'ರಾಜ ವಿಷ್ಣುವರ್ಧನ'ನಿಗಾಗಿ 'ಶಾಂತಲ' ಆಗ್ತಾರಾ ದೀಪಿಕಾ ಪಡುಕೋಣೆ?
ದೀಪಿಕಾ ಪಡುಕೋಣೆ ಕರ್ನಾಟಕದ ಕರಾವಳಿ ಕುವರಿ. ಮೊದಲು ಕನ್ನಡದಲ್ಲಿ ಸಿನಿ ಜರ್ನಿ ಶುರು ಮಾಡಿದ ದೀಪಿಕಾ, ನೋಡು ನೋಡುತ್ತಲೇ ಬಾಲಿವುಡ್ ಸಿನಿಮಾ ರಂಗದ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ರು.
ಕನ್ನಡದಿಂದ ಕಾಣೆಯಾಗಿದ್ದ ದೀಪಿಕಾ ಪಡುಕೋಣೆಯನ್ನ ಮತ್ತೆ ಈಗ ಸ್ಯಾಂಡಲ್ ವುಡ್ ಗೆ ಕರೆತರುವ ತಯಾರಿಗಳು ನಡೆಯುತ್ತಲೇ ಇದ್ದರೂ ಸಾಧ್ಯವಾಗಲಿಲ್ಲ. ಹೀಗಿರುವಾಗ, ದೀಪಿಕಾ ಪಡುಕೋಣೆಯನ್ನ ಚಂದನವನದಲ್ಲಿ ಕುಣಿಸುವ ಕನಸು ಕಾಣುತ್ತಿದ್ದಾರೆ ಸ್ಟಾರ್ ನಿರ್ದೇಶಕರು.
ಹೌದು, ಕಿಚ್ಚ ಸುದೀಪ್ ಅವರ ಜೋಡಿಯಾಗಿಸಿ ಬೆಳ್ಳಿತೆರೆಯ ಮೇಲೆ ಇವರಿಬ್ಬರನ್ನ ನೋಡುವ ಸಾಹಸಕ್ಕೆ ಮುಂದಾಗುತ್ತಿದ್ದಾರೆ ಈ ನಿರ್ದೇಶಕರು. ಯಾವುದು ಆ ಚಿತ್ರ? ಯಾರು ಆ ನಿರ್ದೇಶಕ ಅಂತ ಮುಂದೆ ಓದಿ....

'ವಿಷ್ಣುವರ್ಧನ'ನಿಗೆ 'ಶಾಂತಲ' ಆಗ್ತಾರಾ ದೀಪಿಕಾ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯಲ್ಲಿ 'ಶಾಂತಲ ವಿಷ್ಣುವರ್ಧನ' ಎಂಬ ಐತಿಹಾಸಿಕ ಸಿನಿಮಾ ಬರಲಿದೆ ಎಂಬ ಸುದ್ದಿಯನ್ನ ಇತ್ತೀಚೆಗಷ್ಟೇ ಕೇಳಿದ್ವಿ. ಇದೀಗ, ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

'ಶಾಂತಲ' ಪಾತ್ರದಲ್ಲಿ ದೀಪಿಕಾ!
ಸುದೀಪ್ ರಾಜ ವಿಷ್ಣುವರ್ಧನ ಪಾತ್ರವನ್ನ ನಿರ್ವಹಿಸಿದ್ರೆ, ದೀಪಿಕಾ ಪಡುಕೋಣೆ ನಾಟ್ಯರಾಣಿ ಶಾಂತಲ ಅವರ ಪಾತ್ರದಲ್ಲಿ ಬಣ್ಣ ಹಚ್ಚಬೇಕು ಎಂಬುದು ಚಿತ್ರತಂಡದ ಬಯಕೆ.

ನಾಗಶೇಖರ್ ನಿರ್ದೇಶನ
ಅಂದ್ಹಾಗೆ, ಇಂತಹ ಕಲ್ಪನೆ ಮಾಡಿರುವುದು ನಿರ್ದೇಶಕ ನಾಗಶೇಖರ್. ಸದ್ಯ, ನಾಗಶೇಖರ್ ನಿರ್ದೇಶನದ 'ಮಾಸ್ತಿಗುಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಬಳಿಕ 'ಶಾಂತಲ ವಿಷ್ಣುವರ್ಧನ' ಸಿನಿಮಾವನ್ನ ಶುರು ಮಾಡಲಿದ್ದಾರಂತೆ.

60 ಕೋಟಿ ಬಜೆಟ್
ಇದು ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ಅವರ ಕಥೆಯಾಗಿದ್ದು, ಬಹುಕೋಟಿ ವೆಚ್ಚದಲ್ಲಿ ಮೂಡಿಬರಲಿದೆಯಂತೆ. ಅಂದಾಜಿನ ಪ್ರಕಾರ ಈ ಸಿನಿಮಾ ಬರೋಬ್ಬರಿ 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆಯಂತೆ. ವಿತರಕ ಜಾಕ್ ಮಂಜು ಈ ಸಿನಿಮಾವನ್ನ ನಿರ್ಮಾಣ ಮಾಡಲು ಮುಂದಾಗಲಿದ್ದಾರಂತೆ.

ದೀಪಿಕಾ ಪಡುಕೋಣೆ ಬರ್ತಾರ?
ಹಾಲಿವುಡ್, ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ದೀಪಿಕಾ ಸ್ಯಾಂಡಲ್ ವುಡ್ ಗೆ ಮುಖ ಮಾಡ್ತಾರಾ ಎನ್ನುವುದು ಅನುಮಾನ ಮೂಡಿಸಿದ್ರೂ, ಅವರನ್ನ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕರು. ಇಲ್ಲಿ ಗಮನಿಸಬೇಕಾದ ವಿಚಾರವಂದ್ರೆ, ಸುದೀಪ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಈ ಚಿತ್ರವನ್ನ ಒಪ್ಪಿಕೊಂಡಿಲ್ಲ. ಆದ್ರೆ, ಇವರಿಬ್ಬರು ಈ ಕಥೆಗೆ ಬೇಕು ಎನ್ನುವುದು ನಿರ್ದೇಶಕರ ಆಸೆ. ಕಾದು ನೋಡೋಣ... ಇದು ನಿಜಾ ಆಗುತ್ತಾ ಅಂತ.!


Click it and Unblock the Notifications











