ಶ್ರೀ ಮುರಳಿ 'ಬಘೀರ' ಶೂಟಿಂಗ್ ಸ್ಥಗಿತ: ಕಥೆಯಲ್ಲಿ ಬದಲಾವಣೆ?
ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸದ್ಯ ತಮ್ಮ ಹೊಸ ಸಿನಿಮಾವನ್ನು ಆರಂಭಿಸಿದ್ದಾರೆ. 'ಉಗ್ರಂ' ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡಿದ ಶ್ರೀ ಮುರಳಿ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಭರ್ಜರಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಾಲು ಸಾಲು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಶ್ರೀಮುರಳಿ. ಇದೀಗ ಮತ್ತೊಂದು ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾ 'ಬಘೀರ'ದಲ್ಲಿ ನಟಿಸುತ್ತಿದ್ದು ಚಿತ್ರ ಸೆಟ್ಟೇರಿದೆ.
ಇತ್ತೀಚಿಗಷ್ಟೇ 'ಬಘೀರ' ಚಿತ್ರದ ಶೂಟಿಂಗ್ ಶುರುವಾಗಿದೆ. ಸಿನಿಮಾದ ಮುಹೂರ್ತ ಕೂಡ ಅದ್ಧೂರಿಯಾಗಿ ನೆರವೇರಿತ್ತು. ಚಿತ್ರದ ಫಸ್ಟ್ ಲುಕ್ ನಲ್ಲಿಯೇ 'ಬಘೀರ'ನಾಗಿ ಶ್ರೀಮುರಳಿ ಗಮನಸೆಳೆದಿದ್ದಾರೆ. ಶ್ರೀ ಮುರಳಿ ಅಭಿನಯದ ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
'ಬಘೀರ' ಚಿತ್ರದ ಶೂಟಿಂಗ್ ಆರಂಭವಾಗಿತ್ತು. ಆದ್ರೀಗ ಕೆಲವು ದಿನಗಳ ಬಳಿಕ ಶೂಟಿಂಗ್ ಸ್ಥಗಿತಗೊಂಡಿದೆ. ಮೂಲಗಳ ಪ್ರಕಾರ, ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ನಿಂತು ಹೋಗಿದೆ. ಇದಕ್ಕೆ ಕಾರಣ ಕಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆ ಸೂಚಿಸಿದಂತೆ.

'ಬಘೀರ' ಶೂಟಿಂಗ್ ಆರಂಭ!
ಇತ್ತೀಚೆಗೆ ಅದ್ಧೂರಿ ಮುಹೂರ್ತದ ಬಳಿಕ 'ಬಘೀರ' ಸಿನಿಮಾದ ಶೂಟಿಂಗ್ ಶುರುವಾಗಿದೆ. ಮೈಸೂರಿನಲ್ಲಿ ಹಲವು ದಿನಗಳ ಚಿತ್ರೀಕರಣ ಕೂಡ ಮಾಡಿದೆ ಚಿತ್ರತಂಡ. ಆದರೀಗ ಸದ್ಯಕ್ಕೆ ಶೂಟಿಂಗನ್ನು ನಿಲ್ಲಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶೂಟಿಂಗ್ ಸ್ಥಗಿತಗೊಳಿಸಲು ಕಾರಣ ಕಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರುವುದು ಎನ್ನಲಾಗುತ್ತಿದೆ. ಹೊಂಬಾಳೆ ಸಂಸ್ಥೆಯ ಸೂಚನೆಯ ಮೇರೆಗೆ ಸ್ಕ್ರಿಪ್ಟ್ನಲ್ಲಿ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಲು ನಿರ್ದೇಶಕ ಡಾಕ್ಟರ್ ಸೂರಿ ಮುಂದಾಗಿದ್ದಾರೆ.

ಪೊಲೀಸ್ ಪಾತ್ರದಲ್ಲಿ ನಟ ಶ್ರೀ ಮುರಳಿ!
ಈ ಚಿತ್ರದಲ್ಲಿ ನಟ ಶ್ರೀ ಮುರಳಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರದ ಫಸ್ಟ್ ಲುಕ್ನಲ್ಲಿಯೇ ರಿವೀಲ್ ಆಗಿದೆ. ಪೊಲೀಸ್ ಪಾತ್ರ ಆದಕಾರಣ ನಾಯಕ ಪೊಲೀಸ್ ತರಬೇತಿ ತೆಗೆದುಕೊಳ್ಳುವಂತಹ ದೃಶ್ಯಗಳು ಕೂಡ ಕಥೆಯಲ್ಲಿ ಬರೆಯಲಾಗಿದೆ. ಆದರೆ ನಿರ್ಮಾಣ ಸಂಸ್ಥೆ ಪೊಲೀಸ್ ಟ್ರೈನಿಂಗ್ ದೃಶ್ಯಗಳು ಬೇಡ ಎಂದು ಸೂಚನೆಯನ್ನು ನೀಡಿ ಒಂದಷ್ಟು ಬದಲಾವಣೆಗಳನ್ನು ಮಾಡಲು ಸೂಚಿಸಿದಂತೆ. ಹಾಗಾಗಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲು ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಸದ್ಯದಲ್ಲಿಯೇ ಮತ್ತೆ ಚಿತ್ರೀಕರಣ ಮುಂದುವರೆಯಲಿದೆ.

ಪ್ರಶಾಂತ್ ನೀಲ್ ಕಥೆ, ಡಾ. ಸೂರಿ ನಿರ್ದೇಶನ!
'ಬಘೀರ' ಸಿನಿಮಾ ಕಥೆಯನ್ನು ಬರೆದಿರುವುದು ಪ್ರಶಾಂತ್ ನೀಲ್. ಈ ಹಿಂದೆ ಶ್ರೀ ಮುರಳಿಗಾಗಿ 'ಉಗ್ರಂ' ಸಿನಿಮಾ ಮಾಡಿರುವ ಪ್ರಶಾಂತ್ ನೀಲ್, 'ಉಗ್ರಂ' ಸಿನಿಮಾದ ಮೂಲಕವೇ ನಿರ್ದೇಶಕನಾಗಿ ಬಡ್ತಿ ಹೊಂದಿದ್ದಾರೆ. 'ಕೆಜಿಎಫ್' ಬಳಿಕ ಪ್ರಶಾಂತ್ ನೀಲ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೂ, ಶ್ರೀ ಮುರಳಿಗಾಗಿ 'ಬಘೀರ' ಕಥೆಯನ್ನು ಒದಗಿಸಿ ಕೊಟ್ಟಿದ್ದಾರೆ. ಹೊಂಬಾಳೆ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

ನಿರೀಕ್ಷೆ ಹುಟ್ಟಿಸಿರುವ 'ಬಘೀರ'!
'ಬಘೀರ' ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಂದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿವೆ. ಇನ್ನು ಚಿತ್ರದ ಕಥೆ ಪ್ರಶಾಂತ್ ನೀಲ್ ಮಾಡಿದ್ದಾರೆ ಎಂದಾಗ ಮತ್ತಷ್ಟು ನಿರೀಕ್ಷೆ ಕುತೂಹಲಗಳು ಹೆಚ್ಚಾದವು. ನಿರ್ದೇಶಕ ಡಾಕ್ಟರ್ ಸೂರಿ ಸಾರಥ್ಯದಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಆದಷ್ಟು ಬೇಗ ಶೂಟಿಂಗ್ ಮುಗಿಸಿ ಸಿನಿಮಾ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ ಚಿತ್ರತಂಡ.


Click it and Unblock the Notifications











