ಶಿವರಾಜ್ ಕುಮಾರ್ ಸಂದರ್ಶನ: ಹುಟ್ಟುಹಬ್ಬ, ಸಿನಿಮಾ ಮತ್ತು ಕೊರೊನಾ
ಶಿವರಾಜ್ ಕುಮಾರ್ ಅವರ ಜನ್ಮದಿನ ಈಗಷ್ಟೆ ಮುಗಿದಿದೆ. ಕಳೆದ ವರ್ಷ ಸರ್ಜರಿ ನಡೆದಿದ್ದ ಕಾರಣ ಜನ್ಮದಿನ ಆಚರಿಸಿರಲಿಲ್ಲ. ಈ ವರ್ಷ ಕೊರೊನಾ ಕಾರಣದಿಂದ ಮನೆ ಮುಂದೆ ಅಭಿಮಾನಿಗಳೊಂದಿಗೆ ಜನ್ಮದಿನಾಚರಣೆ ಮಾಡಲಿಲ್ಲ. ಅಭಿಮಾನಿಗಳು ಬಂದರೆ ಅವರನ್ನು ಭೇಟಿಯಾಗದೆ ಮನೆ ಒಳಗೆ ಇರಲು ಸಾಧ್ಯವಿಲ್ಲ.
Recommended Video
ಹಾಗಾಗಿ ಮನೆಯಲ್ಲೇ ಇರುವುದು ಬೇಡ ಎಂದು ನಿರ್ಧರಿಸಿ ಹೊರಗೆ ಹೋಗಿದ್ದರು ಶಿವಣ್ಣ. ಆದರೆ ಈ ಬಾರಿ ಒಂದು ವಿಶೇಷ ಸಂಭವಿಸಿದೆ. ಶಿವಣ್ಣನ ಓವರ್ಸೀಸ್ ಅಭಿಮಾನಿಗಳು ಸೇರಿ ಜೂಮ್ ಕಾಲ್ ಮೂಲಕ 50ರಷ್ಟು ವಿದೇಶಗಳನ್ನು ಪ್ರತಿನಿಧಿಸುವ ಒಬ್ಬೊಬ್ಬ ಅಭಿಮಾನಿಯಿಂದ ಶುಭ ಹಾರೈಕೆ ಮಾಡಿದ್ದಾರೆ.
ಬಹುಶಃ ಇಂಥದೊಂದು ಪ್ರಯತ್ನ ಕನ್ನಡದಲ್ಲಂತೂ ಮೊದಲ ಬಾರಿ ನಡೆದಿದೆ. ಒಟ್ಟಿನಲ್ಲಿ ದೇಶ ವಿದೇಶಗಳಿಂದ ಶುಭಾಶಯಗಳ ಸುರಿಮಳೆಯನ್ನು ಪಡೆಯುತ್ತಿದ್ದಾರೆ. ನಾಡಿನ ತಮ್ಮ ಅಭಿಮಾನಿಗಳಿಗೆ ಅವರು ಏನು ಹೇಳಲು ಬಯಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಬಗ್ಗೆ ಡಾ. ಶಿವರಾಜ್ ಕುಮಾರ್ ಅವರನ್ನು ಫಿಲ್ಮೀಬೀಟ್' ಮಾತನಾಡಿಸಿದಾಗ ಅವರು ನೀಡಿದ ಆಕರ್ಷಕ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

ಈ ಬಾರಿಯ ಜನ್ಮದಿನಾಚರಣೆ ಹೇಗಿತ್ತು?
ನಾನು ಮನೆಯಲ್ಲಿರುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಅದೇ ರೀತಿ ಆಚರಣೆಯ ಬಗ್ಗೆ ಕೂಡ ಯಾವುದೇ ಯೋಜನೆ ಹಾಕಿಕೊಂಡಿರಲಿಲ್ಲ. ಯಾಕೆಂದರೆ ಸಂಭ್ರಮೋತ್ಸಾಹದಿಂದ ಆಚರಿಸುವ ಸಂದರ್ಭ ಸದ್ಯಕ್ಕೆ ನಮ್ಮ ದೇಶದಲ್ಲಿಲ್ಲ. ಮಾತ್ರವಲ್ಲ, ಅಭಿಮಾನಿಗಳೊಂದಿಗೆ ಗುಂಪು ಸೇರಿ ಆಚರಿಸುವುದೇ ಸಮಸ್ಯೆಗೆ, ಕೊರೊನಾದ ಹರಡುವಿಕೆಗೆ ಕಾರಣವಾಗಬಹುದು. ನಾನಿಂದು ದೊಡ್ಡ ಮಟ್ಟದಲ್ಲಿ ಬರ್ತ್ ಡೇ ಆಚರಿಸುವ ಮಟ್ಟಕ್ಕೆ ಬೆಳೆದಿದ್ದರೆ ಅದು ಅಭಿಮಾನಿಗಳಿಂದಾಗಿ. ಅಂಥ ಅಭಿಮಾನಿಗಳಿಗೆ ರೋಗ ಹರಡಬಹುದಾದ ಸಂದರ್ಭ ಸೃಷ್ಟಿಸಿ, ಅವರಿಗೆ ಅಪಾಯ ಉಂಟು ಮಾಡುವಂಥ ಸನ್ನಿವೇಶದಲ್ಲಿ ಬರ್ತ್ ಡೇ ಮಾಡಬೇಕಾದ ಅಗತ್ಯ ಏನಿದೆ? ಬರ್ತ್ ಡೇ ಮುಂದಿನ ವರ್ಷ ಬೇಕಾದರೂ ಆಚರಿಸಬಹುದು. ಬದುಕು ಮುಖ್ಯ.

ಮಗಳ ಜನ್ಮದಿನಾಚರಣೆಯ ಖುಷಿಯಲ್ಲೇ ನಿಮ್ಮ ಜನ್ಮದಿನದ ಖುಷಿಯೂ ಸೇರಿತ್ತೇ?
ಹಾಗಲ್ಲ. ನಿರುಪಮಾ ಬರ್ತ್ ಡೇಯನ್ನು ನಾವು ಚಿಕ್ಕದಾಗಿ ಮನೆಯಲ್ಲೇ ಆಚರಿಸಿದೆವು. ತಮ್ಮಂದಿರು ಹಾರೈಸಿದ್ದು ಒಂದಷ್ಟು ಸುದ್ದಿಯಾಗಿದ್ದು ಬಿಟ್ಟರೆ ಅದು ಯಾವತ್ತೂ ಸಾರ್ವಜನಿಕ ಆಚರಣೆ ಅಲ್ಲ. ಶುಭಾಶಯಗಳು ಫೋನ್ ಮೂಲಕ ನನಗೆ ಈಗಲೂ ಬರುತ್ತಿವೆ. ಅವುಗಳನ್ನು ನಾನು ಸ್ವೀಕರಿಸುತ್ತಲೂ ಇದ್ದೇನೆ. ಸುಮಾರು ಐವತ್ತು ದೇಶಗಳಿಂದ ಜೂಮ್ ಕಾಲ್ ಮೂಲಕ ಶುಭಕೋರಿದ್ದಾರೆ! ಯುಎಸ್, ಕೆನಡಾ, ಆಸ್ಟ್ರೇಲಿಯಾ, ಮಲೇಷ್ಯಾ, ಇಂಡೋನೇಶ್ಯಾ, ಸಿಂಗಾಪೂರ್, ಥೈಲ್ಯಾಂಡ್, ಬಹ್ರೈನ್ ಹೀಗೆ ನಾನು ಇದುವರೆಗೆ ಹೋಗಿರದ ದೇಶಗಳಿಂದಲೂ ಶುಭ ಹಾರೈಕೆಗಳು ಬಂದಿವೆ. ಅವರು ಅಲ್ಲಿಂದ ಆಯಾ ದೇಶಗಳ ಭಾಷೆಯಲ್ಲಿ, ಜತೆಗೆ ನಮ್ಮ ರಾಜ್ಯದೊಳಗಿನ ತುಳು, ಕೊಡವ ಭಾಷೆಗಳಲ್ಲಿಯೂ ಶುಭ ಕೋರಿದ್ದಾರೆ.
ಇಟಲಿಯಿಂದ ವಿದೇಶಿಯೊಬ್ಬರು ಕನ್ನಡದಲ್ಲೇ ಮಾತನಾಡಿ ಶುಭ ಕೋರಿದ್ದಾರೆ. ಅಪ್ಪಾಜಿಯ, ನನ್ನ ಸಿನಿಮಾ ನೋಡಿ ಕನ್ನಡ ಕಲಿತಿರುವುದಾಗಿ ಅವರು ಹೇಳಿದಾಗ ಖುಷಿಯಾಯಿತು. ಹಾಗಂತ ವಿದೇಶದಿಂದ ಶುಭ ಕೋರಿದರೆ, ಫೋನ್ ಮೂಲಕ ಶುಭಾಶಯ ಕೋರಿದರೆ ಮಾತ್ರ ಸಂಭ್ರಮ ಅಂತ ಅಲ್ಲ; ನಾನು ಪ್ರತಿಯೊಬ್ಬ ಅಭಿಮಾನಿ ಕೂಡ ಮನದಲ್ಲಿ ಹಾರೈಸುವ ಶುಭಾಶಯವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಅವರ ಪ್ರೀತಿಯನ್ನು ನಂಬಿರುವ ಕಾರಣದಿಂದಲೇ ನನಗೆ ವಯಸ್ಸಾಗ್ತಿರೋ ಫೀಲೇ ಬಂದಿಲ್ಲ.

ನಿಮ್ಮ 125ನೇ ಚಿತ್ರದ ಬಗ್ಗೆ ಅಭಿಮಾನಿಗಳು ವಿಶೇಷವಾಗಿ ಕಾಯುತ್ತಿರುವ ಬಗ್ಗೆ?
ಅಭಿಮಾನಿಗಳು ಚಿತ್ರಗಳ ಸಂಖ್ಯೆಯ ಬಗ್ಗೆ ಹೆಚ್ಚು ಕುತೂಹಲ ಹೊಂದಿರಬಹುದು. ಆದರೆ ನಾನು ಪ್ರತಿಯೊಂದು ಚಿತ್ರಕ್ಕೂ ಪ್ರಾಮುಖ್ಯತೆ ಕೊಡುತ್ತೇನೆ. ಅದಕ್ಕೂ ಮುನ್ನ `ಭಜರಂಗಿ 2' ಚಿತ್ರ ಬರಲಿದೆ. ಬರ್ತ್ ಡೇ ಪ್ರಯುಕ್ತ ಅದರ ಟೀಸರ್ ಅಭಿಮಾನಿಗಳಿಗೆ ಕೊಡುಗೆ. ಮೇಕಿಂಗ್ ಎಲ್ಲ ತುಂಬ ಅಚ್ಚುಕಟ್ಟಾಗಿ ನಡೆದಿದೆ ಎನ್ನುವುದು ಟೀಸರ್ ನೋಡಿದಾಗ ನಿಮಗೂ ಗೊತ್ತಾಗಬಹುದು. ಅದರ ಬಳಿಕ ಕೂಡ ಒಂದಷ್ಟು ಚಿತ್ರಗಳಿವೆ. ಸದ್ಯದ ಮಟ್ಟಿಗೆ 125ನೇ ಚಿತ್ರವಾಗಿ ನಾವು ಗುರುತಿಸಿರುವುದು `ಭೈರತಿ ರಣಗಲ್' ಸಿನಿಮಾವನ್ನು. ನರ್ತನ್ ನಿರ್ದೇಶನದಲ್ಲಿ ಮೂಡಿ ಬಂದ `ಮಫ್ತಿ'ಯ ಎರಡನೇ ಭಾಗ ಈ ಸಿನಿಮಾ. ಆ ಕಾರಣದಿಂದ ನನಗೂ ಚಿತ್ರದ ಬಗ್ಗೆ ವಿಶೇಷ ನಿರೀಕ್ಷೆಗಳಿವೆ

ಮನೆಯಲ್ಲಿರುವ ದಿನಗಳೆಲ್ಲ ಕತೆ ಕೇಳುವುದರಲ್ಲೇ ಕಳೆಯಿತೇ?
ಒಂದೆರಡು ಕತೆಗಳನ್ನು ಕೇಳಿರುವುದು ನಿಜ. ಅದು ಬಿಟ್ಟರೆ ನಾನು ಮನೆಯಲ್ಲಿರಬೇಕಾದರೆ ಸಿನಿಮಾದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲು ನಮ್ಮ ಚಿತ್ರರಂಗ ಆಕ್ಟಿವ್ ಆಗಬೇಕು. ಆ ಹೊತ್ತಿಗೆ ನಾವು ತಯಾರಿರಬೇಕು. ನಾನು ದಿನಾ ಬೆಳಿಗ್ಗೆ 5.30ಕ್ಕೆ ಏಳ್ತೇನೆ. ಒಂಬತ್ತು ಕಿ.ಮೀ ನಡೆಯುತ್ತೇನೆ. ಒಂದೂವರೆ ಗಂಟೆ ಜಿಮ್ ಮಾಡುತ್ತೇನೆ. ತಿಂಡಿ ಬಳಿಕ ಮತ್ತೆ ಜಿಮ್ ಮಾಡುತ್ತೇನೆ.
ಟೋಟಲಿ ಈ ದಿನಗಳಲ್ಲಿ ನಾಲ್ಕು ಗಂಟೆ ಜಿಮ್ ಗಾಗಿಯೇ ಮೀಸಲಿಡುತ್ತೇನೆ. ಎರಡು ದಿನಗಳಿಗೊಮ್ಮೆ ಸಂಜೆ ಹೊತ್ತು ಫ್ರೆಂಡ್ಸ್ ಜತೆ ಕ್ರಿಕೆಟ್ ಆಡುತ್ತೇನೆ. ರಾತ್ರಿ ಎಂಟೂವರೆಗೆಲ್ಲ ಊಟ ಮಾಡಿ ಹತ್ತು ಗಂಟೆಯೊಳಗೆ ಮಲಗಿರುತ್ತೇನೆ. ಎಲ್ಲರೂ ಅಷ್ಟೇ, ಮೊದಲು ನಮ್ಮ ನಮ್ಮ ಅರೋಗ್ಯ ನೋಡಿಕೊಳ್ಳಬೇಕು. ಉಳಿದಿದ್ದೆಲ್ಲ ಆಮೇಲಿನದ್ದು. ಇದರ ನಡುವೆ ದಿನಗೂಲಿ ಕಾರ್ಮಿಕರು ಕಷ್ಟದಲ್ಲಿರುವುದರ ಬಗ್ಗೆ ತಿಳಿದಿದ್ದೇನೆ. ನಮ್ಮಿಂದಾಗುವ ಸಹಾಯ ಯಾವಾಗಲೂ ನಡೆಯುತ್ತಿರುತ್ತದೆ. ಪರಸ್ಪರ ಸಹಕರಿಸಿಕೊಂಡು, ಆತ್ಮವಿಶ್ವಾಸ ಕೊಟ್ಟು ಧೈರ್ಯದಿಂದ ಕಳೆಯಬೇಕಾದ ದಿನಗಳು ಇವು. ಅನಗತ್ಯ ಆತಂಕ ಬೇಕಾಗಿಲ್ಲ. ಸಮಸ್ಯೆ ಕೊಟ್ಟ ದೇವರು ಖಂಡಿತ ಪರಿಹಾರವನ್ನೂ ಮಾಡುತ್ತಾನೆ. ನಾವು ಭರವಸೆಯಿಂದ ಇರುವುದು ಮುಖ್ಯ.


Click it and Unblock the Notifications











