ಖ್ಯಾತ ನಿರ್ದೇಶಕನಿಗೆ ಚಾರ್ಮಿ ಕೌರ್ ಕಪಾಳಮೋಕ್ಷ
ಇದೇ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುತ್ತಿರುವ 'ಯಾರೇ ಕೂಗಾಡಲಿ' ಚಿತ್ರದಲ್ಲಿ ಐಟಂ ಡಾನ್ಸ್ ಮಾಡಿರುವ ಚಾರ್ಮಿ ಕೌರ್ ಖ್ಯಾತ ನಿರ್ದೇಶಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ. ತೆಲುಗು ಚಿತ್ರರಂಗದ ಮೂಲಗಳ ಪ್ರಕಾರ, ನಿರ್ದೇಶಕನೊಬ್ಬನ ಕೆನ್ನೆ ಚಾರ್ಮಿ ಕೆಂಪಗೆ ಮಾಡಿದ್ದಾರೆ ಎನ್ನಲಾಗಿದೆ.
ಈ ಖ್ಯಾತ ನಿರ್ದೇಶಕನನ್ನು ಭೇಟಿ ಮಾಡಲು ಅವರ ಕಚೇರಿಗೆ ಚಾರ್ಮಿ ಹೋಗಿದ್ದರಂತೆ. ಆ ನಿರ್ದೇಶಕನೋ ಗುಂಡಿನ ಗಮ್ಮತ್ತಿನಲ್ಲಿ ಮೈಮರೆತಿದ್ದ. ಮೊದಲೇ ಕಿಕ್ ನಲ್ಲಿ ಕುದುರೆ ಹತ್ತಿದ್ದ ಈತ ಚಾರ್ಮಿ ಬಳಿ ಅದೂ ಇದೂ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ.
ಕೂಡಲೆ ಚಾರ್ಮಿ ಈತನ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ. ಈ ನಿರ್ದೇಶಕ ಬೇರಾರು ಅಲ್ಲ ಮೆಗಾಸ್ಟಾರ್ ಚಿರಂಜೀವಿ 'ತಮ್ಮುಡು' ಪವನ್ ಕಲ್ಯಾಣ್ ಅವರ 'ಗಬ್ಬರ್ ಸಿಂಗ್' ಚಿತ್ರವನ್ನು ನಿರ್ದೇಶಿಸಿದ ಹರೀಶ್ ಶಂಕರ್ ಎನ್ನಲಾಗಿದೆ. 'ಗಬ್ಬರ್ ಸಿಂಗ್' ಚಿತ್ರ ತೆಲುಗು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿರುವುದು ಗೊತ್ತೇ ಇದೆ.
ಸದ್ಯಕ್ಕೆ ಈತ ಜೂ.ಎನ್ಟಿಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಾರ್ಮಿ ಈತನಿಗೆ ಕಪಾಳಮೋಕ್ಷ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರೋದ್ಯಮದ ತೂಕದ ವ್ಯಕ್ತಿಗಳೆಲ್ಲಾ ಬಂದು ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಲು ನೋಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಪಾಳಮೋಕ್ಷ ಸುದ್ದಿ ಮಾಧ್ಯಗಳ ಕಿವಿಗೆ ಬಿದ್ದಿದೆ.
ಅಂದಹಾಗೆ ಚಾರ್ಮಿ ಕೌರ್ ಇತ್ತೀಚೆಗೆ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದಲ್ಲಿ ಮಸ್ತ್ ಐಟಂ ಸಾಂಗ್ ಮಾಡಿದ್ದರು. ಇದಕ್ಕೂ ಮುನ್ನ 'ಲವಕುಶ' ಚಿತ್ರದಲ್ಲೂ ಅಭಿನಯಿಸಿದ್ದರು. ಈಗ 'ಯಾರೇ ಕೂಗಾಡಲಿ' ಮೂಲಕ ಮತ್ತೊಮ್ಮೆ ತಮ್ಮ ಸೊಂಟ ಬಳುಕಿಸಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.


Click it and Unblock the Notifications











