಕರಂತೆ. ಒಂದು ಬಾಟಲ್ ಗ್ಲೂಕೋಸ್ ಹಾಕಿಸೋಣ; ಎಲ್ಲಾ ಸರಿ ಹೋಗುತ್ತೆ ಅಂತ ಶಂಕರೇಗೌಡರು ಹೇಳಿದ್ದೇ ರಮ್ಯಾ ದಿಗ್ಗನೆದ್ದು ಕೂತಿದ್ದಾರೆ. ರಮ್ಯಾ ಆಡಿದ್ದು ನಾಟಕ ಎಂಬುದಕ್ಕೆ ಇವೆಲ್ಲವನ್ನೂ ಶಂಕರೇಗೌಡರು ಉದಾಹರಣೆಯಾಗಿ ನೀಡಿದರು. ಆಮೇಲೆ ಅವರು ಐಪಿಸಿ ಸೆಕ್ಷನ್ 300 ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ನಿರತರಾದರು.
ಶ್ರೀಮತಿ, ಅದಾದ ಮೇಲೆ ಜಸ್ಟ್ ಮಾತ್ಮಾತಲ್ಲಿ, ನಂತರ ಐಪಿಸಿ ಸೆಕ್ಷನ್ 300, ತದ ನಂತರ ಈಶ್ವರ್... ಹೀಗೆ ಶಂಕರೇಗೌಡರು ತಮ್ಮ ನಿರ್ಮಾಣದ ಚಿತ್ರಗಳನ್ನು ಒಂದಾದ ಮೇಲೊಂದರಂತೆ ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ. ಮಧ್ಯೆ ರಮ್ಯಾ ಕೊಟ್ಟುಹೋದ ತಲೆನೋವು ಅವರನ್ನು ಈಗಲೂ ಕಾಡುತ್ತಿರುವುದೂ ಸುಳ್ಳಲ್ಲ.


Click it and Unblock the Notifications










