ನಿರ್ದೇಶಕರಿಗೆ ಚಪ್ಪಲಿಯಿಂದ ಬಾರಿಸಿದ ನಯನಕೃಷ್ಣ
ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಲ್ಲೂ ಒಬ್ಬರಾಗಿರುವ ಋಷಿ ಅವರನ್ನು ನಾಯಕಿ ನಯನಕೃಷ್ಣ ಅವರು ಮತ್ತು ಅವರ ಜೊತೆ ಬಂದಿದ್ದ ಯಶಸ್ವಿನಿ ಮಹಿಳಾ ಸಂಘಟನೆಯ ಎಂಟ್ಹತ್ತು ಮಹಿಳೆಯರು, ನಾಯಕ ನಟ ಧನುಷ್ ಮತ್ತು ಪತ್ರಕರ್ತರೆದುರೇ ಥಳಿಸಿದ್ದಾರೆ. ನಯನಕೃಷ್ಣ ಅವರು ತುಂಬಿದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಿಗೆ ಕಪಾಳಮೋಕ್ಷ ಕೂಡ ಮಾಡಿದ್ದಾರೆ.
ನಿರ್ದೇಶಕ ಋಷಿ ಅವರು ತಮಗೆ 8 ಲಕ್ಷ ರು. ಕೊಡಬೇಕಾಗಿತ್ತು. ಕೊಡದೆ ಅವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ನಯನಕೃಷ್ಣ ಅವರು ತಾಳ್ಮೆ ಕಳೆದುಕೊಂಡು ಈ ಹಗರಣಕ್ಕೆ ಕಾರಣರಾಗಿದ್ದಾರೆ. ಹಣದ ಸಂಕಷ್ಟಕ್ಕೆ ಋಷಿ ಸಿಲುಕಿದ್ದಾಗ ನಯನಕೃಷ್ಣ ಅವರು ನಿರ್ದೇಶಕರಿಗೆ 8 ಲಕ್ಷ ರು. ನೀಡಿದ್ದರು. ಅದನ್ನು ವಾಪಸ್ ಪಡೆಯಲು ಹಿಂದೆಮ್ಮೆ ಪೊಲೀಸ್ ಠಾಣೆಗೆ ಕೂಡ ದೂರು ನೀಡಿದ್ದರು.
ಆ ಹಣ ಬಡ್ಡಿ ಸಮೇತ ನೀಡುವುದಾಗಿ ನಿರ್ದೇಶಕ ಋಷಿ ಅವರು ನಯನಕೃಷ್ಣಗೆ ವಾಗ್ದಾನ ನೀಡಿದ್ದರು. ಚಿತ್ರೀಕರಣ, ಡಬ್ಬಿಂಗ್ ಮುಗಿದು ಚಿತ್ರ ಸೆನ್ಸಾರ್ ಮಂಡಳಿ ಮುಂದಿದೆ. ಇಂಥ ಸಮಯದಲ್ಲಿ ಮಹಿಳಾ ಸಂಘಟನೆಯ ಮಹಿಳಾಮಣಿಗಳೊಂದಿಗೆ ಸುದ್ದಿಗೋಷ್ಠಿಗೆ ನುಗ್ಗಿದ ನಯನಕೃಷ್ಣ ಗಳಗಳನೆ ಕಣ್ಣೀರಿಟ್ಟು ನಿರ್ದೇಶಕರ ಮೇಲೆ ಹಲ್ಲೆ ಮಾಡಿದ್ದಾರೆ. ಋಷಿ ತಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಹಿಂದೆ ಋಷಿ ಕಷ್ಟದಲ್ಲಿದ್ದಾಗ 8 ಲಕ್ಷ ರು. ನೀಡಿದ್ದೆ. ಹಣವನ್ನಾದರೂ ನೀಡಿ ಇಲ್ಲದಿದ್ದರೆ ಡಿಸ್ಟ್ರಿಬ್ಯೂಷನ್ನಾದರೂ ನೀಡಿ ಎಂದು ಕೇಳಿದರೆ, ಅಸಭ್ಯವಾಗಿ ನಿರ್ದೇಶಕರು ಮಾತನಾಡುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕೊಡ್ತೀನಂತ ಹೇಳ್ತಾರೆ. ಕೇಳಿದ್ರೆ ಕೈ ಎತ್ತುತ್ತಿದ್ದಾರೆ. ನನಗೆ ನ್ಯಾಯ ದೊರಕಿಸಿಕೊಡಿ ಎಂದು ನಯನಕೃಷ್ಣ ಅವರು ಕಣ್ಣೀರುಗರೆದಿದ್ದಾರೆ.
ಮಹಿಳಾ ಸಂಘದ ಮಹಿಳೆಯರು ಹೇಳುವುದೇನೆಂದರೆ, ನಯನಕೃಷ್ಣ ಅವರು ಋಷಿಗೆ ತಮ್ಮ ಮನೆಮಠ ಅಡ ಇಟ್ಟು ಹಣ ನೀಡಿದ್ದಾರೆ. ಸಾಲಗಾರರಿಗೆ ಹಣ ಹಿಂತಿರುಗಿಸಲಾಗದೆ ಅವರು ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಕೂಡ ತಲುಪಿದ್ದಾರೆ. ಹಣ ಕೇಳಿದರೆ ಅಸಹ್ಯಕರವಾಗಿ ಋಷಿ ಮಾತನಾಡುತ್ತಾರೆ. ಹಣ ಹಿಂತಿರುಗಿಸುವ ಮಾತನ್ನೂ ಹೇಳುತ್ತಿಲ್ಲ. ಅಂಥವರು ಇನ್ನೆಂದೂ ನಿರ್ದೇಶನಕ್ಕೆ ಕೈಹಾಕಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಯನಕೃಷ್ಣಾ ಮತ್ತು ಮಹಿಳೆಯರ ಹಠಾತ್ ದಾಳಿಯಿಂದ ದಂಗಾದ ನಿರ್ದೇಶಕ ಋಷಿ ಮಹಿಳೆಯರಿಂದ ಪಾರಾಗಲು ಹರಸಾಹಸಪಡಬೇಕಾಯಿತು. ನಂತರ ಅಲ್ಲಿಂದ ನೇರವಾಗಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತೆರಳಿದ ಅವರು ನಯನಕೃಷ್ಣಾ ಮತ್ತು ಇತರ ಮಹಿಳೆಯ ಮೇಲೆ ದೂರು ನೀಡಿದ್ದಾರೆ.


Click it and Unblock the Notifications












