ಶುಭ ಮಂಗಳ ರೀಮೇಕ್; ರಮ್ಯಾ, ಶ್ರೀನಗರ ಕಿಟ್ಟಿ ಜೋಡಿ
ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಶುಭ ಮಂಗಳ' ಚಿತ್ರ 1975 ರಲ್ಲಿ ತೆರೆಕಂಡು ಸೂಪರ್ ಹಿಟ್ ದಾಖಲಿಸಿತ್ತು. ಈಗ ಅದೇ ಚಿತ್ರ ಸ್ವಲ್ಪ ಬದಲಾವಣೆಯೊಂದಿಗೆ ಮತ್ತೆ ಬರಲಿದೆ.
ಅದರಲ್ಲಿ ನಟಿಸಿದ್ದ ಆರತಿ ಹಾಗೂ ಶ್ರೀನಾಥ್ ಜೋಡಿ ಪ್ರೇಕ್ಷಕರ ಮನಸ್ಸಿನಲ್ಲಿ ಎಂದೆಂದೂ ಮರೆಯಲಾಗದಂತೆ ಮನೆಮಾಡಿಕೊಂಡಿದ್ದಾರೆ. ಶುಭ ಮಂಗಳ ಎಂದರೆ ಸಾಕು, ಚಿತ್ರ ನೋಡಿದವರ ಮೈಯಲ್ಲಿ ಮಿಂಚು ಹರಿದಂತಾಗುತ್ತದೆ.
ಇದೀಗ ದಂಡಪಾಳ್ಯ ನಿರ್ದೇಶಕ ಶ್ರೀನಿವಾಸ ರಾಜು, ಶುಭ ಮಂಗಳ ಚಿತ್ರವನ್ನು ಮತ್ತೆ ತೆರೆಗೆ ತರಲು ಸಿದ್ಧತೆ ನಡೆಸಿದ್ದು ಮೂಲ ಕಥೆಗೆ ಪಾಲಿಶ್ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಸದ್ಯದಲ್ಲೇ ಹೊಸ ಚಿತ್ರಕತೆ ಸಿದ್ಧವಾಗಲಿದೆ.
ಈಗಿರುವ ಶುಭ ಮಂಗಳ ಚಿತ್ರದಲ್ಲಿ ನಾಯಕಿ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾಳೆ. ಆದರೆ ಬರಲಿರುವ, ಶ್ರೀನಿವಾಸ ರಾಜು ಚಿತ್ರದಲ್ಲಿ ನಾಯಕಿ ಬೆಂಗಳೂರಿನಿಂದ ಲಂಡನ್ ಗೆ ಹೋಗುತ್ತಾಳಂತೆ. ಹಾಗೂ ಇನ್ನೂ ಕೆಲವು ಬದಲಾವಣೆ ಇದೆಯಂತೆ.
"ಮೂಲ ಚಿತ್ರದಲ್ಲಿ ಆರತಿ ಪೋಷಿಸಿದ್ದ ಪಾತ್ರವನ್ನು ಲಕ್ಕಿ ಸ್ಟಾರ್ ರಮ್ಯಾ ಪೋಷಿಸಲಿದ್ದಾರೆ. ಶ್ರೀನಾಥ್ ಪಾತ್ರವನ್ನು ಶ್ರೀನಗರ ಕಿಟ್ಟಿ ಮಾಡಲಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ" ಎಂದು ನಿರ್ದೇಶಕರು ತಿಳಿಸಿದ್ದಾರೆ.
"ಮೂಲ ಚಿತ್ರದಲ್ಲಿರುವ ಹಾಡುಗಳಲ್ಲಿ ಮೂರು ಹಾಡುಗಳು ಹಾಗೇ ಪುನರಾವರ್ತನೆ ಆಗಲಿವೆ. ಈ ಚಿತ್ರಕ್ಕೆ ವಿಭಿನ್ನ ರೀತಿಯ ಹೊಸ ಹಿನ್ನೆಲೆ ಸಂಗೀತವಿರಲಿದ್ದು ಅದನ್ನು ಮನೋಮೂರ್ತಿ ನಿರ್ವಹಿಸಲಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಇನ್ನುಳಿದ ಹಾಡುಗಳು ಮೂಡುಬರಲಿವೆಯಂತೆ.
ರಮ್ಯಾ, ಶ್ರೀನಗರ ಕಿಟ್ಟಿ ಹಾಗೂ ಸ್ವತಃ ತಾವು ಸದ್ಯಕ್ಕೆ ಬೇರೆ ಬೇರೆ ಚಿತ್ರಗಳಲ್ಲಿ ಬಿಜಿ ಆಗಿರುವುದರಿಂದ ಈ ಹೊಸ ಶುಭ ಮಂಗಳ, ಇನ್ನೆರಡು ತಿಂಗಳು ಬಿಟ್ಟು ಸೆಟ್ಟೇರಲಿದೆ" ಎಂದು ಈ ಚಿತ್ರವನ್ನು ನಿರ್ದೇಶಿಸಲಿರುವ ಶ್ರೀನಿವಾಸ ರಾಜು ತಿಳಿಸಿದ್ದಾರೆ.
ಅಂದಹಾಗೇ, ಮುಹೂರ್ತ ಮಾಡಿಕೊಂಡಾಗಿನಿಂದ ಚಿತ್ರೀಕರಣ ಮುಗಿಯುವವರೆಗೂ ಸಾಕಷ್ಟು ವಿವಾದಕ್ಕೆ ಗುರಿಯಾಗಿರುವ ಅವರ ದಂಡುಪಾಳ್ಯ ಚಿತ್ರದ ಬಿಡುಗಡೆ ಸದ್ಯದಲ್ಲೇ ಆಗಲಿದೆಯಂತೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











