'ಆಪ್ತಮಿತ್ರ 3' ವಿಷ್ಣು ಸ್ಥಾನ ತುಂಬಲಿರುವ ಸುದೀಪ್
'ಆಪ್ತಮಿತ್ರ' ಹಾಗೂ 'ಆಪ್ತರಕ್ಷಕ' ಚಿತ್ರಗಳಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಅಭಿನಯಿಸಿದ್ದರು. ಈಗ ಭಾಗ 3ನ್ನು ಕಿಚ್ಚ ಸುದೀಪ್ ಜೊತೆ ಮಾಡುವುದಾಗಿ ದ್ವಾರಕೀಶ್ ಹೇಳಿಕೊಂಡಿದ್ದಾರೆ. ಆದರೆ ಇನ್ನೂ ಆ ಚಿತ್ರದ ರೂಪರೇಷೆಗಳು ಶೈಶಾವಸ್ಥೆಯಲ್ಲಿವೆ.
ಅವೆಲ್ಲವೂ ಸಾಕಾರವಾಗಬೇಕಾದರೆ ಇನ್ನು ಬಹಳಷ್ಟು ಸಮಯಬೇಕಾಗಬಹುದು. ಬಹುಶಃ ಭಾಗ 3ರನ್ನು ಪಿ ವಾಸು ಅವರೇ ನಿರ್ದೇಶಿಸುವ ಸಾಧ್ಯತೆಗಳಿವೆ. ತಾಂತ್ರಿಕ ಬಳಗ, ಕಲಾವಿದರ ಆಯ್ಕೆ ಇವೆಲ್ಲವೂ ಇನ್ನೂ ತೀರ್ಮಾನವಾಗಿಲ್ಲ.
ಸದ್ಯಕ್ಕೆ ದ್ವಾರಕೀಶ್ ಅವರ ಪುತ್ರ ಯೋಗೀಶ್ ಅವರು ಸುದೀಪ್ ಅವರ ಪರ್ಸನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುದೀಪ್ ಅವರೊಂದಿಗೆ ಚಿತ್ರ ಮಾಡುವುದು ಅಂತಹ ದೊಡ್ಡ ಸಮಸ್ಯೆಯೂ ಆಗಲಾರದು. ಈ ಚಿತ್ರ ದ್ವಾರಕೀಶ್ ಅವರ ಜೀವನದಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಿಸುವ ಎಲ್ಲಾ ಸಾಧ್ಯತೆಗಳೂ ಇವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ದ್ವಾರಕೀಶ್ ಅವರ 'ಆಪ್ತಮಿತ್ರ 3'ರ ಕನಸು ಸಾಕಾರವಾಗಬೇಕಾದರೆ ಇನ್ನೂ ಸ್ವಲ್ಪ ಸಮಯ ಕಾಯಲೇಬೇಕು. ಸುದೀಪ್ ಅವರು 'ಈಗ' ಚಿತ್ರದ ಮೂಲಕ ತೆಲುಗು, ತಮಿಳು ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ. ಇನ್ನು 'ಆಪ್ತಮಿತ್ರ 3' ಚಿತ್ರದಲ್ಲಿ ಅಭಿನಯಿಸಿದರಂತೂ ದ್ವಾರಕೀಶ್ ಪಾಲಿಗೆ ಬಂಪರ್ ಲಾಟರಿ ಹೊಡೆದಂತೆಯೇ ಎನ್ನುತ್ತಿದೆ ಚಿತ್ರೋದ್ಯಮ.
ಸದ್ಯಕ್ಕೆ ಸುದೀಪ್ ಅವರ ಕೈಯಲ್ಲಿ ಕೋಟಿಗೊಬ್ಬ 2, ಕಿಕ್, ನಿರ್ಣಯ, ಲಕ್ಷ್ಮಿ ನರಸಿಂಹ ಚಿತ್ರಗಳಿವೆ. ಇವೆಲ್ಲವೂ ಮುಗಿಯಬೇಕಾದರೆ 2015ರ ತನಕ ಕಾಯಲೇಬೇಕು. ಆ ಬಳಿಕವಷ್ಟೇ 'ಆಪ್ತಮಿತ್ರ 3' ಮಾತು. ವಿಷ್ಣುವರ್ಧನ್ ಪಾತ್ರವನ್ನು ಸುದೀಪ್ ತುಂಬುತ್ತಾರಾ? ನೀವೇನಂತೀರಾ? (ಒನ್ಇಂಡಿಯಾ ಕನ್ನಡ)


Click it and Unblock the Notifications












