ಬೆಳ್ಳಿತೆರೆಗೆ ನಿರ್ಮಾಪಕ ಸಾ.ರಾ.ಗೋವಿಂದು ಕುಡಿ

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಹೊರಟಿರುವವರು ನಿರ್ದೇಶಕ ಸಂತು. ಅವರಿಗೆ ಈ ಖತರ್ನಾಕ್ ಐಡಿಯಾ ಕೊಟ್ಟವರು ನಿರ್ಮಾಪಕ ಬೆಂ.ಕೋ.ಶ್ರೀ ಅಲಿಯಾಸ್ ಬಿ.ಕೆ.ಶ್ರೀನಿವಾಸ್. ಚಿತ್ರದ ಹೆಸರು ಗೊತ್ತೇ ಇದೆಯಲ್ಲಾ 'ಅಡ್ಡ'.
ಇದೇ 'ಅಡ್ಡ' ಶೀರ್ಷಿಕೆಗಾಗಿ ಜೋಗಿ ಪ್ರೇಮ್ ಹಾಗೂ ಬೆಂ.ಕೋ.ಶ್ರೀ ನಡುವೆ ಜಟಾಪಟಿ ನಡೆದಿತ್ತು. ಕಡೆಗೆ 'ಅಡ್ಡ' ಶೀರ್ಷಿಕೆ ಶ್ರೀನಿವಾಸ್ ಅವರ ಪಾಲಾಗುವಂತೆ ಮಾಡುವಲ್ಲಿ ಸಾ.ರಾ.ಗೋವಿಂದು ಅವರು ಕೈವಾಡ ಬಹಳಷ್ಟಿದೆ.
ಇದೇ ಕಾರಣಕ್ಕೋ ಏನೋ ಸಾ.ರಾ.ಗೋವಿಂದು ಅವರ ಮಗನನ್ನು ಹೀರೋ ಮಾಡಲು ಹೊರಟಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಸುದ್ದಿ ಇನ್ನೂ ಅಧಿಕೃತವಲ್ಲದಿದ್ದರೂ ಕಿವಿಯಿಂದ ಕಿವಿಗೆ ಹಬ್ಬುತ್ತಿದೆ. ಫಿಲಂ ಚೇಂಬರ್ ನಲ್ಲೂ ಇದೇ ಮಾತುಗಳು ಪ್ರತಿಧ್ವನಿಸುತ್ತಿವೆ.
ಆದರೆ ಸಾ.ರಾ.ಗೋವಿಂದು ಅವರಿಗೆ ಮಾತ್ರ ತಮ್ಮ ಮಗನನ್ನು ಇಷ್ಟು ಬೇಗ ಚಿತ್ರರಂಗಕ್ಕೆ ಪರಿಚಯಿಸುವ ಉಮೇದಿ ಇಲ್ಲವಂತೆ. ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡು ಆಕ್ಟಿಂಗ್ ನಲ್ಲಿ ಅಆಇಈ ಹೇಳಿಕೊಟ್ಟು ಆ ಬಳಿಕವಷ್ಟೇ ಬೆಳ್ಳಿತೆರೆಗೆ ಬಿಡೋಣ ಎಂಬ ಆಲೋಚನೆ ಇದೆಯಂತೆ.
ಆದರೆ 'ಅಡ್ಡ' ನಿರ್ಮಾಪಕರು ಮಾತ್ರ ಗೋವಿಂದು ಮಗನನ್ನು ಹೇಗಾದರೂ ಮಾಡಿ ಕ್ಯಾಮೆರಾ ಮುಂದೆ ತಂದು ನಿಲ್ಲಿಸುವ ಪ್ರಯತ್ನದಲ್ಲಿದ್ದಾರಂತೆ. ಆತನಿಗೆ ಮುಖದ ಮೇಲೆ ಇನ್ನೂ ಸರಿಯಾಗಿ ಮೀಸೆ ಮೊಳೆತಿಲ್ಲ, ಆಗಲೇ ಬೇಡ ಎಂಬ ಮಾತುಗಳು ಕನ್ನಡ ಚಿತ್ರೋದ್ಯಮದಲ್ಲಿ ವ್ಯಕ್ತವಾಗಿವೆ. (ಏಜೆನ್ಸೀಸ್)


Click it and Unblock the Notifications











