ಸಂದರ್ಶನ : ರಿಷಿ ಹುಟ್ಟುಹಬ್ಬದ ಖುಷಿ ಹೆಚ್ಚು ಮಾಡಿದ ಭಾವಿ ಪತ್ನಿ
ಒಂದು ಸಿನಿಮಾ ಬಿಡುಗಡೆಯಾಯ್ತು. ಆ ಸಿನಿಮಾ, ಆ ನಟನಿಗೆ ಐದಾರು ಅವಕಾಶಗಳು ನೀಡಿದೆ. ನೋಡು ನೋಡುತ್ತ ಆ ನಟ ಬ್ಯುಸಿಯಾದರು. ಕಾಲಿವುಡ್ ಸ್ಟಾರ್ ಧನುಷ್ ಅವರ ಸಿನಿಮಾಗೆ ಬಂಡವಾಳ ಹಾಕಿದರು. ಹೀಗೆ ಹಂತ ಹಂತವನ್ನು ಸ್ಯಾಂಡಲ್ ವುಡ್ ನಲ್ಲಿ ಬೆಳೆಯುತ್ತಿರುವ ನಟ ಎಂದರೆ ಅದು ರಿಷಿ.
ನಟ ರಿಷಿರನ್ನು ತೆರೆ ಮೇಲೆ ನೋಡಲು ಖುಷಿ ಆಗುತ್ತದೆ. ಅವರ ಲವಲವಿಕೆಯ ನಟನೆ ಎಲ್ಲರಿಗೂ ಇಷ್ಟ ಆಗುತ್ತದೆ. ಇನ್ನು, ನಟ ರಿಷಿ ಇಂದು (ಜೂನ್ 21) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಒಂದು ಕಡೆ 'ಕವಲುದಾರಿ' ಸಿನಿಮಾ ಹಿಟ್ ಆಗಿದೆ. ಮತ್ತೊಂದು ಕಡೆ ರಿಷಿ ನಿಶ್ಚಿತಾರ್ಥ ಆಗಿದ್ದು, ಮದುವೆ ತಯಾರಿ ನಡೆಯುತ್ತಿದೆ. ಮುಂದಿನ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಇದೆ.
ಅಂದಹಾಗೆ, ಹುಟ್ಟುಹಬ್ಬದ ಖುಷಿಯಲ್ಲಿ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ನಟ ರಿಷಿ ಮಾತನಾಡಿದ್ದಾರೆ. ಅವರ ಸಂದರ್ಶನ ಮುಂದಿದೆ ಓದಿ...

ಹೇಗಿದೆ ಈ ವರ್ಷದ ಹುಟ್ಟುಹಬ್ಬ ಆಚರಣೆ?
ಈ ವರ್ಷ ತುಂಬ ಚೆನ್ನಾಗಿ ಶುರು ಆಗಿದೆ. 'ಕವಲುದಾರಿ' ಸಿನಿಮಾ ಒಂದು ದೊಡ್ಡ ಹಿಟ್ ಆಗಿದೆ. ಇಂದು 'ಸಾರ್ವಜನಿಕರಿಗಾಗಿ ಸುವರ್ಣಾವಕಾಶ' ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಈ ವರ್ಷ ನನ್ನ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿರುವ ಕಾರಣ ಬಹಳ ಖುಷಿಯಲ್ಲಿ ಇದ್ದೇನೆ.

ಚಿಕ್ಕ ವಯಸ್ಸಿನಿಂದ ನಿಮ್ಮ ಹುಟ್ಟುಹಬ್ಬ ಆಚರಣೆ ಮಾಡುವ ರೂಡಿ ಇದ್ಯಾ?
ಚಿಕ್ಕ ವಯಸ್ಸಿನಲ್ಲಿ ಫ್ರೆಂಡ್ ಗಳನ್ನು ಮನೆಗೆ ಕರೆದುಕೊಂಡು ಬರೋದು, ಕೇಕ್ ಮಾಡುವುದು ನಡೆಯುತ್ತಿತ್ತು. ಸ್ಕೂಲ್ ಗೆ ಚಾಕ್ಲೇಟ್ ತೆಗೆದುಕೊಂಡು ಹೋಗಿ ಎಲ್ಲರಿಗೂ ಕೊಡುತ್ತಿದ್ವಿ. ಸ್ವಲ್ಪ ದೊಡ್ಡವರಾದ ಮೇಲೆ ಆಚರಣೆಗಳು ಕಡಿಮೆಯಾಗಿವೆ. ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಇರುವ ಅಭ್ಯಾಸ ಮಾಡಿಕೊಂಡಿದ್ದೇನೆ. ಅದಕ್ಕೂ ಮುಂಚೆ ಬರ್ತ್ ಡೇ ಎನ್ನುವುದು ಅಷ್ಟೆನು ಸ್ಪೆಷಲ್ ಅನಿಸುತ್ತಿರಲಿಲ್ಲ.

ರಿಷಿ ಕೈನಲ್ಲಿ ಈಗ ಎಷ್ಟು ಸಿನಿಮಾಗಳು ಇವೆ ?
'ಸಾರ್ವಜನಿಕರಿಗಾಗಿ ಸುವರ್ಣಾವಕಾಶ' ಮತ್ತು ಜೇಕಬ್ ವರ್ಗೀಸ್ ನಿರ್ದೇಶನದ 'ಸಕಲಕಲಾವಲ್ಲಭ' ಸಿನಿಮಾ ಈ ವರ್ಷ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಧನುಷ್ ಸರ್ ಸಹ ನಿರ್ಮಾಪಕರಾಗಿದ್ದಾರೆ. 'ಗಾಳಿಪಟ 2', 'ರಾಮನ ಅವತಾರ' ಸಿನಿಮಾಗಳ ಚಿತ್ರೀಕರಣ ಇನ್ನು ಪ್ರಾರಂಭ ಆಗಬೇಕಿದೆ.

ನಿಶ್ಚಿತಾರ್ಥ ಆಗಿದೆ, ಭಾವಿ ಪತ್ನಿ ಕಡೆಯಿಂದ ಏನು ಗಿಫ್ಟ್ ಸಿಕ್ತು?
ಅವಳೇ ನನಗೆ ಮೊದಲ ವಿಶ್ ಮಾಡಿದ್ದು...ಲೈಫ್ ನಲ್ಲಿ ನಮ್ಮ ಜೊತೆ, ನಮಗಾಗಿ ಮತ್ತೊಬ್ಬರು ಇದ್ದಾರೆ ಎಂದಾಗ ಬಹಳ ಖುಷಿ ಆಗುತ್ತದೆ. ನಮ್ಮ ಹುಟ್ಟುಹಬ್ಬದ ಬಗ್ಗೆ ಅವರೇ ಹೆಚ್ಚು ಉತ್ಸಾಹದಿಂದ ಇದ್ದಾಗ, ನಮಗೂ ಬರ್ತ್ ಡೇ ಮಾಡಿಕೊಳ್ಳುವ ಮನಸ್ಸಾಗುತ್ತದೆ. ಮದುವೆ ಆಗೋಕೆ ಮುಂಚೆಯ, ಕೊನೆಯ ಹುಟ್ಟುಹಬ್ಬ ಇದು.

ಒಂದೇ ಒಂದು ಸಿನಿಮಾ ರಿಲೀಸ್ ಆದ ಬಳಿಕ ಆರು ಸಿನಿಮಾ ಆಫರ್ ಸಿಕ್ಕಿತ್ತು, ಆ ಬಗ್ಗೆ ಹೇಗನಿಸುತ್ತದೆ?
'ಆಪರೇಷನ್ ಅಲಮೇಲಮ್ಮ' ಸಿನಿಮಾಗೂ ಮುಂಚೆಯೇ 'ಕವಲುದಾರಿ' ಸಿನಿಮಾಗೆ ನಾನು ಸಹಿ ಹಾಕಿದ್ದೆ. ಅಲಮೇಲಮ್ಮ ಬಿಡುಗಡೆಯಾದ ಬಳಿಕ ಧನುಷ್ ಸರ್ ನಿರ್ಮಾಣದ ಸಿನಿಮಾ ಅವಕಾಶ ಸಿಕ್ತು. 'ಸಾರ್ವಜನಿಕರಿಗಾಗಿ ಸುವರ್ಣಾವಕಾಶ' ಚಿತ್ರದ ಪಾತ್ರ ಕೂಡ ಅಲಮೇಲಮ್ಮ ಸಿನಿಮಾ ನೋಡಿಯೇ ಸಿಕ್ಕಿದ್ದು. ಹೀಗೆ ಒಂದಷ್ಟು ಸಿನಿಮಾಗಳು ಇವೆ. ಆದರೆ, ಜಾಸ್ತಿ ಸಿನಿಮಾ ಇಟ್ಟುಕೊಂಡರೆ ಒಳ್ಳೆಯದು ಎನ್ನುವುದಕ್ಕಿಂತ, ಒಂದು ಪಾತ್ರ, ಸಿನಿಮಾ ಒಪ್ಪಿಕೊಳ್ಳಲು ನಮಗೆ ಉತ್ಸಾಹ ನೀಡುತ್ತದೆಯೇ ಎನ್ನುವುದು ಮುಖ್ಯ. ಕಥೆ ಇಷ್ಟ ಆಗದೇ ಖಂಡಿತ, ಸಿನಿಮಾ ಮಾಡಲ್ಲ.

ಮುಂದೆ ಯಾವ ನಿರ್ದೇಶಕರ ಚಿತ್ರದಲ್ಲಿ ನಟಿಸುವ ಆಸೆ ಇದೆ?
ನನಗೆ ನಮ್ಮ ಕನ್ನಡದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಆಸೆ ಇದೆ. ನಾನು ಇತ್ತ ಮಾಸ್ ಸಿನಿಮಾವನ್ನೂ ಏಂಜಾಯ್ ಮಾಡುತ್ತೇನೆ. ಅತ್ತ ಫಿಲ್ಮ್ ಫೆಸ್ಟಿವಲ್ ನಲ್ಲಿ ಬರುವ ಸಿನಿಮಾವನ್ನು ಇಷ್ಟ ಪಡುತ್ತಾನೆ. ಹೀಗಾಗಿ, ತುಂಬ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಆಸೆ ಇದೆ.

ರಚಿತಾ ರಾಮ್ ನಿಮ್ಮ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತ ಪಡಿಸಿದರು, ನಿಮಗೆ ಇದು ಕೇಳಿ ಎಷ್ಟು ಖುಷಿ ಆಯ್ತು ?
ಅವರು ತುಂಬ ಸ್ವೀಟ್. ನನ್ನ ಬಗ್ಗೆ ಹೀಗೆ ಹೇಳಿರುವುದು ಅವರ ದೊಡ್ಡ ಗುಣ. ಅವರು ಈಗ ನಂಬರ್ 1 ನಟಿ. ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ ಎನ್ನುವುದು ಖುಷಿ ನೀಡುವ ವಿಷಯ. ಅವರು ನನ್ನ ಹೆಸರು ತೆಗದುಕೊಂಡಾಗ ತುಂಬ ಖುಷಿ ಆಗುವ ವಿಷಯ. ಒಂದು ಒಳ್ಳೆಯ ಅವಕಾಶ ಸಿಕ್ಕರೆ, ಅವರ ಜೊತೆಗೆ ನಟನೆ ಮಾಡುತ್ತೇನೆ.


Click it and Unblock the Notifications











