Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂದರ್ಶನ: ಹುಟ್ಟುಹಬ್ಬ ಸಂಭ್ರಮದಲ್ಲಿ 'ಚಿನ್ನಾರಿ ಮುತ್ತ' ಹಂಚಿಕೊಂಡ ಕನಸುಗಳು..
ಡಾ.ರಾಜ್ ಕುಮಾರ್ ಅವರ 'ಚಲಿಸುವ ಮೋಡಗಳು' ಚಿತ್ರದಲ್ಲಿ ನಟಿಸುವ ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ವಿಜಯ್ ರಾಘವೇಂದ್ರ ಅವರು 'ಚಿನ್ನಾರಿ ಮುತ್ತ' ಎಂತಲೇ ಖ್ಯಾತರಾಗಿದ್ದಾರೆ. 'ಚಿನ್ನಾರಿ ಮುತ್ತ' ಚಿತ್ರದ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿ ಮತ್ತು 'ಕೊಟ್ರೇಶಿ ಕನಸು' ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಖ್ಯಾತಿ ವಿಜಯ ರಾಘವೇಂದ್ರ ಅವರದ್ದು.
'ನಿನಗಾಗಿ' ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ವಿಜಯ ರಾಘವೇಂದ್ರ ಈವರೆಗೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆ ಆದ ತಮ್ಮ ಅಭಿನಯದ 'ಹ್ಯಾಪಿ ನ್ಯೂ ಇಯರ್' ಚಿತ್ರದ ಯಶಸ್ಸಿನ ಖುಷಿಯಲ್ಲಿರುವ 'ಚಿನ್ನಾರಿ ಮುತ್ತ'ನಿಗೆ ನಾಳೆ(ಮೇ 26) ಇನ್ನೊಂದು ಸಂತೋಷವಿಷಯ. ಅದೇನಂದ್ರೆ ವಿಜಯ ರಾಘವೇಂದ್ರ ಅವರ ಜನುಮದಿನ.
ಹೌದು. ನಾಳೆ(ಮೇ 26) ನಟ ವಿಜಯ ರಾಘವೇಂದ್ರ ಅವರ ಹುಟ್ಟುಹಬ್ಬ ದಿನವಾಗಿದ್ದು, ಕನ್ನಡಿಗರ ಹೆಮ್ಮೆಯ ಚಿನ್ನಾರಿ ಮುತ್ತನ 38 ನೇ ಜನುಮ ದಿನ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದು, ಫಿಲ್ಮಿಬೀಟ್ ನೊಂದಿಗೆ ಅವರು ಜನುಮ ದಿನ ಆಚರಣೆಯ ವಿಶೇಷತೆ, ಅವರ ಮುಂದಿನ ಪ್ರಾಜೆಕ್ಟ್ ಗಳು, ಅವರು ಅಭಿನಯಿಸಬೇಕು ಎಂದುಕೊಂಡಿರುವ ಕನಸಿನ ಪಾತ್ರಗಳ ಬಗ್ಗೆ ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಅವರು ಏನೆಲ್ಲಾ ಹೇಳಿದ್ರು ತಿಳಿಯಲು ಮುಂದೆ ಓದಿ..
ಸಂದರ್ಶನ: ಸುನೀಲ್, ಬಿಂಡಹಳ್ಳಿ
ನಾಳೆಗೆ ನಿಮಗೆ ಕರೆಕ್ಟ್ ಆಗಿ ಎಷ್ಟು ವರ್ಷ ಆಗುತ್ತೆ?
ಕೆಲವರಿಗೆ ಹುಟ್ಟುಹಬ್ಬ ದಿನ ಬಂತು ಅಂದ್ರೆ ನನಗೆ ಬೇಗ ವಯಸ್ಸಾಗುತ್ತಿದೆ ಅಂತ ಫೀಲ್ ಮಾಡ್ತಾರೆ. ಇನ್ನೂ ಕೆಲವರು ಬರ್ತ್ಡೇ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಈ ಬಗ್ಗೆ ನಟ ವಿಜಯ ರಾಘವೇಂದ್ರ ರವರು ಯಾವ ರೀತಿ ರಿಯಾಕ್ಟ್ ಮಾಡ್ತಾರೆ ತಿಳಿಯಲು ಮೇಲಿನ ಪ್ರಶ್ನೆ ಕೇಳಿದ್ವಿ. ಅದಿಕ್ಕೆ ಅವರು "ರೀ ವಯಸ್ಸು ಹಾಕ್ತಾರಾ...? ನನಗೆ 40 ವರ್ಷಕ್ಕೆ ಎರಡೇ ವರ್ಷ ಬಾಕಿ. ಒಂದು ವಯಸ್ಸನ್ನು ಮರೆಯಬೇಕು. ಅದನ್ನ ನೆನಪಲ್ಲಿ ಇಟ್ಕೊಂಡ್ರೆ ಬರೀ ನಂಬರ್ಸ್ ತರ ಆಗ್ಬಿಡುತ್ತೆ. ಹಾಗಂತ ನಮಗೆ ವಯಸ್ಸಾಗಿಲ್ಲ ಅನ್ನೋ ರೀತಿನೂ ಮಾತಾಡಬಾರದು. ಜವಾಬ್ದಾರಿಗಳು ಹೋಗ್ತಾ ಹೋಗ್ತಾ ಜಾಸ್ತಿಯಾಗ್ತವೆ" ಎಂದು ಪ್ರತಿಕ್ರಿಯಿಸಿದರು.
ನಿಮ್ಮ ಬರ್ತ್ಡೇ ಸೆಲೆಬ್ರೇಶನ್ ವಿಶೇಷತೆ ಏನು?
ಜನುಮದಿನದ ಆಚರಣೆಯನ್ನು ವಿಶೇಷವಾಗಿಯೇನು ಆಚರಣೆ ಮಾಡ್ತಿಲ್ಲ. ಸದ್ಯಕ್ಕೆ ಕುಟುಂಬ ಸಮೇತ ಮಂಗಳೂರಿಗೆ ಹೋಗ್ತಿದ್ದೀವಿ. ಹಾಗೆ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿ ದರ್ಶನ ಪಡೆದು ಬರ್ತೀವಿ.
ಸಿನಿಮಾ ಲೈಫ್ ಮತ್ತು ಪರ್ಸನಲ್ ಲೈಫ್ ಹೇಗಿದೆ? ವ್ಯತ್ಯಾಸಗಳು ಇವೆಯೇ?
-ನನ್ನ ಸಿನಿಮಾ ಮತ್ತು ಪರ್ಸನಲ್ ಲೈಫ್ ಎರಡರಲ್ಲೂ ಅಂತಹ ವಿಭಿನ್ನ ಜರ್ನಿ ಏನು ಇಲ್ಲ. ಸಾಧಾರಣವಾಗಿಯೇ ನಡೆಯುತ್ತಿದೆ. ಇಷ್ಟು ದಿನ ಹೇಗಿತ್ತೋ ಹಾಗೆ ಜೀವನ ಮುಂದುವರೆಯುತ್ತಿದೆ. ಜನರು ಮೊದಲಿನ ರೀತಿನೆ ಪ್ರೀತಿಸುತ್ತಾರೆ. ಅಷ್ಟೆ ವಿಶ್ವಾಸ ತೋರಿಸುತ್ತಾರೆ. ಇತ್ತೀಚೆಗೆ ಹೆಚ್ಚಿನದಾಗಿ ಸಿನಿಮಾದಲ್ಲಿ ಬಿಜಿ ಆಗಿದ್ದೇನೆ.
ನಿಮ್ಮ ನಿರ್ದೇಶನದ ಮೊದಲ ಚಿತ್ರ 'ಕಿಸ್ಮತ್' ತೆರೆಗೆ ಯಾವಾಗ?
-ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ. ಆದರೆ ಇನ್ನೂ ಡೇಟ್ ಫಿಕ್ಸ್ ಮಾಡಿಲ್ಲ.
ನಿರ್ದೇಶನದ ಅನುಭವ ಹೇಗಿತ್ತು?
-ಒಬ್ಬ ನಿರ್ದೇಶಕನಿಗೆ ಒಂದು ಸಿನಿಮಾ ಮಾಡಬೇಕಾದ್ರೆ ಯಾವ ರೀತಿ ಜವಾಬ್ದಾರಿಗಳು ಇರುತ್ತವೆ. ಎಷ್ಟು ವಿಚಾರಗಳನ್ನು ಅವರು ತಲೆಯಲ್ಲಿ ಇಟ್ಟುಕೊಂಡು ಒಂದೇ ದಿಕ್ಕಿನಲ್ಲಿ ಯೋಚಿಸುತ್ತಾ ಹೇಗೆ ನಿರ್ವಹಣೆ ಮಾಡಬೇಕು ಎಂಬ ಹಲವು ವಿಚಾರಗಳನ್ನು ತಿಳಿದುಕೊಂಡೆ.
ಅಭಿನಯಿಸಬೇಕು ಎಂದುಕೊಂಡು ಇನ್ನೂ ಉಳಿದಿರುವ ನೆಚ್ಚಿನ ಪಾತ್ರಗಳು?
ಕಂಡಿತ ಸಾಕಷ್ಟು ಪಾತ್ರಗಳಿವೆ. ನನ್ನ ತುಂಬಾ ದೊಡ್ಡ ಆಸೆ ಇರುವುದು ಅಂಗ ವೈಕಲ್ಯ ಮತ್ತು ಬುದ್ಧಿಮಾಂದ್ಯ ಪಾತ್ರಗಳಲ್ಲಿ ನಟಿಸಬೇಕು ಎಂಬುದು. ಅಲ್ಲದೇ ತುಂಬಾ ಭಾವನಾತ್ಮಕವಾದ ಪಾತ್ರಗಳು, ಮೈಥಾಲಜಿಕಲ್ ಪಾತ್ರಗಳು, ನಮ್ಮ ದೊಡ್ಡ ಮಾವರವರು(ಡಾ.ರಾಜ್ ಕುಮಾರ್) ಮಾಡುತ್ತಿದ್ದ ಕನಕದಾಸರು, ಪುರಂದರದಾಸರು ಗಳಂತಹ ಪಾತ್ರದಲ್ಲಿ ಮತ್ತು ಐತಿಹಾಸಿಕ ಪಾತ್ರಗಳಲ್ಲಿ ಅಭಿನಯಿಸುವ ಆಸೆ ಇದೆ.
'ಡ್ರಾಮಾ ಜೂನಿಯರ್ಸ್' ಜಡ್ಜ್ ಆಗಿ ನಿಮ್ಮ ಅನುಭವ ಮತ್ತು ಅನಿಸಿಕೆ...
'ಡ್ರಾಮಾ ಜ್ಯೂನಿಯರ್ಸ್' ನಲ್ಲಿ ಬಹಳ ಟ್ಯಾಲೆಂಟೆಂಡ್ ಮಕ್ಕಳು ಇದ್ರು. ಅವರ ಪಾತ್ರ ನೋಡುವ ಭಾಗ್ಯ ನನಗೆ ಸಿಕ್ಕಿತ್ತು. ಇನ್ನೊಂದು ಲಕ್ಷ್ಮಿ ಅಮ್ಮ ಮತ್ತು ಟಿ.ಎನ್.ಸೀತಾರಾಂ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದೇ ಬಹಳ ದೊಡ್ಡ ವಿಷಯ. ಆಮೇಲೆ ಮಾಸ್ಟರ್ ಆನಂದ್ ಸಹ ಜೊತೆಗೆ ಇರುತ್ತಾರೆ. ಅದೊಂದು ಕುಟುಂಬ. ಪ್ರತಿಯೊಂದು ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ.
ಜಡ್ಜ್ ಮೆಂಟ್ ಬಗ್ಗೆ ವಿಜಯ ರಾಘವೇಂದ್ರ ಹೇಳಿದ್ದು...
ಮಕ್ಕಳ ಮನಸ್ಸುಗಳನ್ನು ನೋಯಿಸಬಾರದು, ಜಡ್ಜ್ ಮಾಡಬೇಕಾದ್ರೆ ಅಷ್ಟೇ ನ್ಯಾಯಯುತವಾಗಿರಬೇಕು. ಕಾರ್ಯಕ್ರಮಕ್ಕೆ, ನೋಡುತ್ತಿರುವ ಪ್ರೇಕ್ಷಕರಿಗೆ ಮೋಸ ಆಗಬಾರದು. ಹಾಗೆ ನಮ್ಮ ಜಡ್ಜ್ ಮೆಂಟ್ ಇರುತ್ತೆ. ಇದೊಂದು ರೀತಿಯ ಸವಾಲು. ಸತ್ಯ ಯಾರ ಕಣ್ಣನ್ನು ತಪ್ಪಿಸೋಕು ಆಗಲ್ಲ. ಅದನ್ನ ಹಿತವಾಗಿ ಹೇಳಬೇಕು ನಾವು ಅಷ್ಟೆ.
ಮುಂದಿನ ಸಿನಿಮಾಗಳು ಯಾವುವು?
'ಜಾನಿ' ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. 'ಧರ್ಮಸ್ಯ' ಎಂಬ ಚಿತ್ರದ ಶೂಟಿಂಗ್ ನಡೀತಿದೆ. ''ಲೀಡರ್' ಚಿತ್ರೀಕರಣ ಮುಗಿದಿದೆ. 'ರಾಜ ಲವ್ಸ್ ರಾಧೆ' ಸಿನಿಮಾ ರೆಡಿಯಾಗ್ತಿದೆ.
ನಿಮ್ಮ ನಿರ್ದೇಶನದ ಮುಂದಿನ ಸಿನಿಮಾಗಳು...
ಪ್ಲಾನ್ ಆಗಿದೆ. ಆದರೆ ಅವುಗಳನ್ನು 2018 ರಲ್ಲಿ ಮಾಡಬೇಕು ಅಂದುಕೊಂಡಿದ್ದೇನೆ. ಅದರ ಬಗ್ಗೆ ಹೆಚ್ಚು ವಿವರಣೆ ನೀಡಲು ಆಗುವುದಿಲ್ಲ.
ಫಿಲ್ಮಿಬೀಟ್ ಕಡೆಯಿಂದ ಶುಭಾಶಯಗಳು
ವಿಜಯ ರಾಘವೇಂದ್ರ ರವರಿಗೆ ಫಿಲ್ಮಿಬೀಟ್ ಕಡೆಯಿಂದ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.