ಎಸ್ ನಾರಾಯಣ್ ನಿವೃತ್ತಿಗೂ ನನಗೂ ಸಂಬಂಧವಿಲ್ಲ
ಈ ಮೊದಲು, ,ಶೈಲೂ, ಹಾಗೂ ಮುಂಜಾನೆ ಚಿತ್ರವನ್ನು ಗಣೇಶ್ ನಾಯಕತ್ವದಲ್ಲಿ ನಿರ್ದೇಶಿಸಿದ್ದರು ಎಸ್ ನಾರಾಯಣ್. ಅದರಲ್ಲೂ 'ಮುಂಜಾನೆ' ಚಿತ್ರವನ್ನು ಸ್ವತಃ ನಿರ್ದೇಶಿಸಿದ್ದರು ಕೂಡ. ಆದರೆ ಅದೆರಡೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಶೈಲೂ ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಪ್ರಶಂಸೆ ಪಡೆದಿತ್ತಾದರೂ ಅದು ಗಣೇಶ್ ನಟನೆಗೆ ಮಾತ್ರ ಸೀಮಿತ ಎಂಬಂತಾಗಿತ್ತು.
ಅವೆರಡು ಚಿತ್ರಗಳು ಸೋತ ಮೇಲೆ ನಿವೃತ್ತಿ ಘೋಷಿಸಿದ್ದರು ಎಸ್ ನಾರಾಯಣ್. ಈಗ ಹಿರಿಯ ನಟ ಅಂಬರೀಶ್ ಅವರ ಬುದ್ಧಿ ಮಾತಿಗೆ ಬೆಲೆ ಕೊಟ್ಟು ನಿಋತ್ತಿ ಘೋಷಣೆಯನ್ನು ವಾಪಸ್ ಪಡೆದಿದ್ದಾರೆ ಕೂಡ. ಆದರೆ ಆಗ, ಎಸ್ ನಾರಾಯಣ್ ನಿವೃತ್ತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಕಾರಣ ಎಂದೇ ಎಲ್ಲರೂ ಮಾತನಾಡಿದ್ದರು. ಆಗ ಅದಕ್ಕೆ "ನಾನು ಅವರ ನಿವೃತ್ತಿಗೆ ಕಾರಣನಲ್ಲ" ಎಂಬ ಸಮಜಾಯಿಷಿಯನ್ನೂ ಗಣೇಶ್ ನೀಡಿದ್ದರು.
ಈಗ ಮತ್ತೆ ಗಣೇಶ್ ಚಿತ್ರ ಬಿಡುಗಡೆ ಕ್ಷಣ ಸಮೀಪಿಸಿದೆ. ಎಸ್ ನಾರಾಯಣ್ ತಮ್ಮ ನಿವೃತ್ತಿಯನ್ನು ಹಿಂಪಡೆದೂ ಆಗಿದೆ. ಆದರೂ ಗಣೇಶ್ ಮೇಲಿದ್ದ ಆಪಾದನೆಗೆ ಮುಕ್ತಿ ಸಿಕ್ಕಿಲ್ಲ. ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಗಣೇಶ್, "ನಾರಾಯಣ್ ನಿವೃತ್ತಿಗೂ, ನನಗೂ ಯಾವುದೇ ಸಂಬಂಧವಿಲ್ಲ. ಮುಂಜಾನೆ ಚಿತ್ರದಲ್ಲಿ ಮೊದಲು ನಾರಾಯಣ್ ಹೇಳಿದ್ದ ಕಥೆಯೇ ಬೇರೆ, ನಂತರ ಚಿತ್ರೀಕರಿಸಿದ್ದೇ ಬೇರೆ. ಅದಕ್ಕೆ ನಾನು ಹೇಗೆ ಹೊಣೆಗಾರನಾಗಲಿ?
ಆ ಚಿತ್ರಕ್ಕೆ ನಾಯಕನಾಗಿ ನಟಿಸಿದ ಮಾತ್ರಕ್ಕೆ ನನ್ನ ಮೇಲೆ ಸೋಲಿನ ಹೊಣೆ ಹೊರಿಸುವುದು ಸರಿಯಲ್ಲ. ನಿರ್ದೇಶಕರು ತಾವು ಆಡಿದ ಮಾತನ್ನು ಉಳಿಸಿಕೊಳ್ಳಬೇಕು. ಅದನ್ನು ಮಾಡದೆ ಸೋಲನ್ನು ಇನ್ನೊಬ್ಬರ ತಲೆ ಮೇಲೆ ಹಾಕುವುದು ಸರಿಯಲ್ಲ. ಅಷ್ಟಕ್ಕೂ ನನ್ನ ಎಲ್ಲಾ ಚಿತ್ರಗಳು 'ಮುಂಗಾರು ಮಳೆ' ಅಥವಾ 'ಚೆಲುವಿನ ಚಿತ್ತಾರ' ಆಗಲೇಬೇಕೆಂದೇನೂ ಇಲ್ಲ. ಅಂತಹ ನಿರೀಕ್ಷೆಗಳೂ ನನ್ನಲ್ಲಿಲ್ಲ" ಎಂದು ಹೇಳುವ ಮೂಲಕ ಗಣೇಶ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












