ಕ್ರೇಜಿಲೋಕ ಬಿಡುಗಡೆ ನಂತರ ಕವಿತಾ ಹೇಳಿದ್ದೇನು?
ಕವಿತಾ ಲಂಕೇಶ್ ನಿರ್ದೇಶನದ ಕ್ರೇಜಿಲೋಕ ಚಿತ್ರವನ್ನು ಜನರು ಅಷ್ಟೇನೂ ಮೆಚ್ಚಕೊಂಡಿಲ್ಲ. ಈ ಮೊದಲು ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದ ಕವಿತಾ ಲಂಕೇಶ್ ಚಿತ್ರ 'ಕ್ರೇಜಿಲೋಕದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿತ್ತು. ಆದರೆ ಅದೇನಾಯ್ತೋ.., ಕವಿತಾ ಚಿತ್ರ ಸೂತ್ರ ಹರಿದ ಗಾಳಿಪಟದಂತಾಯ್ತು. ಅಂದುಕೊಂಡಷ್ಟು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲೇಇಲ್ಲ.
ಇದಕ್ಕೆ ನಿರ್ದೇಶಕಿ ಕವಿತಾ ಲಂಕೇಶ್ ಕೊಟ್ಟಿರುವ ಕಾರಣ ತುಂಬಾ ಆಸಕ್ತಿಕರವಾಗಿದೆ. "ಕೇವಲ ಹಿಂದಿ ಚಿತ್ರಗಳೇ ತೆರೆಕಾಣುವ ಕೆಜಿ ರಸ್ತೆಯ ಅಭಿನಯ ಚಿತ್ರಮಂದಿರವನ್ನು ಪ್ರಮುಖ ಚಿತ್ರಮಂದಿರವಾಗಿ ಆಯ್ಕೆ ಮಾಡಿದ್ದೇ ದೊಡ್ಡ ಯಡವಟ್ಟಾಯ್ತು. ತುಂಬಾ ಮಂದಿಗೆ ಚಿತ್ರ ಬಿಡುಗಡೆಯಾಗಿದ್ದೇ ಗೊತ್ತಾಗಿಲ್ಲ. ಅಲ್ಲಿ ಕನ್ನಡ ಚಿತ್ರವಿದೆ ಎಂಬುದನ್ನು ಜನರು ನಂಬಲಿಲ್ಲ.
ಹುಡುಕಿಕೊಂಡು ಹೋಗಿ ಚಿತ್ರ ನೋಡುವ ಆಸಕ್ತಿಯನ್ನು ಮೊದಲ ದಿನ ಪ್ರೇಕ್ಷಕರು ತೋರಿಸಲಿಲ್ಲ. ಹೀಗಾಗಿ ನಮ್ಮ ಕ್ರೇಜಿಲೋಕ ಚಿತ್ರಕ್ಕೆ ಸಿಗಬೇಕಾದ ಭರ್ಜರಿ ಓಪನಿಂಗ್ ಮಿಸ್ ಆಗಿದೆ. ಮೊದಲ ವಾರದ ನಂತರ ಅನುಪಮಾ ಥಿಯೇಟರಿಗೆ ಚಿತ್ರ ಶಿಫ್ಟ್ ಆದಾಗ ಅದು ಗೊತ್ತಿಲ್ಲದೇ ಜನರು ಪರದಾಡುವಂತಾಯ್ತು. ಹೀಗಾಗಿ ಎರಡನೇ ವಾರ ಬರಬೇಕಾದ ಕಲೆಕ್ಷನ್ ಬರಲಿಲ್ಲ" ಎಂದಿದ್ದಾರೆ.
ಮೊದಲ ದಿನ ಅಭಿನಯ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಪಾತ್ರಧಾರಿಗಳ ಮುಖವೇ ಸರಿಯಾಗಿ ಕಾಣುವುದಿಲ್ಲ ಎಂದು ಗೊಣಗಿದ್ದು ಕವಿತಾ ಕಿವಿಗೆ ಬಿದ್ದಿದೆ. ಅದಕ್ಕೆ ಅವರು "ಕ್ಯಾಮರಾ ಕೆಲಸದಲ್ಲಿ ಏನೋ ತೊಂದರೆ ಇರಲಿಲ್ಲ, ಅದು 'ಯುಎಫ್ ಒ' ಪ್ರದರ್ಶನ ವ್ಯವಸ್ಥೆಯ ದೋಷ. ಫಸ್ಟ್ ಕಾಫಿ ಬಂದು ನಾವು ನೋಡಿದಾಗ ಚಿತ್ರ ಚೆನ್ನಾಗಿಯೇ ಬಂದಿತ್ತು.
ಆದರೆ ಯುಎಫ ಒ ಪ್ರದರ್ಶನದಲ್ಲಿ ಆದ ತಾಂತ್ರಿಕ ತೊಂದರೆಯಿಂದಾಗಿ ಮೊದಲ ದಿನ ಆಗಮಿಸಿದ್ದ ಪ್ರೇಕ್ಷಕರು ಕಿರಿಕಿರಿ ಅನುಭವಿಸುವಂತಾಯ್ತು. ಚಿತ್ರ ನಿರ್ದೇಶನ ಮಾಡುವಾಗಲಷ್ಟೇ ನಾವು ನಮ್ಮ ಚಿತ್ರದ ಮೇಲೆ ಹಿಡಿತ ಹೊಂದಿರುತ್ತೇವೆ. ಆದರೆ ಅದು ಪೂರ್ಣಗೊಂಣಡ ಮೇಲೆ ಅದರ ಮೇಲೆ ನಮಗೆ ಹತೋಟಿಯೇ ಇರುವುದಿಲ್ಲ. ಆಗ ಹೀಗೆ ಏನೋನೋ ಆಗುತ್ತವೆ" ಎಂದಿದ್ದಾರೆ.
ಆಶ್ಚರ್ಯದ ಸಂಗತಿ ಎಂದರೆ ಕ್ರೇಜಿಲೋಕದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಇದ್ದರೂ ಚಿತ್ರಕ್ಕೆ 'ದಿ ಬೆಸ್ಟ್' ಎನ್ನುವ ಆರಂಭ ಸಿಗಲಿಲ್ಲ. ಪ್ರತಿಭಾವಂತ ನಿರ್ದೇಶಕಿ ಹಣೆಪಟ್ಟಿ ಹೊತ್ತಿದ್ದ ಕವಿತಾ ಲಂಕೇಶ್ ಚಿತ್ರವೆನ್ನುವ ಕಾರಣಕ್ಕೂ ಚಿತ್ರಮಂದಿರದಲ್ಲಿ 'ಹೌಸ್ ಫುಲ್' ಬೋರ್ಡು ಕಾಣಿಸಲಿಲ್ಲ. ಒಟ್ಟಿನಲ್ಲಿ ಕ್ರೇಜಿಲೋಕದ ಪ್ರಯಾಣ ಸದ್ಯಕ್ಕೆ ನಿರಾಶಾದಾಯಕ ಎನ್ನಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











