ಹಿಂದಿ ಸಿನಿಮಾಕ್ಕೆ ಆಡಿಷನ್ ನೀಡಿದ್ದ 'ಜೇಮ್ಸ್ ಬಾಂಡ್' ಡ್ಯಾನಿಯಲ್ ಕ್ರೇಗ್
ವಿಶ್ವ ಪ್ರಸಿದ್ಧ 'ಜೇಮ್ಸ್ ಬಾಂಡ್' ಸಿನಿಮಾಗಳ ಈಗಿನ ಹೀರೊ ಡ್ಯಾನಿಯಲ್ ಕ್ರೇಗ್ ನಟನೆಗೆ, ಆಕ್ಷನ್ಗೆ ಮಾರು ಹೋಗದವರು ಕಡಿಮೆ. ಈವರೆಗೆ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಂಡ ನಟರಲ್ಲೇ ಅತ್ಯುತ್ತಮ ಬಾಂಡ್ ಪಾತ್ರಧಾರಿ ಎಂಬ ಬಿರುದು ಡ್ಯಾನಿಯಲ್ ಕ್ರೇಗ್ರದ್ದು.
ಡ್ಯಾನಿಯಲ್ ಕ್ರೇಗ್ ಹಿಂದಿ ಸಿನಿಮಾ ಒಂದಕ್ಕೆ ಆಡಿಷನ್ ನೀಡಿದ್ದರು. ಆದರೆ ಪಾತ್ರಕ್ಕೆ ಆಯ್ಕೆ ಆಗಿರಲಿಲ್ಲ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
2006ರಲ್ಲಿ ತೆರೆಗೆ ಬಂದಿದ್ದ ಹಿಂದಿಯ 'ರಂಗ್ ದೇ ಬಸಂತಿ' ಸಿನಿಮಾ ಎವರ್ಗ್ರೀನ್ ಸಿನಿಮಾಗಳ ಪಟ್ಟಿಗೆ ಸೇರಿಯಾಗಿದೆ. ಅಮೀರ್ ಖಾನ್, ಮಾಧವನ್, ಸಿದ್ಧಾರ್ಥ್, ಸೊಹಾ ಅಲಿ ಖಾನ್ ಮತ್ತಿತರರು ನಟಿಸಿದ್ದ ಈ ಸಿನಿಮಾಕ್ಕೆ ಡ್ಯಾನಿಯಲ್ ಕ್ರೇಗ್ ಸಹ ಆಡಿಷನ್ ನೀಡಿದ್ದರು. ಆದರೆ ಆಯ್ಕೆ ಆಗಿರಲಿಲ್ಲ.
ಭಗತ್ ಸಿಂಗ್, ಅಜಾದ್ರ ಭಾರತ ಸ್ವಾತಂತ್ರ್ಯಹೋರಾಟ ಹಾಗೂ ಪ್ರಸ್ತುತ ರಾಜಕಾರಣ ಎರಡೂ ವಿಷಯಗಳನ್ನು ಒಳಗೊಂಡಿದ್ದ 'ರಂಗ್ ದೇ ಬಸಂತಿ' ಸಿನಿಮಾದಲ್ಲಿ ಬ್ರಿಟೀಷ್ ಜೈಲರ್ ಜೇಮ್ಸ್ ಮೆಕೆನ್ಲೆಯ ಸಣ್ಣ ಆದರೆ ಮುಖ್ಯ ಪಾತ್ರವೊಂದಿದೆ. ಆ ಪಾತ್ರಕ್ಕಾಗಿ ಡ್ಯಾನಿಯಲ್ ಕ್ರೇಗ್ ಆಡಿಷನ್ ನೀಡಿದ್ದರು.

'ರಂಗ್ ದೇ ಬಸಂತಿ' ಸಿನಿಮಾಕ್ಕೆ ಆಡಿಷನ್ ನೀಡಿದ್ದ ಡ್ಯಾನಿಯಲ್
ಡ್ಯಾನಿಯಲ್ ಕ್ರೇಗ್, 'ರಂಗ್ ದೇ ಬಸಂತಿ' ಸಿನಿಮಾಕ್ಕೆ ಆಡಿಷನ್ ನೀಡಿದ ಬಳಿಕ ಅವರಿಗೆ ಮೊದಲ ಬಾಂಡ್ ಸಿನಿಮಾ 'ಕ್ಯಾಸಿನೊ ರೊಯಾಲ್'ಗೆ ಆಫರ್ ದೊರಕಿತು. 'ರಂಗ್ ದೇ ಬಸಂತಿ' ನಿರ್ದೇಶಕ ರಾಕೇಶ್ ಓಂಪ್ರಕಾಶ್ಗೆ ಡ್ಯಾನಿಯಲ್ ಕ್ರೇಗ್ ಬ್ರಿಟೀಷ್ ಅಧಿಕಾರಿ ಜೇಮ್ಸ್ ಮೆಕೆನ್ಲೆ ಪಾತ್ರ ಮಾಡಲಿ ಎಂಬ ಆಸೆ ಇತ್ತಂತೆ. ಆದರೆ ಬಾಂಡ್ ಸಿನಿಮಾದಲ್ಲಿ ನಟಿಸುವುದು ನಿಗದಿ ಆದರೆ ನಿಮ್ಮ ಸಿನಿಮಾದಲ್ಲಿ ನಟಿಸಲಾಗದು ಎಂದು ಹೇಳಿದ್ದರಂತೆ ಡ್ಯಾನಿಯಲ್ ಕ್ರೇಗ್. ಆ ನಂತರ ಆಗಿದ್ದೆಲ್ಲ ಇತಿಹಾಸ.

ನಿರ್ದೇಶಕ ಬರೆದಿರುವ ಪುಸ್ತಕ
'ರಂಗ್ ದೇ ಬಸಂತಿ' ಸಿನಿಮಾ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಬರೆದಿರುವ 'ದಿ ಸ್ಟ್ರೆಂಜರ್ ಇನ್ ದಿ ಮಿರರ್' ಹೆಸರಿನ ಆತ್ಮಕತೆಯಲ್ಲಿ ಈ ವಿಷಯವನ್ನು ನಮೂದಿಸಿದ್ದಾರೆ. ಅಷ್ಟೇ ಅಲ್ಲದೆ 'ರಂಗ್ ದೇ ಬಸಂತಿ' ಸಿನಿಮಾದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಪೀಟರ್ ಗ್ಯಾಬ್ರಿಯಲ್ಗೆ ವಹಿಸಲು ಸಹ ತಾವು ನಿಶ್ಚಯಿಸಿ ಕೊನೆಯ ಕ್ಷಣದಲ್ಲಿ ಎ.ಆರ್.ರೆಹಮಾನ್ ಅನ್ನು ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾಗಿಯೂ ರಾಕೇಶ್ ಬರೆದಿದ್ದಾರೆ.

ಅಭಿಷೇಕ್ ಬಚ್ಚನ್ರ ಮೊದಲ ಸಿನಿಮಾ ನಿರ್ದೇಶಿಸಬೇಕಿತ್ತು
ಹಲವು ಆಸಕ್ತಿಕರ ವಿಷಯಗಳನ್ನು ರಾಕೇಶ್ ಓಂ ಪ್ರಕಾಶ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಅನ್ನು ಲಾಂಚ್ ಮಾಡಲೆಂದು 'ಸಮ್ಜೋತಾ ಎಕ್ಸ್ಪ್ರೆಸ್' ಎಂಬ ಕತೆ ಬರೆದು ಸಿನಿಮಾದ ಶೂಟಿಂಗ್ ಅನ್ನು ಪ್ರಾರಂಭ ಮಾಡಲು ಅಣಿಯಾಗಿದ್ದ ಸಂದರ್ಭದಲ್ಲಿ ಅಮಿತಾಬ್ರ ಪತ್ನಿ ಜಯಾ ಬಚ್ಚನ್ ಕರೆದು, 'ರೆಫ್ಯೂಜಿ' ಸಿನಿಮಾ ಅಭಿಷೇಕ್ರ ಮೊದಲ ಸಿನಿಮಾ ಆಗಿರುತ್ತದೆ ಎಂದರಂತೆ. ಇದರಿಂದ ಬೇಸರಗೊಂಡ ರಾಕೇಶ್, ನಾನು ಎಂದಿಗೂ 'ಸಮ್ಜೋತಾ ಎಕ್ಸ್ಪ್ರೆಸ್' ಸಿನಿಮಾ ಮಾಡುವುದಿಲ್ಲ ಎಂದು ನಿಶ್ಚಯಿಸಿದರಂತೆ. ಹಲವು ವರ್ಷಗಳ ನಂತರ ಅಭಿಷೇಕ್ ಬಚ್ಚನ್ ಜೊತೆಗೆ 'ಡೆಲ್ಲಿ 6' ಸಿನಿಮಾವನ್ನು ರಾಕೇಶ್ ಮಾಡಿದರು. ಆದರೆ ಅದು ಪ್ಲಾಫ್ ಆಯಿತು.

ಚಿತ್ರಕತೆ ಸುಟ್ಟು ಹಾಕಿದ್ದ ರಾಕೇಶ್
'ಜಯಾ ಬಚ್ಚನ್ ನಿರ್ಣಯ ಕೇಳಿ ಮನೆಗೆ ಬಂದು 'ಸಮ್ಜೋತಾ ಎಕ್ಸ್ಪ್ರೆಸ್' ಸಿನಿಮಾದ ಸ್ಕ್ರಿಪ್ಟ್, ಲೊಕೇಶನ್ ಮಾಹಿತಿ, ಶಾಟ್ ಡಿವಿಷನ್ ಮಾಹಿತಿ, ಸಂಭಾಷಣೆ ಹಾಳೆಗಳು ಎಲ್ಲವನ್ನು ನನ್ನ ಮನೆಯ ಮೇಲಿನ ಒಲೆಗೆ ಎಸೆದು ಸುಟ್ಟು ಹಾಕಿದ್ದೆ. ನನ್ನ ಕತೆಯಲ್ಲಿ ನಾಯಕನು ಪಾಕಿಸ್ತಾನಿ ಭಯೋತ್ಪಾದಕ ಆಗಿದ್ದ. ನಾಯಕನೊಬ್ಬ ಭಯೋತ್ಪಾದ ಆಗಿರುವುದು ಭಾರತದ ಪ್ರೇಕ್ಷಕರಿಗೆ ಹಿಡಿಸುವುದಿಲ್ಲ ಎಂದು ಜಯಾ ಬಚ್ಚನ್ ನನ್ನ ಸಿನಿಮಾವನ್ನು ಬೇಡ ಎಂದಿದ್ದರು'' ಎಂದು ಬರೆದುಕೊಂಡಿದ್ದಾರೆ ರಾಕೇಶ್.


Click it and Unblock the Notifications










