ಕ್ರೇಜಿಸ್ಟಾರ್ ರವಿಚಂದ್ರನ್ ರಾಜಕೀಯ ಎಂಟ್ರಿ ನಿಜವೇ?
ಕನ್ನಡ ಸಿನಿಮಾ ತಾರೆಗಳು ಒಬ್ಬೊಬ್ಬರೇ ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ರಮ್ಯಾ, ಪೂಜಾಗಾಂಧಿ, ಭಾವನಾ, ಮಾಳವಿಕಾ, ಜಗ್ಗೇಶ್ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ರಾಜಕೀಯಕ್ಕೆ ಧುಮುಕುತ್ತಾರಾ? ಎಂಬ ಪ್ರಶ್ನೆ ಅವರ ಅಭಿಮಾನಿಗಳು ಹಾಗೂ ಚಿತ್ರೋದ್ಯಮದಲ್ಲಿ ಸಖತ್ ಗದ್ದಲ ಎಬ್ಬಿಸಿದೆ.
ಈಗ ರವಿಚಂದ್ರನ್ ಸಾಕಷ್ಟು ಮಾಗಿದ ಕಲಾವಿದ. ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಸೂಕ್ತ ಸಮಯ. ಆದರೆ ರವಿಮಾಮ ಮಾತ್ರ ರಾಜಕೀಯ ಒಲ್ಲೆ ಎನ್ನುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 'ನರಸಿಂಹ' ಚಿತ್ರದಲ್ಲಿ ರವಿಚಂದ್ರನ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಬಾಕ್ಸಾಫೀಸನ್ನು 'ನರಸಿಂಹ' ಚಂಡಾಡಿದ್ದಾನೆ.
ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದಿರುವ ರವಿಚಂದ್ರನ್, "ಮೂಗಿನ ನೇರಕ್ಕೆ ಮಾತನಾಡುವವರು ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬರಲು ಸಾಧ್ಯವಿಲ್ಲ. ಹಾಗೆಂದು ತಾವು ತಮ್ಮ ನೈಜ ಸ್ವಭಾವವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಮಾರ್ಮಿಕವಾಗಿ ನುಡಿದ್ದಾರೆ.
ಯಾರೋ ಹೇಳಿದ್ದನ್ನು ಕೇಳುವ ಸ್ವಭಾವ ನನ್ನದಲ್ಲ. ನನಗೆ ಒಳ್ಳೆಯದು ಅನ್ನಿಸಿದ್ದನ್ನು ಮಾಡವ ಸ್ವಭಾವ ನನ್ನದು. ರಾಜಕೀಯದಲ್ಲಿ ಇವೆಲ್ಲಾ ಸಾಧ್ಯವೆ? ಆರೋಪ ಪ್ರತ್ಯಾರೋಪಗಳಲ್ಲೇ ಕಾಲ ಕಳೆದುಹೋಗುತ್ತದೆ. ಸಮಯ ವ್ಯರ್ಥವಾಗುತ್ತದಷ್ಟೇ ಹೊರತು ನಯಾಪೈಸೆ ಪ್ರಯೋಜನವಿಲ್ಲ.
ಅದಕ್ಕಾಗಿಯೇ ನನಗೂ ರಾಜಕೀಯಕ್ಕೂ ಸರಿಬರಲ್ಲ. ನನ್ನನ್ನು ಇಷ್ಟು ದೊಡ್ಡವನನ್ನಾಗಿ ಮಾಡಿದ ಚಿತ್ರರಂಗದಲ್ಲೇ ಬೆಳೆಯುತ್ತೇನೆ. ರಾಜಕೀಯ ಇವೆಲ್ಲಾ ನನಗೆ ಆಗಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಉಳಿದ ತಾರೆಗಳು ರವಿಚಂದ್ರನ್ ಅವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. (ಒನ್ಇಂಡಿಯಾ ಕನ್ನಡ)


Click it and Unblock the Notifications











