ಉಪ್ಪಿಗಿಂತ ರುಚಿ ಬೇರೆ ಇಲ್ಲ: ರಾಕ್ ಲೈನ್ ವೆಂಕಟೇಶ್
ಉಪೇಂದ್ರ ಆಕ್ಷನ್, ಕಟ್ ಹೇಳುತ್ತಿರುವ ಸೂಪರ್ ಚಿತ್ರ ಯು ಟರ್ನ್ ತೆಗೆದುಕೊಂಡಿದೆ. "ನಾನು ಉಪೇಂದ್ರ ಚೆನ್ನಾಗಿದ್ದೇವೆ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ . ಸೂಪರ್ ಚಿತ್ರದಿಂದ ನಾನು ಹೊರಬಂದಿಲ್ಲ" ಎಂದು ರಾಕ್ ಲೈನ್ ಸ್ಪಷ್ಟಪಡಿಸಿದ್ದಾರೆ.
ಲಂಡನ್ ನಲ್ಲಿ ಚಿತ್ರೀಕರಣ ನಡೆಸುವ ಬದಲಾಗಿ ಚಿತ್ರದ ನಾಯಕ ನಟರೂ ಆಗಿರುವ ಉಪೇಂದ್ರ ಹಾಂಗ್ ಕಾಂಗ್ ನಲ್ಲಿದ್ದಾರೆ. ಇದಕ್ಕೆ ಕಾರಣಗಳು ಬೇರೆ ಇವೆ ಎನ್ನುತ್ತಾರೆ ಉಪೇಂದ್ರ. ಹಾಡೊಂದರ ಚಿತ್ರೀಕರಣಕ್ಕಾಗಿ ಲಂಡನ್ ಗೆ ತೆರಳಬೇಕಾಗಿತ್ತು. ಆದರೆ ವೀಸಾ ಸಮಸ್ಯೆಯಿಂದ ಚಿತ್ರದ ತಂತ್ರಜ್ಞರು ಲಂಡನ್ ಗೆ ಬರಲು ಸಾಧ್ಯವಾಗಲಿಲ್ಲ. ಇದನ್ನೇ ತಪ್ಪಾಗಿ ಅರ್ಥೈಸಲಾಗಿತ್ತು ಎಂದು ಉಪ್ಪಿ ಹೇಳಿದ್ದಾರೆ.
ಚಿತ್ರದ ಫ್ಯಾಷನ್ ಡಿಸೈನರ್, ಕಾರ್ಯಕಾರಿ ನಿರ್ಮಾಪಕ, ಸಹಾಯಕ ನಿರ್ದೇಶಕ ಹಾಗೂ ಛಾಯಾಗ್ರಾಹಕ ಸೇರಿದಂತೆ ಸೂಪರ್ ಚಿತ್ರತಂಡ ಒಟ್ಟು 14 ಮಂದಿ ಹೊರಬಿದ್ದಿದ್ದಾರೆ ಎಂಬುದು ಕೇವಲ ವದಂತಿಯಷ್ಟೆ. ಈ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ಒಟ್ಟು 40 ಮಂದಿ ಯಲ್ಲಿ ಕೇವಲ 20 ಮಂದಿಗೆ ಲಂಡನ್ ವೀಸಾ ಸಿಕ್ಕಿದೆ. ಉಳಿದವರ ವೀಸಾಗಾಗಿ ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ ಉಪ್ಪಿ.
ಕೆಲವರು ಚಿತ್ರತಂಡದಿಂದ ಹೊರಬಿದ್ದದ್ದು ನಿಜ. ಇದು ಮೆಗಾ ಬಜೆಟ್ ಚಿತ್ರವಾದ ಕಾರಣ ಸಹಜವಾಗಿ ಸಂಭಾವನೆ ಹೆಚ್ಚಾಗಿ ನಿರೀಕ್ಷಿಸುತ್ತಾರೆ. ನಿರ್ದೇಶಕನಿಗೆ ಕೊಟ್ಟಷ್ಟೇ ಹಣ ಸಹಾಯಕ ನಿರ್ದೇಶಕರಿಗೂ ಕೊಡಲಾಗುತ್ತಿದೆ. ಸಂಭಾವನೆ ವಿಚಾರವಾಗಿ ಕೆಲವರಿಗೆ ತೃಪ್ತಿಯಾಗಿಲ್ಲ. ಅಂತಹವರು ಚಿತ್ರತಂಡದಿಂದ ಹೊರಬಿದ್ದಾರೆ ಎಂದು ರಿಯಲ್ ಸ್ಟಾರ್ ವಿವರ ನೀಡಿದ್ದಾರೆ.
"ಉಪ್ಪಿ ಮತ್ತು ನಾನು ಬೇರೆಯಾಗಿರುವ ಸುದ್ದಿ ಕೇಳಿದೆ. ನಗು ತಡೆದುಕೊಳ್ಳಲು ಆಗಲಿಲ್ಲ. ಚಿತ್ರದಲ್ಲಿ 14 ಮಂದಿ ಪ್ರಮುಖ ವ್ಯಕ್ತಿಗಳಿದ್ದಾರೆ. ಒಮ್ಮೆಲೆ ಇವರೆಲ್ಲಾ ಚಿತ್ರವನ್ನು ಬಿಟ್ಟು ಹೋಗಲು ಸಾಧ್ಯವೆ? ಏನೋ ಒಂಚೂರು ಮನಸ್ತಾಪ ಬಂದ ಕಾರಣ ಸಹಾಯಕ ನಿರ್ದೇಶಕನೊಬ್ಬ ಪ್ರಾಜೆಕ್ಟ್ ನಿಂದ ಹೊರಬಿದ್ದಿದ್ದಾನೆ.ಅವನೇ ಹೀಗೆಲ್ಲಾ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದು" ಎಂದು ರಾಕ್ ಲೈನ್ ಆಪಾದಿಸಿದ್ದಾರೆ.


Click it and Unblock the Notifications











