Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರೇಜಿಸ್ಟಾರ್ ರವಿಚಂದ್ರನ್ ಮನಗೆದ್ದ ಕಲಾವಿದ ಕರಣ್..!
ಕರಣ್ ಆಚಾರ್ಯ ಎನ್ನುವ ಇವರ ಹೆಸರು ಇಂದು ತಕ್ಕ ಮಟ್ಟಿಗೆ ಜನಪ್ರಿಯವಾಗಿದ್ದರೆ ಅದಕ್ಕೆ ಆಂಜನೇಯ ಸ್ವಾಮಿಯೇ ಕಾರಣ! ಹೌದು, ಆಸ್ತಿಕರೆಲ್ಲರು ತಾವೊಮ್ಮೆ ನಿರೀಕ್ಷೆಗೂ ಮೀರಿದ ಹೆಸರು ಮಾಡಿದಾಗ ತಕ್ಷಣ ದೇವರ ಕೃಪೆ ಎಂದು ನೆನಪಿಸುವುದು ಸಹಜ. ಯಾಕೆಂದರೆ ನಾವೆಲ್ಲ ದೇವರ ಸೃಷ್ಟಿ ಎಂಬ ನಂಬಿಕೆ ಅದಕ್ಕೆ ಕಾರಣ. ಆದರೆ ತಾನೇ ಸೃಷ್ಟಿಸಿದ ದೇವರೇ ತನಗೆ ಜನಪ್ರಿಯತೆ ತಂದುಕೊಟ್ಟಿದೆ ಹೇಳಬಹುದಾದ ವ್ಯಕ್ತಿ ಸದ್ಯಕ್ಕೆ ಯಾರಾದರೂ ಇದ್ದರೆ ಅದು ಕರಣ್ ಆಚಾರ್ಯ.
ಯಾಕೆಂದರೆ ನಾಲ್ಕು ವರ್ಷಗಳ ಹಿಂದೆ ಅವರು ರಚಿಸಿದ ಉಗ್ರ ಆಂಜನೇಯನ ಚಿತ್ರವೊಂದು ಇಂದು ಕರಣ್ ಆಚಾರ್ಯರನ್ನು ದೇಶದ ಜನಪ್ರಿಯ ಚಿತ್ರ ಕಲಾವಿದರನ್ನಾಗಿಸಿದೆ. ಕಾಸರಗೋಡಿನಲ್ಲಿ ಜನಿಸಿ ಮಂಗಳೂರಿನಲ್ಲಿ ವೃತ್ತಿಯಲ್ಲಿದ್ದ ಕರಣ್ ಪ್ರಸ್ತುತ ರಾಜ್ಯದ ರಾಜಧಾನಿಗೆ ಬಂದು ಸದ್ದು ಮಾಡುತ್ತಿದ್ದಾರೆ. ಗಾಂಧಿನಗರದ ಸಿನಿಮಾ ರಂಗದಲ್ಲಿ ಹೊಸ ರಂಗು ಚೆಲ್ಲುತ್ತಿರುವ ಈ ಪ್ರತಿಭಾವಂತನ ಬಗ್ಗೆ ಖುದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೊಸ ವಿಚಾರ. ಈ ಎಲ್ಲ ಹೊಸ ವಿಚಾರಗಳ ಬಗ್ಗೆ ಕರಣ್ ಅವರು ಫಿಲ್ಮೀಬೀಟ್ ಜತೆಗೆ ಹಂಚಿಕೊಂಡಿರುವ ವಿಶೇಷ ಮಾಹಿತಿ ಇಲ್ಲಿದೆ.
ನೀವು ಬೆಂಗಳೂರಿಗೆ ಬರಲು ಕಾರಣವಾದ ಅಂಶಗಳೇನು?
ನಾನು ಬೆಂಗಳೂರಲ್ಲೇ ಬೆಳೆಯಬೇಕು ಎನ್ನುವ ಕನಸನ್ನು ಮೊದಲಿನಿಂದಲೂ ಹೊಂದಿದ್ದೆ. ಹಾಗೆ ಬೆಂಗಳೂರಿನಲ್ಲಿ ಕಲೆಗೆ ಹೆಚ್ಚು ಅವಕಾಶವಿದೆ ಎಂದು ಹಿಂದೊಮ್ಮೆ ಬಂದಿದ್ದಾಗ ವೃತ್ತಿಪರ ತರಬೇತಿ ಪಡೆದಿಲ್ಲ ಎನ್ನುವ ಕಾರಣದಿಂದಾಗಿ ಒಳ್ಳೆಯ ಕೆಲಸ ದೊರಕದೇ ಹೋಯಿತು. ಬಳಿಕ ಮಂಗಳೂರಿನ ಇನ್ಫೋಟೆಕ್ನಲ್ಲಿ ಇ ಲರ್ನಿಂಗ್ ಇಲೆಕ್ಚರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದೆ. ಇದರ ನಡುವೆ ಅನಿಮೇಟೆಡ್ ಮೊದಲಾದ ರಚನೆಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಅವಕಾಶಗಳಿಗಾಗಿ ಕಾಯುತ್ತಿದ್ದೆ. ಕುಂಬ್ಳೆಯಲ್ಲಿ ಆರ್ಯನ್ಸ್ ಎನ್ನುವ ಸಮಾಜ ಸೇವಾ ಸಂಘಟನೆಗೆ ನಾನು ರಚಿಸಿದಂಥ ಹನುಮಂತನ ಮುಖವೇ ಬಳಿಕ ಉಗ್ರರೂಪಿ ಆಂಜನೇಯನಾಗಿ ಜನಪ್ರಿಯವಾಯಿತು. ಮಂಗಳೂರಿನಲ್ಲಿದ್ದುಕೊಂಡೇ `ಗಂಧದ ಕುಡಿ' ಎಂಬ ಚಿತ್ರವೊಂದರ ಸ್ಟೋರಿ ಬೋರ್ಡ್ಗೆ ಚಿತ್ರಕಲಾವಿದನಾಗಿ ಕೆಲಸ ಮಾಡಿದೆ. ಆದರೆ ಸಿನಿಮಾಗಳಿಗೆ ಕೆಲಸ ಮಾಡುವುದಾದರೆ ಬೆಂಗಳೂರೇ ಸೂಕ್ತ ಎನ್ನುವ ಕಾರಣದಿಂದ ಇದೀಗ ಬೆಂಗಳೂರಲ್ಲೇ ಮನೆ ಮಾಡಿದ್ದೇನೆ.
ಇಲ್ಲಿ ನಿಮ್ಮ ಕನಸು ನನಸಾಗುವ ಕಡೆಗಿನ ಪಯಣ ಹೇಗಿದೆ?
ಬಂದ ಸ್ವಲ್ಪ ಸಮಯದಲ್ಲೇ ಕನ್ನಡದ ಖ್ಯಾತ ತಾರೆಯರ ಚಿತ್ರಗಳ ಪೋಸ್ಟರ್ ಡಿಸೈನ್ ಮಾಡುವ ಅವಕಾಶ ದೊರಕಿದೆ. ಇತ್ತೀಚೆಗೆ ತೆರೆಕಂಡ `ಮುಂದಿನ ನಿಲ್ದಾಣ' ಚಿತ್ರದ ಪೋಸ್ಟರ್ ಸೇರಿದಂತೆ `ಕಥಾ ಸಂಗಮ' ಚಿತ್ರಕ್ಕಾಗಿ ಪುಟ್ಟಣ್ಣ ಕಣಗಾಲ್ ಅವರ ಅನಿಮೇಶನ್ ಚಿತ್ರವನ್ನು ಮಾಡಿದ್ದೇನೆ. ಏಳು ಭಾಷೆಯಲ್ಲಿ ತೆರೆ ಕಾಣಲಿರುವ ರಿಯಲ್ ಸ್ಟಾರ್ ಉಪೇಂದ್ರರ `ಕಬ್ಜ' ಚಿತ್ರದ ಪೋಸ್ಟರ್ ಕೂಡ ನಾನೇ ಡಿಸೈನ್ ಮಾಡಿದ್ದೇನೆ. ಎಲ್ಲವೂ ಅಂದುಕೊಂಡಂತೆ ಆದರೆ ಮಹಾಭಾರತವನ್ನು ಅನಿಮೇಟೆಡ್ ಧಾರಾವಾಹಿ ಮಾಡುವ ಯೋಜನೆಯೂ ಇದೆ. ಇದಲ್ಲದೆ ಒಂದಷ್ಟು ಪರಭಾಷೆಯ ಚಿತ್ರಗಳಿಗೂ ಪೋಸ್ಟರ್ ಡಿಸೈನ್ ಮಾಡಿದ್ದೇನೆ. ಆದರೆ ಕನ್ನಡ ಚಿತ್ರರಂಗದಲ್ಲಿ ಈಗಲೂ ಕೂಡ ಬಹಳ ಮಂದಿಗೆ ನಾನು ಇಂಥದೊಂದು ವೃತ್ತಿ ಮಾಡುತ್ತಾ ಬೆಂಗಳೂರಲ್ಲಿರುವುದು ಗೊತ್ತೇ ಇಲ್ಲ.
ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿಮ್ಮ ಚಿತ್ರವನ್ನು ಮೆಚ್ಚಿಕೊಂಡ ಬಗ್ಗೆ ಹೇಳಿ?
ಹೌದು, ಅದು ಒಂದು ಮರೆಯಲಾಗದ ಘಟನೆ. ಖಾಸಗಿ ಸಂಸ್ಥೆಯೊಂದರ ಉದ್ಘಾಟನೆಗೈದ ಅವರಿಗೆ ಕೊಡುಗೆಯಾಗಿ ನನ್ನ ಚಿತ್ರರಚನೆಯನ್ನು ನೀಡಲಾಗಿತ್ತು. ಆ ಸಂಸ್ಥೆಯ ಮಂದಿ ನನ್ನನ್ನು ಆಹ್ವಾನಿಸಿದ್ದರು. ಆದರೆ ನನಗೆ ಬಿಡುವಿರದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅದು ರವಿ ಬೋಪಣ್ಣ ಸಿನಿಮಾದಲ್ಲಿ ರವಿಚಂದ್ರನ್ ಅವರ ಮುಖದ ಗೆಟಪ್ ಇರುವ ಪೋಸ್ಟರ್ ನ ಚಿತ್ರವಾಗಿತ್ತು. ಚಿತ್ರ ನೋಡಿ ಮೆಚ್ಚಿಕೊಂಡ ಅವರು ಅದನ್ನು ಪ್ರಸ್ತುತ ತಮ್ಮ ವಾಟ್ಸಾಪ್ ಡಿಪಿಯಾಗಿ ಬಳಸುತ್ತಿರುವುದು ತಿಳಿದಾಗ ಖುಷಿಯಾಯಿತು. ಸಿನಿಮಾದಲ್ಲಿಯೂ ಆ ಚಿತ್ರವನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದು, ನನ್ನೊಂದಿಗೆ ಮಾತನಾಡಬೇಕು ಎಂದು ನಂಬರ್ ಪಡೆದುಕೊಂಡಿದ್ದಾಗಿ ತಿಳಿದಾಗ ಖುಷಿಯಾಯಿತು.
ನಿಮ್ಮ ಕುಟುಂಬದ ಕುರಿತಾದ ವಿಶೇಷಗಳನ್ನು ಹಂಚಿಕೊಳ್ಳಿ?
ನನ್ನ ತಂದೆ ದಯಾನಂದ ಆಚಾರ್ಯ ಮರದ ಕೆತ್ತನೆಯ ಮೂಲಕ ಕಲೆಯನ್ನು ವಿನ್ಯಾಸಗೊಳಿಸುವಲ್ಲಿ ನಿಪುಣರಾಗಿದ್ದರು. ಆದರೆ ಅವರು ಇಂದು ನಮ್ಮೊಂದಿಗಿಲ್ಲ ಎನ್ನುವ ನೋವಿದೆ. ಅಮ್ಮನ ಹೆಸರು ಮಂಜುಳಾ. ಅವರು ನನ್ನ ಬಾಲ್ಯದಲ್ಲೇ ಆನೆ, ಗಣೇಶ ಮೊದಲಾದ ಸ್ಕೆಚಸ್ ಗಳನ್ನು ಹಾಕಿ ನನ್ನಲ್ಲಿ ಕಲಾಸಕ್ತಿ ಮೂಡಿಸಿದವರು. ಎರಡು ವರ್ಷಗಳ ಹಿಂದೆ ಕಲಾವಿದೆಯನ್ನೇ ಪೂಜಾ ಎನ್ನುವ ಕಲಾವಿದೆಯನ್ನೇ ವರಿಸಿದ್ದೇನೆ. ಪ್ರಸ್ತುತ `ಪರಿಧಿ ಮೀಡಿಯಾ ವರ್ಕ್ಸ್' ಮೂಲಕ ನನ್ನೊಂದಿಗೆ ಆಕೆಯೂ ಕಲಾ ವಿಭಾಗದ ಕೆಲಸಗಳಲ್ಲಿ ನಿರತಳಾಗಿದ್ದಾಳೆ. ಈ ಹಿಂದೆ ಹನುಮಾನ್ ಚಿತ್ರ ಅಂತಾರಾಷ್ಟ್ರೀಯವಾಗಿ ಜನಪ್ರಿಯಗೊಂಡರೂ, ಅದರ ಕಾಪಿ ರೈಟ್ಸ್ ಗಳಿಲ್ಲದ ಕಾರಣ ನಮಗೆ ಯಾವುದೇ ಆರ್ಥಿಕ ಲಾಭಗಳಾಗಲಿಲ್ಲ! ಆದರೆ ಈಗ ಕಾಪಿರೈಟ್ಸ್ ಬಗ್ಗೆ ತಲೆಕೆಡಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಟೀಶರ್ಟ್ ಸಂಸ್ಥೆಯೊಂದು ಅದನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದೆ. ಹಾಗಾಗಿ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ.