ನಟ ರಾಣಾ ಹಾಗೂ ತ್ರಿಷಾ ಸಂಬಂಧದಲ್ಲಿ ಬಿರುಕು
ತೆಲುಗಿನ ಆಜಾನುಬಾಹು ನಟ ದಗ್ಗುಬಾಟಿ ರಾಣಾ ಹಾಗೂ ಮೋಹಕ ತಾರೆ ತ್ರಿಷಾ ಸಂಬಂಧದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ದಕ್ಷಿಣ ಭಾರತದಲ್ಲಿ ಗುಲ್ಲೆಬ್ಬಿಸಿದೆ. ಕಳೆದ ಹತ್ತು ವರ್ಷಗಳಿಂದ ಇವರಿಬ್ಬರೂ ಅನ್ಯೋನ್ಯವಾಗಿದ್ದರು. ಈಗ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದೆ.
ಇದಕ್ಕೆ ಕಾರಣವಾಗಿರುವುದು ಬಾಲಿವುಡ್ ತಾರೆ ಕೃಷ್ಣಸುಂದರಿ ಬಿಪಾಶಾ ಬಸು. ಈಕೆಗೆ ರಾಣಾ ಹತ್ತಿರವಾಗಿದ್ದೇ ತ್ರಿಷಾ ದೂರಸರಿಯಲು ಕಾರಣ ಎನ್ನಲಾಗಿದೆ. ಹೆಚ್ಚಾಗಿ ಮುಂಬೈನಲ್ಲೇ ಕಾಲ ಕಳೆಯುತ್ತಿದ್ದ ರಾಣಾ ಬಗ್ಗೆ ಹೈದರಾಬಾದಿನಲ್ಲಿದ್ದ ತ್ರಿಷಾ ಅಲ್ಲಿಂದಲೇ ಟೂ ಬಿಟ್ಟಿದ್ದಾಳೆ.
ಇದು ನಿಜವೇ ಅಥವಾ ಸುಳ್ಳೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಇಬ್ಬರೂ ಮಾಧ್ಯಮಗಳ ಕಣ್ಣಿಗೆ ನಿಂಬೆಹುಳಿ ಸಿಡಿಸಿ ಮಾಯವಾಗಿದ್ದಾರೆ. ನೋಡಲು ಡೀಸೆಂಟಾಗಿ ಕಾಣುವ ರಾಣಾ ಈ ಹಿಂದೆ ಮತ್ತೊಬ್ಬ ಬೆಡಗಿ ಶ್ರೀಯಾ ಶರಣ್ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ರಾಣಾಗೆ ಶ್ರೀಯಾ ಕೈಕೊಟ್ಟ ಮೇಲೆ ತ್ರಿಷಾಗೆ ಹತ್ತಿರವಾಗಿದ್ದ.
ರಾಣಾ ಹೆಚ್ಚಾಗಿ ಹಿಂದಿ ಚಿತ್ರಗಳಲ್ಲಿ ತೊಡಗಿಕೊಂಡದ್ದು ಹೈದರಾಬಾದಿಗೆ ದೂರವಾಗಿದ್ದು ಇಬ್ಬರ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿತು. ಏತನ್ಮಧ್ಯೆ ತ್ರಿಷಾ ಬಾಲಿವುಡ್ ಕನಸು ನುಚ್ಚುನೂರಾಯಿತು. ಆಕೆ ಅಭಿನಯದ ಬಾಲಿವುಡ್ ಚಿತ್ರ 'ಕಠಾ ಮೀಠಾ' ಮಕಾಡೆ ಮಲಗಿತು. ತ್ರಿಷಾಗೆ ಬಾಲಿವುಡ್ ಬಾಗಿಲು ಬಂದ್ ಆಯಿತು.
ಕಳೆದ ಹತ್ತು ವರ್ಷಗಳಿಂದ ಕದ್ದುಮುಚ್ಚಿ ತ್ರಿಷಾ ಹಾಗೂ ರಾಣಾ ಜೂಟಾಟ ಆಡುತ್ತಿದ್ದರು. ಕಳೆದ ವರ್ಷ ಗೋವಾದಲ್ಲಿ ಇಬ್ಬರೂ ಹೊಸ ವರ್ಷದ ಸಂಭ್ರಮಾಚರಣೆ ಜೊತೆಯಾಗಿ ಆಚರಿಸಿಕೊಂಡಾಗಲೇ ಇವರಿಬ್ಬರ ನಡುವಿನ ಕುಚ್ ಕುಚ್ ವ್ಯವಹಾರ ಬಯಲಾಗಿತ್ತು. ಅದೇ ಸಂದರ್ಭದಲ್ಲಿ ಗೋವಾದಲ್ಲೇ ಬಿಪಾಶಾ ಕೂಡ ಇದ್ದರು. ಆದರೂ ಇವರಿಬ್ಬರೂ ಸಾಕಷ್ಟು ಅಂತರ ಕಾಪಾಡಿದ್ದರು.
ಇತ್ತೀಚೆಗೆ ರಾಣಾ ಯುಟಿವಿ ಜೊತೆ ಕೈಜೋಡಿಸಿ 'The Chosen One" ಎಂಬ ರಿಯಾಲಿಟಿ ಶೋಗೆ ಸಹಿಹಾಕಿದ್ದ. ಬಾಲಿವುಡ್ ಹಾಟ್ ತಾರೆ ನೇಹಾ ದೂಪಿಯಾ ಸಹ ಈ ರಿಯಾಲಿಟಿ ಶೋನಲ್ಲಿ ತೀರ್ಪುಗಾರರು. (ಏಜೆನ್ಸೀಸ್)


Click it and Unblock the Notifications











