ಹ್ಯಾಟ್ರಿಕ್ ಹೀರೋ ಶಿವಣ್ಣ ವಿರುದ್ಧ ದೂರು ದಾಖಲು
ದೂರು ದಾಖಲಿಸಿರುವವರು ಕನ್ನಡದ ಚಿತ್ರರಂಗದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾದ ಸೂರಪ್ಪ ಬಾಬು (ಎನ್ ಬಿ ಬಾಬು). ಈ ಹಿಂದೆ ಇವರು ಶಿವರಾಜ್ ಕುಮಾರ್ ಜೊತೆ 'ಬಂಧು ಬಳಗ' ಎಂಬ ಚಿತ್ರ ನಿರ್ಮಿಸಿದ್ದರು. ಈಗ ದೂರು ದಾಖಲಿಸಲು ಪ್ರಮುಖ ಕಾರಣ ಎಂದರೆ ರು.20 ಲಕ್ಷ ಮುಂಗಡ ಹಣ ವಾಪಸು ಕೊಡಿಸಿ ಎಂದು.
'ವರದ' ಎಂಬ ಚಿತ್ರಕ್ಕಾಗಿ ಶಿವಣ್ಣನಿಗೆ ರು.20 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರಂತೆ ಸೂರಪ್ಪ ಬಾಬು. ಆದರೆ ಆ ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಈ ಹಣವನ್ನು ತಮಗೆ ವಾಪಸು ಕೊಡಿಸಬೇಕು ಎಂದು ಲಿಖಿತ ರೂಪದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂರಪ್ಪ ಬಾಬು ದೂರು ನೀಡಿದ್ದಾರೆ.
ಅಭಿನಯ ಚಕ್ರವರ್ತಿ ಬಿರುದಾಂಕಿತ ಸುದೀಪ್ ಅವರು ಈಗಾಗಲೆ 'ವರದನಾಯಕ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಚಿತ್ರಕ್ಕೆ ವರದ ಎಂಬ ಶೀರ್ಷಿಕೆ ಸರಿಹೋಗಲ್ಲ. ಹಾಗಾಗಿ ತಾನು ಸಿನಿಮಾ ಕೈಬಿಟ್ಟಿದ್ದೇನೆ. ಶಿವಣ್ಣನಿಗೆ ಕೊಟ್ಟಿರುವ ರು.20 ಲಕ್ಷ ಅಡ್ವಾನ್ಸ್ ಹಣವನ್ನು ವಾಪಸ್ ಕೊಡಿಸಿ ಎಂಬುದು ಬಾಬು ಅವರ ಅಹವಾಲು.
ಸದ್ಯಕ್ಕೆ ಶಿವರಾಜ್ ಕುಮಾರ್ ಅವರು ಕುಟುಂಬ ಸಮೇತ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅವರು ಹಿಂತಿರುಗಿದ ಬಳಿಕವಷ್ಟೇ ಈ ಬಗ್ಗೆ ಅವರು ಪ್ರತಿಕ್ರಿಯಿಸಬಹುದು. ಈ ಸಮಸ್ಯೆಯನ್ನು ಕೇಂದ್ರ ಸಂಧಾನ ಸಮಿತಿ ಮುಂದಿಟ್ಟು ಪರಿಹರಿಸಿಕೊಳ್ಳುವಂತೆ ಫಿಲಂ ಚೇಂಬರ್ ಸೂಚಿಸಲಿದೆ.
ಕಳೆದ 25 ವರ್ಷಗಳಿಂದ ಶಿವಣ್ಣ ಯಾವುದೇ ವಾದ ವಿವಾದಗಳಿಗೆ ಗುರಿಯಾಗದೆ ತಮ್ಮ ಪಾಡಿಗೆ ತಾವಿದ್ದರು. ನಿರ್ಮಾಪಕರ ಪಾಲಿಗೆ ಹಾಟ್ ಕೇಕ್ ಆಗಿದ್ದರು. ಸೂರಪ್ಪ ಬಾಬು ಈಗ ಏಕಾಏಕಿ ದೂರು ನೀಡುವುದು ಶಿವಣ್ಣ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ರಾಜ್ ಕುಮಾರ್ ಕುಟುಂಬದ ಮೇಲೆ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿರುವುದು ಚರ್ಚಾಸ್ಪದ ವಿಷಯವಾಗಿದೆ. ಸದ್ಯಕ್ಕೆ ಸೂರಪ್ಪ ಬಾಬು ಕೊಟ್ಟ ದೂರು ಮಂಡಳಿಯ ಟೇಬಲ್ ಮೇಲಿದೆ. ಶಿವಣ್ಣ ಪ್ರವಾಸದಲ್ಲಿ ಇರುವುದರಿಂದ ಅವರು ಬಂದ ನಂತರ ವಿಚಾರಣೆ ನಡೆಸಿ ಈ ಪ್ರಕರಣಕ್ಕೊಂದು ಅಂತ್ಯ ಹಾಡುವ ನಿರೀಕ್ಷೆಯಿದೆ. (ಏಜೆನ್ಸೀಸ್)


Click it and Unblock the Notifications












