ಸಂದರ್ಶನ : ಜನರ ನಿರೀಕ್ಷೆ ಈಡೇರಿಸಲಿಲ್ಲ ಅಂದ್ರೆ ನಾವು ಮಾಡೋದೆ ವೇಸ್ಟ್
Recommended Video

ಅಪ್ಪ ಹೀರೋ ಆದ್ರೆ, ಮಗ ಕೂಡ ಹೀರೋ ಆಗಬೇಕು ಎಂಬ ನಿಯಮ ಎಲ್ಲಿಯೂ ಇಲ್ಲ. ಆದರೂ ಸಿನಿಮಾ ಎನ್ನುವುದು ಎಲ್ಲರನ್ನು ಸೆಳೆದು ಬಿಡುತ್ತದೆ. ಈಗಾಗಲೇ ಅನೇಕ ಸ್ಟಾರ್ ಗಳ ಮಕ್ಕಳು ಚಿತ್ರರಂಗಕ್ಕೆ ಬಂದು ಅಪ್ಪನ ಹೆಸರಿಗೆ ಗೌರವ ತಂದುಕೊಟ್ಟಿದ್ದಾರೆ. ಈಗ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಕೂಡ ಫಿಲ್ಡ್ ಗೆ ಇಳಿದಿದ್ದಾರೆ.
ಅಪ್ಪನ ಸಿನಿಮಾಗಳನ್ನು ನೋಡಿ ಬೆಳೆದ ಅಭಿಷೇಕ್ ಈಗ ತಾವೂ ಅಪ್ಪನ ರೀತಿ ಸಿನಿಮಾರಂಗಕ್ಕೆ ಬಂದಿದ್ದಾರೆ. ಇಂದು ಅವರ ಸಿನಿಮಾ ಬದುಕು ಶುರುವಾಗಿದೆ. ಒಂದು ಕಡೆ ಅಂಬಿ ಮಗನ ಸಿನಿಮಾ ಎಂಬ ಜನರ ನಿರೀಕ್ಷೆ, ಇನ್ನೊಂದು ಕಡೆ ತನ್ನ ಸ್ವತಃ ಪ್ರತಿಭೆ ಸಾಬೀತು ಮಾಡಬೇಕು ಎಂಬ ಕನಸು ಈ ಎರಡರ ಜೊತೆಗೆ ಸ್ಯಾಂಡಲ್ ವುಡ್ ಗೆ ಅಭಿಷೇಕ್ ಆಗಮನ ಆಗಿದೆ.
ಇಂದು ಅಭಿಷೇಕ್ ಅವರ ಮೊದಲ ಸಿನಿಮಾ 'ಅಮರ್' ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಪೂಜೆ, ಫಸ್ಟ್ ಶಾಟ್, ಅಪ್ಪನ ಆಶೀರ್ವಾದ, ಮೂರ್ನಾಲ್ಕು ಟಿವಿ ಸಂದರ್ಶನ ಮುಗಿಸಿ ಬಂದ ಯಂಗ್ ರೆಬಲ್ ಸ್ಟಾರ್ ನಮ್ಮ ಜೊತೆಗೆ ಮಾತು ಶುರು ಮಾಡಿದರು. ಮುಂದೆ ಓದಿ...

'ಮೊದಲು' ಎನ್ನುವುದು ಜೀವನದಲ್ಲಿ ತುಂಬ ಮುಖ್ಯ. ನೀವು ಇಂದು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದೀರಾ ಹೇಗನಿಸುತ್ತಿದೆ?
''ಫಸ್ಟ್ ಡೇ ಸ್ಕೂಲ್ ಗೆ ಹೋದಾಗ, ಫಸ್ಟ್ ಡೇ ಕಾಲೇಜ್ ಗೆ ಹೋದಾಗ ಎಷ್ಟು ಖುಷಿ ಆಗುತ್ತದೆಯೋ ಅದಕ್ಕೆ ಮೀರಿದ ಖುಷಿ ಇವತ್ತು ನನಗೆ ಆಗುತ್ತಿದೆ. ನನ್ನ ಮೊದಲ ಸಿನಿಮಾ ಇಂದು ಲಾಂಚ್ ಆಗಿದೆ. ಸೋ, ಈ ಬಗ್ಗೆ ತುಂಬ ಉತ್ಸುಕನಾಗಿದ್ದೇನೆ.''

ಅಂಬರೀಶ್ ಅವರ ಮಗ ಎಂದ ತಕ್ಷಣ ತುಂಬ ನಿರೀಕ್ಷೆ ಇರುತ್ತದೆ. ಅದು ನಿಮಗೆ ಪ್ಲಸ್ ಎನಿಸುತ್ತಾ ಅಥವಾ ಮೈನಸ್ ಎನಿಸುತ್ತಾ ?
''ಅಂಬರೀಶ್ ಮಗ ಎನ್ನುವುದರಲ್ಲಿ ಯಾವುದೇ ಮೈನಸ್ ಇಲ್ಲ. ಅದು 100% ನನಗೆ ಪ್ಲಸ್ ಆಗಿದೆ. ಜನರ ನಿರೀಕ್ಷೆ ಇದ್ದರೇ ಇರಲಿ. ಅದನ್ನು ಈಡೇರಿಸುವುದು ನಮ್ಮ ಕರ್ತವ್ಯ. ಅದಕ್ಕೆ ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಅದನ್ನು ಮಾಡಿಲ್ಲ ಅಂದ್ರೆ ನಾವು ವೆಸ್ಟ್.''

ಇಂದಿನ ಇಂಡಸ್ಟ್ರಿಗೆ ಬರೋಕ್ಕೆ ಏನೇಲ್ಲ ತಯಾರಿ ಮಾಡಿಕೊಂಡಿದ್ದೀರಾ ?
''ಈ ಜನರೇಷನ್ ಗೆ ತಯಾರಿ ಬೇಕೇ ಬೇಕು. ಅದಕ್ಕೆ ಎರಡ್ಮೂರು ವರ್ಷ ಆಕ್ಟಿಂಗ್, ಡ್ಯಾನ್ಸ್, ಫೈಟ್ ಎಲ್ಲ ಮಾಡಿದ್ದೇನೆ. ದಿನ ಜಿಮ್ ಗೆ ಹೋಗಿದ್ದೇನೆ. ಕಷ್ಟ ಪಟ್ಟು ಕೆಲಸ ಕಲಿತಿದ್ದೇನೆ. ಈ ಸಿನಿಮಾಗಾಗಿ ತುಂಬ ಡೆಡಿಕೇಟ್ ಮಾಡಿದ್ದೇನೆ. ಇಂದಿನ ನಟರ ಜೊತೆಗೆ ನಾವು ಆಕ್ಟ್ ಮಾಡಬೇಕು ಅಂದರೆ ತಯಾರಿ ಮಾಡಿಕೊಳ್ಳಲೇ ಬೇಕು.''

ನೀವು ಇಂಡಸ್ಟ್ರಿಗೆ ಬರ್ತಿದ್ದೀರಿ ಎಂದಾಗ ತುಂಬ ನಟರು ನಿಮಗೆ ಶುಭ ಕೋರಿದರು. ಎಂಬ ಒಳ್ಳೆಯ ಸ್ವಾಗತ ನಿಮಗೆ ಸಿಕ್ಕದೆ ಅಲ್ವಾ?
''ಆ ವಿಷಯದಲ್ಲಿ ನಾನು ತುಂಬ ಲಕ್ಕಿ ಅಂತ ಹೇಳಬೇಕು. ಇದು ನಮ್ಮ ತಂದೆ ಕಡೆಯಿಂದ ಬಂದ ಆಶೀರ್ವಾದ. ಜನರ ಜೊತೆಗೆ ಸ್ಟಾರ್ ಗಳು ಸಹ ತುಂಬ ಪಾಸಿಟಿವ್ ಆಗಿ ಸಪೋರ್ಟ್ ಮಾಡುತ್ತಿದ್ದಾರೆ. ಅದು ನನಗೆ ಧೈರ್ಯ ಹಾಗೂ ಆತ್ಮವಿಶ್ವಾಸ ತಂದಿದೆ''.

ಹೀರೋ ಆಗಬೇಕು ಎಂಬುದು ಯಾರ ಆಯ್ಕೆ? ನಿಮ್ಮ ಆಯ್ಕೆನಾ, ಅಥವಾ ಅಪ್ಪ ಅಮ್ಮನ ಆಯ್ಕೆನಾ?
''ನಾನು ನಟ ಆಗಿ ಇಂಡಸ್ಟ್ರಿಗೆ ಬರಬೇಕು ಎನ್ನುವುದು ಮೂರೂ ಜನರ ನಿರ್ಧಾರ. ನಮ್ಮ ಮನೆಯ ಯಾವುದೇ ವಿಚಾರ ಇದ್ದರೂ ಅಪ್ಪ ಅಮ್ಮ ನಾನು ಮೂರು ಜನರು ಸೇರಿ ಮಾತನಾಡುತ್ತೇವೆ. ಇದು ಕೂಡ ಅದೇ ರೀತಿ ಆಯ್ತು.''

ಅಭಿಷೇಕ್ ಅವರನ್ನು ತುಂಬ ಜನ ಲಾಂಚ್ ಮಾಡುತ್ತಾರೆ ಅಂತ ಸುದ್ದಿ ಇತ್ತು. ಫೈನಲ್ ಆಗಿ ನಾಗಶೇಖರ್ ನಿಮ್ಮನ್ನು ಲಾಂಚ್ ಮಾಡುತ್ತಿದ್ದಾರೆ ಅವರ ಬಗ್ಗೆ ಹೇಳಿ.?
''ನಾಗಶೇಖರ್ ಈ ಚಿತ್ರಕ್ಕಾಗಿ ಬಹಳ ಕಷ್ಟ ಪಡುತ್ತಿದ್ದಾರೆ. ತುಂಬ ಕೇರ್ ಮಾಡುತ್ತಾರೆ. ಅವರ ಜೊತೆಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ಚಿತ್ರಕ್ಕಾಗಿ ಬಹಳ ಕೆಲಸ ಮಾಡುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಲಾಂಚ್ ಆಗುತ್ತಿರುವುದು ಖುಷಿ ನೀಡಿದೆ.''

ರಾಜ್, ವಿಷ್ಣು, ಅಂಬಿ, ಅವರದ್ದು ಒಂದು ಜನರೇಶನ್, ಶಿವಣ್ಣ, ದರ್ಶನ್, ಸುದೀಪ್ ಅವರದ್ದು ಮತ್ತೊಂದು ಜನರೇಷನ್. ಮುಂದೆ ನಿಮ್ಮ ಜನರೇಶನ್ ನಟರ ಮೇಲೆ ಇರೋ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತೀರಾ ?
''ಹೌದು, ನಾವು ಒಳ್ಳೆಯ ಸಿನಿಮಾ ಮಾಡಬೇಕು. ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರಿಗೂ ತೊಂದರೆ ನೀಡದೆ, ಎಲ್ಲ ನಿರ್ದೇಶಕ ನಿರ್ಮಾಪಕರ ಜೊತೆಗೆ ಚೆನ್ನಾಗಿ ಇರಬೇಕು. ಬೇರೆ ವಿಷಯಗಳನ್ನು ಮರೆತು ಸಿನಿಮಾ ಬಗ್ಗೆ ಗಮನ ಹರಿಸಿದರೆಮುಂದೆ ಕನ್ನಡ ಇಂಡಸ್ಟ್ರಿಯನ್ನು ಚೆನ್ನಾಗಿ ತೆಗೆದುಕೊಂಡು ಹೋಗಬಹುದು.''


Click it and Unblock the Notifications