ಕಥೆ, ಪಾತ್ರ ಬಯಸಿದರೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಅಡ್ಡಿಯಿಲ್ಲ: ಸಪ್ತಮಿ ಗೌಡ
'ಕಾಂತಾರ' ಚಿತ್ರ ಎಲ್ಲಾ ವಿಭಾಗದಲ್ಲೂ ಫಸ್ಟ್ ಕ್ಲಾಸ್ ಎನಿಸಿಕೊಂಡಿದೆ. ನಟನೆಯ ವಿಚಾರಕ್ಕೆ ಬಂದರೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ. ನಾಯಕಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಮೋಡಿ ಮಾಡಿದ್ದಾರೆ. ಇದೀಗ ರಿಷಬ್ ಶೆಟ್ಟಿ ಅವರಷ್ಟೇ ಸಪ್ತಮಿ ಗೌಡಗೂ ಬೇಡಿಕೆ ಶುರುವಾಗಿದೆ. ಮತ್ತಷ್ಟು ಒಳ್ಳೆಯ ಪಾತ್ರಗಳಲ್ಲಿ ನಟಿಸಲು ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಪುತ್ರಿ ಉತ್ಸುಕರಾಗಿದ್ದಾರೆ.
ಅಮೆರಿಕಾಗೆ ಹೋಗಿ ಎಂಎಸ್ ಮಾಡುವ ಕನಸು ಕಂಡಿದ್ದ ಸಪ್ತಮಿ ಗೌಡ ಲಾಕ್ಡೌನ್ ಕಾರಣದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಇಂತಹ ಹೊತ್ತಲ್ಲೇ ಸಿಕ್ಕಿದ್ದ 'ಕಾಂತಾರ' ಸಿನಿಮಾ ಅವಕಾಶ ಆಕೆಯನ್ನು ಭಾರತೀಯ ಸಿನಿರಸಿಕರು ಗುರ್ತಿಸುವಂತೆ ಮಾಡಿದೆ. ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಆಗಿ ಶಿವನ ಪ್ರೇಯಸಿಯಾಗಿ ನಟಿಸಿ ಗೆದ್ದಿದ್ದಾರೆ. ಫಾರೆಸ್ಟ್ ಗಾರ್ಡ್ ಯೂನಿಫಾರ್ಮ್ನಲ್ಲಿ ಆ ಪಾತ್ರವೇ ತಾವಾಗಿ ಹೋಗಿದ್ದಾರೆ. ಪರಭಾಷೆಯಲ್ಲೂ ಸಿನಿಮಾ ಸೂಪರ್ ಹಿಟ್ ಆಗಿ ಎಲ್ಲರೂ ಕನ್ನಡದ ಹುಡುಗಿಯನ್ನು ಗುರುತಿಸುವಂತಾಗಿದೆ. ಲೀಲಾ ಪಾತ್ರ ಸಪ್ತಮಿ ಗೌಡ ಅವರಿಗೆ ಹೊಸ ಐಡೆಂಟಿಟಿ ತಂದುಕೊಟ್ಟಿದೆ. ಹಾಗಂತ ಸಿಕ್ಕ ಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಒಳ್ಳೆ ಒಳ್ಳೆ ಪಾತ್ರಗಳನ್ನು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
'ಕಾಂತಾರ' ನಂತರ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಯನ್ನು ಸಾಕಷ್ಟು ಜನ ಸಪ್ತಮಿ ಗೌಡ ಎದುರು ಇಡುತ್ತಿದ್ದಾರೆ. ಇದೇ ಪ್ರಶ್ನೆಯನ್ನು ಫಿಲ್ಮಿಬೀಟ್ ಇಟ್ಟಾಗ ಇನ್ನು ಗೊತ್ತಿಲ್ಲ ನೋಡಬೇಕು. ಒಂದಷ್ಟು ಅವಕಾಶಗಳು ಬರುತ್ತಿದೆ. ಸಣ್ಣದೊಂದು ಬ್ರೇಕ್ ತೆಗೆದುಕೊಂಡು ಮುಂದಿನ ಸಿನಿಮಾ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.

'ಮುಂದೇನು ಎನ್ನುವುದು ಗೊತ್ತಿಲ್ಲ": ಸಪ್ತಮಿ ಗೌಡ
ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಟಿ ಸಪ್ತಮಿ ಗೌಡ ತೀರ್ಮಾನಿಸಿದ್ದಾರೆ. "ಕಾಂತಾರ ಸಕ್ಸಸ್ ನಂತರ ಯಾವುದೇ ಬದಲಾವಣೆ ಆಗಿಲ್ಲ. ಎಲ್ಲಾ ಆರಾಮಾಗಿ ನಡೀತಿದೆ. ಕಾಲಿಗೆ ಪೆಟ್ಟಾಗಿದೆ. ಲಿಗಮೆಂಟ್ ಟಿಯರ್ ಆಗಿರುವುದರಿಂದ ಕೊಂಚ ಬ್ರೇಕ್ ಬೇಕು. ಸದ್ಯಕ್ಕೆ ಏನು ಎನ್ನುವುದು ಗೊತ್ತಿಲ್ಲ. ಇನ್ನು ಯಾವುದೇ ಕಥೆಯನ್ನು ಕೇಳಿಲ್ಲ. ಯಾವುದೇ ಸಿನಿಮಾ ಬಗ್ಗೆ ಚರ್ಚೆ ಮಾಡಿಲ್ಲ. ನಿಧಾನವಾಗಿ ಮುಂದಿನ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತೇನೆ."

"ಸಿಕ್ಕಾಪಟ್ಟೆ ಖುಷಿ ಆಗುತ್ತಿದೆ"
ಲೀಲಾ ಪಾತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಸಪ್ತಮಿ ಗೌಡ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಎರಡನೇ ಸಿನಿಮಾದಲ್ಲೇ ಇಷ್ಟೆಲ್ಲಾ ಮೆಚ್ಚುಗೆ ಸಿಗುತ್ತಿರುವುದು ಅಚ್ಚರಿ ಮೂಡಿಸಿದೆ. "ಇಷ್ಟು ಅದ್ಭುತ ರೆಸ್ಪಾನ್ಸ್ ಸಿಗುತ್ತಿರುವುದು ಬಹಳ ಖುಷಿ ಆಗ್ತಿದೆ. ಎಲ್ಲರೂ ಈ ಖುಷಿಯನ್ನು ಸಂಭ್ರಮಿಸುತ್ತಿದ್ದೀವಿ. ಈ ಯಶಸ್ಸನ್ನು ಹೇಗೆ ಸ್ವೀಕರಿಸಬೇಕು ಎನ್ನುವುದು ನಿಜಕ್ಕೂ ಗೊತ್ತಾಗುತ್ತಿಲ್ಲ. ಈ ಸಂಭ್ರಮದಲ್ಲಿ ಮುಂದೇನು ಎನ್ನುವುದು ಕೂಡ ಗೊತ್ತಾಗುತ್ತಿಲ್ಲ"

ಕನ್ನಡಕ್ಕೆ ಮೊದಲ ಆದ್ಯತೆ
"ಬೇರೆ ಭಾಷೆಗಳಿಂದ ಅವಕಾಶ ಸಿಕ್ಕರೂ ನಟಿಸೋಕೆ ಅಭ್ಯಂತರವಿಲ್ಲ. ಆದರೆ ಕಥೆ, ಪಾತ್ರ ಮುಖ್ಯ. ಏನೇ ಇದ್ದರೂ ಕನ್ನಡಕ್ಕೆ ಮೊದಲ ಆದ್ಯತೆ. ಎಲ್ಲಾ ತರಹದ ಪಾತ್ರಗಳನ್ನು ಮಾಡುವ ಆಸೆ ಇದೆ. ಈ ತರ ಪಾತ್ರ ಆ ತರ ಪಾತ್ರ ಎಂದು ಏನು ಇಲ್ಲ. ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಬೇಕು. ಒಳ್ಳೆ ಅವಕಾಶಗಳು ಸಿಕ್ಕರೆ ನಟಿಸುತ್ತೇನೆ. ಸುಖಾಸುಮ್ಮನೆ ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ಎಲ್ಲವನ್ನು ಒಪ್ಪಿಕೊಳ್ಳುವುದಿಲ್ಲ"

ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಸಿದ್ಧ
'ಪಾಪ್ಕಾರ್ನ್ ಮಂಕಿ ಟೈಗರ್' ಹಾಗೂ 'ಕಾಂತಾರ' ಸಿನಿಮಾಗಳಲ್ಲಿ ಸಪ್ತಮಿ ಗೌಡ ಡೀಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಕೂಡ ಬರೀ ಇಂತಹ ಲುಕ್ನಲ್ಲೇ ನಟಿಸ್ತಾರಾ ಎನ್ನುವ ಅನುಮಾನ ಮೂಡುವುದು ಸಹಜ. "ಕಥೆ, ಪಾತ್ರ ಬಯಸಿದರೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಅಡ್ಡಿಯಿಲ್ಲ. ಪಾತ್ರ ಬಹಳ ಮುಖ್ಯ. ಗ್ಲಾಮರಸ್ ಆಗಿ ನಟಿಸಬೇಕು ಎನ್ನುವ ಕಾರಣಕ್ಕೆ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಿಲ್ಲ" ಎಂದು ಸಪ್ತಮಿ ಗೌಡ ಹೇಳಿದ್ದಾರೆ.

"ಸಿನಿಮಾ ಬಿಟ್ಟು ಎಲ್ಲೂ ಹೋಗಲ್ಲ"
ಮೊದಲ ಸಿನಿಮಾ ನಂತರ ಸಪ್ತಮಿ ಗೌಡ ಕೆಲಸ ಮಾಡುತ್ತಿದ್ದರು. ಅಮೆರಿಕಾಗೆ ಹೋಗಿ ಎಂಎಸ್ ಮಾಡುವ ಆಸೆಯಿಂದ ಪರೀಕ್ಷೆ ಬರೆದು ಒಳ್ಳೆ ಅಂಕ ಗಳಿಸಿದ್ದರು. ಫಾರಿನ್ ಫ್ಲೈಟ್ ಹತ್ತಲು ಎಲ್ಲಾ ಸಿದ್ದತೆ ನಡೆದಿತ್ತು. ಅಷ್ಟರಲ್ಲೇ ಕೊರೋನಾ ಹಾವಳಿ ಶುರುವಾಗಿ ಲಾಕ್ಡೌನ್ ಘೋಷಣೆ ಆಗಿತ್ತು. ಹಾಗಾಗಿ ಅದನ್ನು ಅಲ್ಲಿಗೆ ಬಿಟ್ಟಿದ್ದರು. "ಕಾಂತಾರ' ಸಕ್ಸಸ್ ನಂತರ ಬೇರೆ ಆಲೋಚನೆ ಇಲ್ಲ. ಬರೀ ಸಿನಿಮಾ ಸಿನಿಮಾ ಸಿನಿಮಾ" ಎಂದಿದ್ದಾರೆ. ಸಂಪೂರ್ಣವಾಗಿ ಸಿನಿಮಾಗಳಲ್ಲಿ ನಟಿಸೋ ಮನಸ್ಸು ಮಾಡಿದ್ದಾರೆ.


Click it and Unblock the Notifications











