ಅಗ್ನಿಸಾಕ್ಷಿ ಗೆ ಸಬ್ಸಿಡಿ ಸೌಭಾಗ್ಯ : ಕಾಳಿನ ಜತೆ ತೂರಿಬಂದ ಜಳ್ಳು
ಮಾನ್ಯರೆ,
ತಮ್ಮ ಸುದ್ದಿ ಜಾಲದಲ್ಲಿ ಪ್ರಕಟವಾಗಿರುವ ಸಬ್ಸಿಡಿ ಅರಸಿ ಬಂದ 55 ಚಿತ್ರಗಳ ಪೈಕಿ 35 ನಪಾಸು ಸುದ್ದಿಗೆ ಪ್ರತಿಕ್ರಿಯೆ. ಕಾರಂತ್ ನೇತೃತ್ವದ ಕಮಿಟಿ ಸಬ್ಸಿಡಿಗಾಗಿ ಉತ್ತಮ ಪ್ರಯೋಗಾತ್ಮಕ ಚಲನಚಿತ್ರಗಳು ಹಾಗೂ ಸಾಮಾಜಿಕ ಕಳಕಳಿಯುಳ್ಳ ಕತೆಗಳ ಚಿತ್ರಗಳನ್ನು ಆಯ್ಕೆ ಮಾಡಿದೆ. ಆದರೆ, ಸಮಿತಿಯು ಅಷ್ಟೇ ದೊಡ್ಡ ಪ್ರಮಾದಗಳನ್ನೂ ಎಸಗಿದೆ.
ಈ ಪ್ರಮಾದಗಳಿಂದಾಗಿ ಸಮಿತಿ ಮಾಡಿದ ಎಲ್ಲ ಉತ್ತಮ ಕೆಲಸಗಳೂ ಹೊಳೆಯಲ್ಲಿ ಹುಣಸೇ ಹಣ್ಣು ಕಿವಿಚಿದಂತೆ ಮಾಡಿದೆ. ಅಗ್ನಿ ಸಾಕ್ಷಿ ಎಂಬ ಚಿತ್ರವನ್ನು 98-99ರ ಸಾಲಿನ ಸಬ್ಸಿಡಿಗಾಗಿ ಆಯ್ಕೆ ಮಾಡಿರುವುದು ಘನಘೋರ ಪ್ರಮಾದ. ಶಿವಮಣಿ ನಿರ್ಮಿಸಿ, ನಿರ್ದೇಶಿಸಿದ ಈ ಚಿತ್ರದಲ್ಲಿ ದೇವರಾಜ್, ಮಾಲಾಶ್ರೀ ಮತ್ತಿತರರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಬ್ಸಿಡಿ ನೀಡಿರುವುದು ಆಶ್ಚರ್ಯ ತಂದಿದೆ. ಸಬ್ಸಿಡಿ ಯಾವ ಆದಾರದ ಮೇಲೆ ನೀಡಲಾಗುತ್ತದೆ, ಅದರ ನಿಯಮಗಳೇನು ಎನ್ನುವುದು ತನ್ಮೂಲಕ ಇನ್ನಷ್ಟು ನಿಗೂಢವಾಗುತ್ತಾ ಹೋಗುತ್ತದೆ.
ಮೂಲತಃ ಈ ಚಿತ್ರ ರಿಶಿಕಪೂರ್, ನಾಸಿರುದ್ದೀನ್ ಶಾ ಮತ್ತಿತರರು ನಟಿಸಿದ ಹಿಂದಿ ಚಲನಚಿತ್ರವೊಂದರ ಅವತರಣಿಕೆ ಅಗ್ನಿಸಾಕ್ಷಿ ಅರ್ಥಾತ್ ರೀಮೇಕ್ ಚಿತ್ರ. (ಚಿತ್ರದ ಹೆಸರು ಮರೆತಿರುವೆ) ಇಲ್ಲಿ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿ ಮಾತ್ರ.
ಒಂದು ವೇಳೆ, ರೀಮೇಕ್ ಹಾಗೂ ಸ್ವಮೇಕ್ ಚಿತ್ರಗಳಾವುವು ಎಂದು ಪತ್ತೆ ಮಾಡುವಲ್ಲಿ ಕಾರಂತ್ ನೇತೃತ್ವದ ಸಮಿತಿ ಸೋಲನ್ನಪ್ಪಿದೆಯೇ? ಅಥವಾ ಈ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರೇ ಆಯ್ಕೆ ಸಮಿತಿಯನ್ನು ಮೋಸಗೊಳಿಸಿದ್ದಾರೆಯೇ? ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಅದೇನೇ ಆಗಲಿ, ಈ ಆಯ್ಕೆಯಿಂದಾಗಿ ಕನ್ನಡದ (ಸ್ವಮೇಕ್) ಅರ್ಹ ಚಿತ್ರವೊಂದಕ್ಕೆ ಅನ್ಯಾಯವಾಗಿದೆ ಎಂಬುದಂತೂ ಸುಸ್ಪಷ್ಟ.
ವಂದನೆಗಳೊಂದಿಗೆ,
ಶ್ಯಾಮ್


Click it and Unblock the Notifications











