ಗಾಂಧಿನಗರದ ಸಹವಾಸ ಸಾಕಪ್ಪ ಸಾಕು ಎಂದ ಪ್ರೇಮ್
ತಮ್ಮ 'ಜೋಗಯ್ಯ' ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತುಗಳ ಬಗ್ಗೆ ನಿರ್ದೇಶಕ ಪ್ರೇಮ್ ವಿಚಲಿತರಾಗಿದ್ದಾರೆ. ಗಾಂಧಿನಗರದ ಸಹವಾಸ ಸಾಕಪ್ಪಾ ಸಾಕು. ಗಾಂಧಿನಗರದಿಂದ ದೂರ ಹೋಗಿ ಹಿಂದಿನೋ, ತೆಲುಗೋ ಚಿತ್ರಗಳನ್ನು ಮಾಡಿಕೊಂಡಿರುತ್ತೇನೆ ಎಂದಿದ್ದಾರೆ.
ಕೆಲವು ಮಾಧ್ಯಮಗಳು ಹಾಗೂ ಗಾಂಧಿನಗರದಲ್ಲಿ ಪ್ರೇಮ್ ಬಗ್ಗೆ ನೆಗಟೀವ್ ಕಾಮೆಂಟ್ಸ್ ಕೇಳಿಬಂದಿದ್ದವು. ಪ್ರೇಮ್ ಸುಳ್ಳುಗಾರ ಎಂಬಂತೆ ಬಿಂಬಿಸಲಾಗಿತ್ತು. ಇದರಿಂದ ಪ್ರೇಮ್ ಮನಸ್ಸಿಗೆ ತೀವ್ರ ನೋವಾಗಿದೆಯಂತೆ. ನಾನು ಯಾವುದಾದರೂ ಬೇರೆ ಭಾಷೆಯಲ್ಲಿ ಇದೇ ಚಿತ್ರ ತೆಗೆದಿದ್ದರೆ ಈ ರೀತಿಯ ಮಾತುಗಳು ಕೇಳಿ ಬರುತ್ತಿದ್ದವೇ ನೀವೇ ಹೇಳಿ ಎಂದು ಬೇಸರಿಸಿಕೊಂಡಿದ್ದಾರೆ.
"ಯಾವುದೋ ಗೂಡಂಗಡಿ ಮುಂದೆ ಕುಳಿತು ಮೋಟು ಬೀಡಿ ಸೇದುವವರ ಮಾತನ್ನೇ ಕೇಳಿಸಿಕೊಂಡು ಅದನ್ನೇ ದೊಡ್ಡ ಸುದ್ದಿ ಮಾಡುತ್ತಾರಲ್ಲಾ. ನನಗೂ ಗಾಂಧಿನಗರಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಯಾರಿಗೂ ಸಲ್ಯೂಟು ಹೊಡೆಯಲ್ಲ" ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.
ನಮ್ಮಲ್ಲಿ ಕಾಲೆಳೆಯುವವ ಸಂಖ್ಯೆ ಜಾಸ್ತಿ. ಜೋಗಯ್ಯನನ್ನು ನಾನು ಬೇರೆ ಭಾಷೆಯಲ್ಲಿ ಮಾಡಿದ್ದಿದ್ದರೆ ದೊಡ್ಡ ಸುದ್ದಿಯಾಗುತ್ತಿತ್ತು. ಕೆಲವು ನಿರ್ದೇಶಕ, ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಅದಕ್ಕೆ ಕಾರಣ ಇಂತಹ ಕುಹಕಿಗಳು. ಜೋಗಯ್ಯ ಚಿತ್ರದಲ್ಲಿ ಒಳ್ಳೆಯ ಅಂಶಗಳೇ ಇಲ್ಲವಾ. ಈ ರೀತಿಯ ಚಿತ್ರ ಈ ಹಿಂದೆ ಯಾರಾದರೂ ಮಾಡಿದ್ದರಾ ಹೇಳಿ ಎಂದು ಮರುಪ್ರಶ್ನೆ ಎಸೆದಿದ್ದಾರೆ. (ಏಜೆನ್ಸೀಸ್)


Click it and Unblock the Notifications











