20 ವರ್ಷ ಪೂರೈಸಿರುವ ಗುರುಕಿರಣ್ ಮುಂದಿನ ಪ್ಲಾನ್ ಬೇರೆಯೇ ಇದೆ !
'ಮರಿಕಣ್ಣು ಹೋರಿಮ್ಯಾಗೆ..', 'ಉಪ್ಪಿಗಿಂತ ರುಚಿ ಬೇರೆ ಇಲ್ಲ..', 'ಕಣ ಕಣದೇ ಶಾರದೆ..', 'ಮಾತಾಡು ಸಾಕು..', 'ಕಣ್ಣಿನಲ್ಲಿ ಕಣ್ಣನಿಟ್ಟು..', 'ಜಿಂಕೆ ಮರಿ ಓಡ್ತೈತೆ ನೋಡ್ಗಾ ಮಗ..', 'ಬೇಡುವೆನು ವರವನ್ನು..' ಈ ಹಾಡುಗಳನ್ನು ನಾವು ಲೆಕ್ಕವಿಲ್ಲದಷ್ಟು ಬಾರಿ ಕೇಳಿದ್ದೇವೆ. ನಮ್ಮ ಸಂತೋಷಕ್ಕೆ, ದುಖಃಕ್ಕೆ, ನೋವಿಗೆ, ಮನರಂಜನೆಗೆ ಎಷ್ಟೋ ಬಾರಿ ಈ ಹಾಡುಗಳು ಜೊತೆಯಾಗಿವೆ. ಇಂತಹ ಹಾಡುಗಳ ಸೃಷ್ಟಿಕರ್ತ ಸಂಗೀತ ನಿರ್ದೇಶಕ ಗುರುಕಿರಣ್.
ಗುರುಕಿರಣ್ ಈಗ 20 ವರ್ಷದ ತಮ್ಮ ಸಿನಿಮಾ ಸಂಗೀತ ಯಾನವನ್ನು ಪೂರೈಸಿದ್ದಾರೆ. ಸಿಂಗರ್ ಆಗೋಕ್ಕೆ ಬಂದು, 10 ವರ್ಷ ಚಿತ್ರರಂಗದಲ್ಲಿ ಕಷ್ಟ ಪಟ್ಟು ಆಮೇಲೆ 'ಎ' ಸಿನಿಮಾದ ಮಾಡಿದರು. ಅದರ ಬಳಿಕ ಒಂದರ ನಂತರ ಒಂದು ಹಿಟ್ ಕೊಟ್ಟು ಸ್ಟಾರ್ ಕಂಪೋಸರ್ ಆದರು. ಅನುರಾಧ ಭಟ್, ಶಮಿತಾ ಮಲ್ನಾಡ್, ರಘುದೀಕ್ಷಿತ್, ವಾಸು ದೀಕ್ಷಿತ್, ಇಂದು ನಾಗರಾಜ್, ಸುನಿತಾ ಹೀಗೆ ಸಾಕಷ್ಟು ಪ್ರತಿಭೆಗಳಿಗೆ ಮೊದಲ ಬಾರಿಗೆ ಹಾಡುವುದಕ್ಕೆ ಅವಕಾಶ ಕೊಟ್ಟಿದ್ದು ಗುರುಕಿರಣ್. ಕನ್ನಡದ ಇಂದಿನ ಬೇಡಿಕೆ ಅನೇಕ ಗಾಯಕರನ್ನು ಅಂದು ಗುರುಕಿರಣ್ ಪರಿಚಯ ಮಾಡಿದ್ದರು.
ಎರಡು ದಶಕಗಳನ್ನು ಪೂರೈಸಿರುವ ಗುರುಕಿರಣ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಒಂದು ವಿಶೇಷ ಸಂದರ್ಶನ ನೀಡಿದ್ದಾರೆ. ಇದರಲ್ಲಿ ತಮ್ಮ ಸಂಗೀತದ ಪ್ರಾರಂಭ ದಿನದಿಂದ ಹಿಡಿದು ತಮ್ಮ ಮುಂದಿನ ಪ್ಲಾನ್ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಸೋ, ಓವರ್ ಟು ಗುರುಕಿರಣ್...
ಸಂದರ್ಶನ : ನವೀನ.ಎಂ.ಎಸ್ (ನವಿ ಕನಸು)

20 ವರ್ಷ, 90ಕ್ಕೂ ಹೆಚ್ಚು ಸಿನಿಮಾಗಳು ನೂರಾರೂ ಸೂಪರ್ ಹಿಟ್ ಹಾಡುಗಳು. ಹೇಗನಿಸುತ್ತದೆ ನಿಮ್ಮ ಪಯಣ ?
''ನಾನು ಎಂದು ಇದನೆಲ್ಲ ಯೋಚನೆಯೇ ಮಾಡಿರಲಿಲ್ಲ. ನಾನು ಚಿತ್ರರಂಗಕ್ಕೆ ಬಂದಾಗ ಇದ್ದ ಕೆಲವು ಸಂಗೀತ ನಿರ್ದೇಶಕರು 100 ಸಿನಿಮಾ ಮಾಡಿದ್ದಾರೆ ಅಂದರೆ ನನಗೆ ಆಶ್ವರ್ಯ ಆಗುತ್ತಿತ್ತು. ಬೇರೆ ಸಂಗೀತ ನಿರ್ದೇಶಕರಿಗೆ ಹೋಲಿಸಿದರೆ ನಾನು ಸ್ವಲ್ಪ ನಿಧಾನ ಕಂಪೋಸ್ ಮಾಡುತ್ತಿದೆ. ಮೊದಲು ನನಗೆ ಇದೇ ವೃತ್ತಿಯಲ್ಲಿ ಇರುತ್ತೇನೆ ಎನ್ನುವ ನಂಬಿಕೆ ಸಹ ಇರಲಿಲ್ಲ. ಎಲ್ಲಕ್ಕಿಂತ ಖುಷಿ ಅಂದರೆ ನಾನು ಇಷ್ಟ ಪಟ್ಟ ಕೆಲಸವನ್ನೇ ಇಂದಿಗೂ ಮಾಡುತ್ತಿದ್ದೇನೆ. ಅದರ ಜೊತೆಗೆ ಜನರ ಪ್ರೀತಿ ಸಿಕ್ಕಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಆದರೆ ಜನ ಕಾರಣ ಇಲ್ಲದೆ ನಮ್ಮನ್ನು ಪ್ರೀತಿಸುತ್ತಾರೆ. 20 ವರ್ಷ ಹೋಗಿದ್ದೆ ನನಗೆ ಗೊತ್ತಾಗಲಿಲ್ಲ. ನನ್ನ ಸಕ್ಸಸ್ ರೇಟ್ ನೋಡಿದರೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ 45 ಸಿನಿಮಾಗಳು 100 ಡೇಸ್ ಆಗಿದೆ. 75 ಸಿನಿಮಾಗಳು ಹಿಟ್ ಆಗಿದೆ. ಇದಕ್ಕಿಂತ ನನಗೆ ಇನ್ನೇನ್ನು ಬೇಕು.''

ತೆರೆ ಹಿಂದೆ ಇದ್ದರೂ ಗುರುಕಿರಣ್ ಅವರಿಗೆ ಸ್ಟಾರ್ ವ್ಯಾಲ್ಯೂ ಇದೆ. ಸಾಮಾನ್ಯ ಜನ ಕೂಡ ನಿಮ್ಮನ್ನು ಗುರುತಿಸುತ್ತಾರೆ ಅದು ಹೇಗೆ ಸಾಧ್ಯ ಆಯ್ತು?
''ಅದು ದೇವರ ದಯೇ. ನನಗೆ ಕೆಲವೊಮ್ಮೆ ಆಶ್ಚರ್ಯ ಆಗುತ್ತದೆ. ಎಲ್ಲದರೂ ಕಾರ್ಯಕ್ರಮಕ್ಕೆ ಹೋದಾಗ ಜನ ಮುತ್ತಿಕೊಳ್ಳುತ್ತಾರೆ. ಅವರ ಪ್ರೀತಿ ನೋಡಿ ತುಂಬ ಖುಷಿ ಆಗುತ್ತದೆ. ನಾನು ಹೀರೋ ಅಲ್ಲ... ಆದರೂ ಜನ ಗುರುತಿಸುತ್ತಾರೆ. ನಿಜ ಹೇಳಬೇಕು ಅಂದರೆ ಮೊದಲು ನಾನು ಬರೀ ಸಿಂಗರ್ ಆಗಬೇಕು ಅಂತ ಇಲ್ಲಿಗೆ ಬಂದೆ. ಶುರುವಿನಲ್ಲಿ ನಾನು ಹಾಡುವುದಕ್ಕೆ ಹೊದ ಜಾಗಗಳಲ್ಲಿ ನನ್ನಿಂದ ನಟನೆ ಮಾಡಿಸಿದರು. ನಾಗಾಭರಣ ಅವರ ಹತ್ತಿರ ಒಮ್ಮೆ ಮ್ಯೂಸಿಕ್ ಗಾಗಿ ಹೋದಾಗ ಅವರು ಒಂದು ಧಾರಾವಾಹಿಯಲ್ಲಿ ಲೀಡ್ ಕ್ಯಾರೆಕ್ಟರ್ ಕೊಟ್ಟರು. 'ತಿರುಗುಬಾಣ' ಅಂತ ಆ ಸೀರಿಯಲ್ ಆ ವೇಳೆ ತುಂಬ ದೊಡ್ಡ ಹಿಟ್ ಆಯ್ತು.''

ಆಗ ಕ್ಯಾಸೆಟ್, ಸಿಡಿಗಳನ್ನು ಕೊಂಡು ಜನ ಹಾಡುಗಳನ್ನು ಕೇಳುತ್ತಿದ್ದರು, ಆದ್ರೆ ಇಂದು ಆ ರೀತಿ ಇಲ್ಲ ಅದು ನೋಡಿದಾಗ ಏನನಿಸುತ್ತೆ?
''ನಾನು ಸರಿಯಾದ ಸಮಯದಲ್ಲಿ ಚಿತ್ರರಂಗದಲ್ಲಿ ಇದ್ದೇ ಅಂತ ಅನಿಸುತ್ತದೆ. ನನ್ನ ಅನೇಕ ಸಿನಿಮಾಗಳ ಆಡಿಯೋ ರೈಟ್ಸ್ ಹಿಂದಿ ಚಿತ್ರದ ಹಾಡುಗಳ ಮೊತ್ತಕ್ಕೆ ಸೇಲ್ ಆಗಿತ್ತು. 'ಎ' ಸಿನಿಮಾ ಎರಡು ಕೋಟಿಗೆ, ನನ್ನ ಮೂರನೇ ಸಿನಿಮಾ 1 ಕೋಟಿಗೆ ಆಡಿಯೋ ರೈಟ್ಸ್ ಬಂದಿತ್ತು. ಆಮೇಲೆ ಡಿಜಿಟಲ್ ಆಯ್ತು. ಟೇಪ್ ನಿಂದ ಸಿಡಿ ಬಂತು. ಈಗ mp3 ಯಲ್ಲಿ ಕ್ವಾಲಿಟಿ ಕಡಿಮೆ ಆಗುತ್ತಿದೆ. ಇಂದು ಜನ ಮೊಬೈಲ್ ನಲ್ಲಿ ಹಾಡು ಕೇಳುತ್ತಾರೆ ಅದರಲ್ಲಿ ಸಂಗೀತ ಕೊಟ್ಟವರ, ಸಾಹಿತ್ಯ ಬರೆದವರ, ಹಾಡು ಹಾಡಿದವರ ಹೆಸರು ಕೂಡ ಕೆಲವೊಮ್ಮೆ ಇರುವುದಿಲ್ಲ. ಆಗ ಕ್ಯಾಸೆಟ್ ಗಳಲ್ಲಿ ಹಾಡಿಗಾಗಿ ಕೆಲಸ ಮಾಡಿದವರ ಹೆಸರು ಫೋಟೋ ಇರುತ್ತಿತ್ತು. ಇದನ್ನು ನೋಡಿದರೆ ಇಂದು ದುಡ್ಡಿಗಾಗಿ ಕೆಲಸ ಮಾಡಬೇಕಾ ಅನಿಸುತ್ತದೆ.''

ಎಲ್ಲ ದೊಡ್ಡ ನಿರ್ದೇಶಕರ ಜೊತೆಗೆ ಹಾಗೂ ಹೊಸ ಹೊಸ ನಿರ್ದೇಶಕರ ಜೊತೆಗೆ ಸಿನಿಮಾ ಮಾಡಿದ್ದೀರಿ ಹೇಗಿತ್ತು ಆ ಅನುಭವ?
''ಮೊದಲು ದೊಡ್ಡ ನಿರ್ದೇಶಕರ ಜೊತೆಗೆ ಸಿನಿಮಾ ಮಾಡಲು ಭಯ ಇತ್ತು. ಕೆಲವು ದೊಡ್ಡ ನಿರ್ದೇಶಕರು ಮೂರು ದಿನಕ್ಕೆ ಒಮ್ಮೆ ಬಂದು ಟ್ಯೂನ್ ಓಕೆ ಮಾಡುತ್ತಿದ್ದರು. ಆ ಟೈಂ ನಲ್ಲಿ ನನಗೆ ಸಿಕ್ಕವರು ಎಲ್ಲ ಹೊಸ ನಿರ್ದೇಶಕರೇ. ಪ್ರೇಮ್, ನಾಗಶೇಖರ್, ಪ್ರಕಾಶ್, ಪವನ್ ಒಡೆಯರ್ ಹೀಗೆ ಹೊಸ ನಿರ್ದೇಶಕರ ಜೊತೆಗೆ ಕೆಲಸ ಮಾಡುವಾಗ ಒಂದು ಉತ್ಸಾಹ ಕೊಡುತ್ತಿತ್ತು.''

ಉಪೇಂದ್ರ ಮತ್ತು ನಿಮ್ಮ ಕಾಂಬಿನೇಶನ್ ಅಷ್ಟು ಚೆನ್ನಾಗಿ ಬರೋಕ್ಕೆ ಕಾರಣ ಏನು? ಮೊದಲು ಉಪ್ಪಿ ಜೊತೆಗೆ ಅವಕಾಶ ಸಿಕ್ಕಿದ್ದು ಹೇಗೆ?
''ಉಪೇಂದ್ರ ಮತ್ತು ನಾನು ಸೇರಿದರೆ ಏನೋ ಕೆಮಿಸ್ಟಿ ವರ್ಕ್ ಆಗುತ್ತಿತ್ತು. 'A' ಚಿತ್ರದ 'ಆಕ್ಸಿಡೆಂಟ್ ಆಗೋಗಿದೆ..' ಹಾಡಿನ ರೀತಿ ಉಪ್ಪಿ ನನಗೆ ಆಕ್ಸಿಡೆಂಟ್ ಆಗಿ ಪರಿಚಯ ಆದರು. ಉಪೇಂದ್ರ ಅವರು ನನ್ನ ಒಳ್ಳೆಯ ಸ್ನೇಹಿತ ಆಗಿದ್ದರು. ಮೊದಲು ಮ್ಯೂಸಿಕ್ ಅವಕಾಶ ಬೇಕು ಅಂತ ಉಪ್ಪಿಗೆ, ರಾಘವೇಂದ್ರ ರಾಜ್ ಕುಮಾರ್, ಶೈಲೆಂದ್ರ ಬಾಬು ಮತ್ತು ವಿ.ಉಮಾಕಾಂತ್ ಈ ನಾಲ್ಕು ಜನಕ್ಕೂ ಕೇಳಿದ್ದೆ. ಆದರೆ ಉಪೇಂದ್ರ ಕಡೆಯಿಂದ ನಾಲ್ಕು ತಿಂಗಳಿನಲ್ಲಿ 'ಎ' ಚಿತ್ರಕ್ಕೆ ಆಫರ್ ಬಂತು. ನಾನು ಆ ವೇಳೆ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಆಗಿತ್ತು. ಸಿನಿಮಾ ಬೇಡ ಅಂತ ಮಂಗಳೂರಿನಲ್ಲಿ ಒಂದು ರೆಸ್ಟೋರೆಂಟ್ ಇಡೋಣ ಅಂತ ಇದ್ದೇ. ಆದರೆ ಲಾಸ್ಟ್ ಟ್ರೈ ನೋಡೊಣ ಅಂತ 'ಎ' ಮಾಡಿದ್ದು. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರು ಆಯ್ತು.''

ಒಳ್ಳೆ ಟ್ಯೂನ್ ಹುಟ್ಟುವುದಕ್ಕೆ ಇದೇ ಟೈಂ ಅಂತ ಇದೇಯಾ.. ನೀವು ಹೆಚ್ಚು ಮ್ಯೂಸಿಕ್ ಮಾಡುವುದು ಯಾವ ಟೈಂ ನಲ್ಲಿ ?
''ನನಗೆ ಇದೇ ಟೈಂ ಅಂತ ಏನು ಇಲ್ಲ... ಕಂಪೋಸೆಷನ್ ಅಂತ ಕೂತ್ತಾಗ ಟೈಂ ಹೋಗುವುದೆ ಗೊತ್ತಾಗಲ್ಲ. ಆದರೆ ನೈಟ್ ಮತ್ತು ಬೆಳ್ಳಗಿನ ಜಾವದಲ್ಲಿ ಏಕಾಗ್ರತೆ ಚೆನ್ನಾಗಿ ಇರುತ್ತದೆ. ಸೈಲೆನ್ಸ್ ಮ್ಯೂಸಿಕ್ ಗೆ ತುಂಬ ಸಹಾಯ ಮಾಡುತ್ತದೆ. ಶೂನ್ಯದಲ್ಲಿ ಹುಟ್ಟುಕೊಳ್ಳುವ ಸಂಗೀತ ತುಂಬ ವಿಭಿನ್ನ. ಸಿನಿಮಾದಲ್ಲಿ ಅನುಭವ ತುಂಬ ವರ್ಕ್ ಆಗುತ್ತದೆ. 'ಸಿನಿಮಾ Show of talent ಅಲ್ಲ.. ಅದು Show of expression.''

ಚಿತ್ರರಂಗಕ್ಕೆ ಗುರುಕಿರಣ್ ಬಂದದ್ದು ಹೇಗೆ ?
''ನಾನು ಮೊದಲು ಕನ್ನಡದ ಕೆಲವು ಮ್ಯಾಗಜಿನ್ ಗಳಿಗೆ ಮಾಡಲಿಂಗ್ ಮಾಡುತ್ತಿದೆ. ಮೊದಲು ನಾನು ಮೇಕಮ್ ಹಾಕಿದ್ದು ಅಲ್ಲಿಯೇ. ಅದೇ ವೇಳೆ ಹಾಡೊಕ್ಕೆ ಹೋಗಿ ತುಳು ಪಿಚ್ಚರ್ ಗೆ ಹೀರೋ ಆದೆ. ಸಿನಿಮಾ ವರ್ಕ್ ಔಟ್ ಆಗದೆ ಇದ್ದಾಗ ಇದು ಬೇಡ ಅಂತ ಬಿಜಿನೆಸ್ ಮಾಡೋಣ ಅಂತ ಪ್ಲಾನ್ ಮಾಡಿದೆ. ಒಮ್ಮೆ ಊರಿನಿಂದ ಮತ್ತೆ ಬೆಂಗಳೂರಿಗೆ ಬಂದಾಗ ಟಿವಿ ಬಂದಿತ್ತು. ಆಗ ಟಿವಿ ಸೀರಿಯಲ್ ಮಾಡಿದೆ. ನಂತರ ಮನೋಹರ್ ಜೊತೆಗೆ ಕೀ ಬೋರ್ಡ್ ಪ್ಲೇಯರ್ ಆದೆ, ಸಾಹಿತ್ಯ ಬರೆದೆ, ಹೀಗೆ ಮ್ಯೂಸಿಕ್ ಡೈರೆಕ್ಟರ್ ಆಗುವುದಕ್ಕೂ ಮುಂಚೆ 10 ವರ್ಷ ಎಲ್ಲ ರೀತಿಯ ಕೆಲಸ ಮಾಡಿದ್ದೇನೆ.''

ಅಂದು ಸಿನಿಮಾದ ಹಾಡುಗಳಿಗೆ ಕ್ರೇಜ್ ಹೇಗಿತ್ತು.. ಇಂದು ಹೇಗಿದೆ ?
''ಅಂದು ಒಂದು ಸಿನಿಮಾದ ಆಡಿಯೋ ಬರ್ತಿದೆ ಅಂದರೆ ಜನ ಬೆಳ್ಳಗೆಯೇ ಅಂಗಡಿ ಮುಂದೆ ಕಾದು ನಿಂತು ಕ್ಯಾಸೆಟ್ ಖರೀದಿ ಮಾಡುತ್ತಿದ್ದರು. ಅದನ್ನು ಈಗ ನಿರೀಕ್ಷೆ ಮಾಡೋಕ್ಕೆ ಆಗಲ್ಲ. ಆದರೆ ಮನರಂಜನೆ ಜಗತ್ತಿಗೆ ಸಾವಿಲ್ಲ. ಈಗ ಆಡಿಯೋ ಮೂಲಕ ಹೆಚ್ಚು ದುಡ್ಡು ಬರುವುದಿಲ್ಲ. ಆ ಟೈಂ ನಲ್ಲಿ ನನ್ನ ಸಿನಿಮಾದ ಆಡಿಯೋ 1 ಕೋಟಿಗೆ ಸೆಲ್ ಆದರೂ ನನಗೆ 4 ಲಕ್ಷ ಕೊಡುವವರು ಇರಲಿಲ್ಲ. ಆ ಹಠಕ್ಕೆ ಹೊಸಬರ ಹೆಚ್ಚು ಸಿನಿಮಾ ಮಾಡಿದೆ. ಆಗಲೇ 'ಚಿತ್ರ', 'ನಿನಗಾಗಿ' ರೀತಿಯ ಸಿನಿಮಾ ಮಾಡಿದ್ದು.''

ಕನ್ನಡದ ಗಾಯಕರನ್ನೇ ಹೆಚ್ಚು ಬಳಸಿಕೊಂಡು.. ಎಷ್ಟೊ ಹೊಸ ಗಾಯಕರ ಪರಿಚಯ ಮಾಡಿದ್ರಿ. ಅವರ ಬಗ್ಗೆ ಹೇಳಿ?
''ಅನುರಾಧ ಭಟ್, ಶಮಿತಾ ಮಲ್ನಾಡ್, ರಘುದೀಕ್ಷಿತ್, ವಾಸು ದೀಕ್ಷಿತ್, ಇಂದು ನಾಗರಾಜ್, ಸುನಿತಾ ಇವರನ್ನು ಫಸ್ಟ್ ಟೈಂ ಪರಿಚಯ ಮಾಡಿದ್ದೇನೆ. ನಾನು ಮೊದಲು ಬಂದಾಗ ಸಿಂಗರ್ ಆಗಬೇಕು ಅಂತ ಇದ್ದೇ. ನನ್ನ ಸಿಂಗಿಂಗ್ ಬೇರೆ ರೀತಿ ಇತ್ತು. ಆಗ ಸಿನಿಮಾಗೆ ಈ ರೀತಿ ಹಾಡಬಾರದು ಎಂದು ಎಲ್ಲರೂ ನನಗೆ ಬೈಯುತ್ತಿದ್ದರು. ಆದರೆ ಹೊಸ ಸಿಂಗರ್ ಗಳ ವಾಕ್ಸ್ ಬೇರೆ ತರ ಇದ್ದರೆ ಅದನ್ನು ಬಳಸಿಕೊಳ್ಳುವುದು ಗೊತ್ತಿರಬೇಕು. ಹೊಸ ಸಿಂಗರ್ ಗಳ ಹೊಸ ಶೈಲಿಗಳನ್ನು ಹಾಡುಗಳಲ್ಲಿ ಬಳಸಿಕೊಂಡರೆ ಅದೇ ಹಾಡು ಬೇರೆ ರೀತಿ ಕೇಳಿಸುತ್ತದೆ. ಅದಕ್ಕೆ ಹೆಚ್ಚು ಹೊಸಬರನ್ನು ಕರೆದು ಹಾಡಿಸುತ್ತಿದೆ.''

ರಾಜ್ ಕುಮಾರ್ ಅವರ ಬ್ಯಾನರ್ ನಲ್ಲಿಯೂ ಕೆಲಸ ಮಾಡಿದ್ದೀರಿ. ಅಣ್ಣವ್ರು ನಿಮ್ಮ ಹಾಡು ಕೇಳಿ ಏನು ಹೇಳುತ್ತಿದ್ದರು?
''ಚಿಕ್ಕ ಹುಡುಗನಿಂದ ನಾನು ರಾಜ್ ಕುಮಾರ್ ಅವರ ಅಭಿಮಾನಿ. 'ಅಪ್ಪು', 'ಅಭಿ', 'ಗಂಡುಗಲಿ ಕುಮಾರರಾಮ' ಸಿನಿಮಾ ಮಾಡುವಾಗ ಅವರು ಕೂಡ ಇದ್ದರು. ಅವರು ಒಬ್ಬ ಒಳ್ಳೆಯ ಸಂಗೀತಗಾರ. ಆ ಸಿನಿಮಾಗಳ ಹಾಡುಗಳನ್ನು ಅವರೇ ಆಯ್ಕೆ ಮಾಡಿದ್ದರು. 'ತಾಲಿಬಾನ್ ಅಲ್ಲ ಅಲ್ಲ...' ಹಾಡು ಬೇರೆ ಸ್ಟೈಲ್ ನಲ್ಲಿ ಇತ್ತು. ಆಗ ಅವರು ತುಂಬ ಸಪೋರ್ಟ್ ಮಾಡಿದರು.''

ನಿಮ್ಮ ಪ್ರಾರಂಭದ ಸಿನಿಮಾಗಳ ಟೈಂ ನಲ್ಲಿ ಯಾರಾದರೂ ಅವಮಾನ ಮಾಡಿದ್ರಾ?
''ತುಂಬ... ತುಂಬ ಅವಮಾನ ಆಗಿತ್ತು. ಅವಮಾನಗಳನ್ನು ಸಹಿಸೋಕ್ಕೆ ಆಗದೆ ಇದ್ದರೆ ಸಾಧನೆ ಮಾಡುವುದಕ್ಕೆ ಆಗಲ್ಲ. ನಾನು ಬೆಳದು ಬಂದ ರೀತಿ ಬೇರೆ ಆಗಿತ್ತು. ಲೈಫ್ ನಲ್ಲಿ ಅವಮಾನ ನೋಡಿಯೇ ಇರಲಿಲ್ಲ. ನನಗೆ ಶುರುವಿನಲ್ಲಿ ಮಾತಾಡುವುದಕ್ಕೂ ಯಾರು ಇರಲಿಲ್ಲ. ಮ್ಯೂಸಿಕ್ ಮಾಡುವವರು ತಮಿಳಿನಿಂದ ಬರುತ್ತಿದ್ದರು. ಅವರಿಗೆ ಭಾಷೆ ಬರುತ್ತಿರಲಿಲ್ಲ. ಪಾನ್ ಹಾಕಿಕೊಂಡು ಬಂದು ತುಂಬ ಕೆಟ್ಟದಾಗಿ ವರ್ತಿಸುತ್ತಿದ್ದರು. ಅವರ ಪ್ರಕಾರ ಕನ್ನಡಲ್ಲಿ ಟ್ಯಾಲೆಂಡ್ ಇಲ್ಲಿ ಅಂತ ಅಂದುಕೊಂಡಿದ್ದರು.''

ಇಂದಿನ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ಯಾರಿಗೆ ಒಳ್ಳೆಯ ಭವಿಷ್ಯ ಇದೆ?
''ಅರ್ಜುನ್ ಜನ್ಯ ಒಳ್ಳೆಯ ಹಾಡುಗಳನ್ನು ನೀಡುತ್ತಾರೆ ಅಂತ ತುಂಬ ವರ್ಷಗಳ ಹಿಂದೆಯೇ ನನಗೆ ಅನಿಸಿತ್ತು. ಅದು ಬಿಟ್ಟರೆ ಈಗ ಚರಣ್ ರಾಜ್ ಮತ್ತು ವಾಸುಕಿ ವೈಭವ್ ಒಳ್ಳೆಯ ಮ್ಯೂಸಿಕ್ ನೀಡುತ್ತಿದ್ದಾರೆ. ಅವರು ಒಳ್ಳೆಯ ಸಂಗೀತಗಾರರು... ಅವರು ಸಿನಿಮಾ ಸಂಗೀತ ಹೇಗೆ ಇರುಬೇಕು ಅಂತ ಇನ್ನು ಜಾಸ್ತಿ ತಿಳಿಯಬೇಕು.''

ಮುಂದಿನ ಕನಸು ಏನು.. ನಿರ್ದೇಶನ, ನಿರ್ಮಾಣ, ಆಡಿಯೋ ಕಂಪನಿ ಓಪನ್ ಮಾಡುವ ಪ್ಲಾನ್ ಏನದ್ರೂ ಇದೇಯಾ?
''ಈ ವರ್ಷ ಏನಾದರೂ ಬೇರೆ ಮಾಡಬೇಕು... 20 ವರ್ಷ ಆಗುವ ತನಕ ಬೇರೆ ಯಾವುದಕ್ಕು ಕೈ ಹಾಕುವುದು ಬೇಡ ಅಂತ ಇದ್ದೇ. ಈಗ ಮ್ಯೂಸಿಕ್ ಜೊತೆಗೆ ಬೇರೆ ಏನಾದ್ರೂ ಮಾಡಬೇಕು. ಆಡಿಯೋ ಕಂಪನಿ ಪ್ಲಾನ್ ಇಲ್ಲ. ನಾನು ಕ್ರಿಯೇಟಿವಿಟಿ ಯಲ್ಲಿ ಇರುತ್ತೇನೆ. ಕಮರ್ಶಿಯಲ್ ಆಗಿ ಲೆಕ್ಕಾಚಾರ ಹಾಕೊಕ್ಕೆ ಶುರು ಮಾಡುವುದು ಬೇಡ ಅಂತ. ಎಷ್ಟೇ ವರ್ಷ ಆದರೂ ನಾವು ಮಾಡಿದ ಕೆಲಸ ನಮ್ಮ ಒಳ್ಳೆಯ ಹಾಡುಗಳು ಎಂದಿಗೂ ಇರುತ್ತದೆ. ನಮ್ಮ ಹಾಡುಗಳ ಮೂಲಕ ನಮ್ಮ ಹೆಸರು ಜೀವಂತವಾಗಿರುತ್ತದೆ.''


Click it and Unblock the Notifications











