ಲೇಟ್ ಆದರೂ ಒಳ್ಳೆಯ ಸಿನಿಮಾ ಮಾಡುವುದು ನನ್ನ ಗುರಿ: ನಟಿ ಮಿಲನ ನಾಗರಾಜ್
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟಿಸಿರುವ 'ಲವ್ ಮಾಕ್ಟೈಲ್' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಒಂದು ಸಿನಿಮಾ ಚಿತ್ರಮಂದಿರದಲ್ಲಿ ಸಕ್ಸಸ್ ಫುಲ್ ಆಗಿ ಹೋಗುತ್ತಿರುವಾಗಲೇ, ಮಿಲನ ನಾಗರಾಜ್ ನಟಿಸಿರುವ ಮತ್ತೊಂದು ಚಿತ್ರ 'ಮತ್ತೆ ಉದ್ಭವ' ತೆರೆಗೆ ಬರ್ತಿದೆ.
ಗೀತಾ ಬ್ಯಾಂಗಲ್ ಸ್ಟೋರ್, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಮತ್ತೆ ಉದ್ಭವ ಚಿತ್ರದಲ್ಲಿ ನಾಯಕನಾಗಿದ್ದು, ಮಿಲನ ನಾಗರಾಜ್ ಜೋಡಿಯಾಗಿ ನಟಿಸಿದ್ದಾರೆ. ಕೊಡ್ಲು ರಾಮಕೃಷ್ಣ ಈ ಚಿತ್ರ ನಿರ್ದೇಶನ ಮಾಡಿದ್ದು, ಫೆಬ್ರವರಿ 7 ರಂದು ರಿಲೀಸ್ ಆಗುತ್ತಿದೆ.
ಈ ಕುರಿತು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ನಟಿ ಸಿನಿಮಾದ ಬಹಳ ಚೆನ್ನಾಗಿ ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಮತ್ತೆ ಉದ್ಭವ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ
'ಲವ್ ಮಾಕ್ ಟೈಲ್ ಮತ್ತು ಓ ಸಿನಿಮಾ ಮಾಡುತ್ತಿದ್ದ ವೇಳೆ ಮತ್ತೆ ಉದ್ಭವ ಚಿತ್ರದ ಅವಕಾಶ ಬಂತು. ನಟಿ ಹಾಗೂ ರಾಜಕಾರಣಿ ಪಾತ್ರದಲ್ಲಿ ನಟಿಸಿದ್ದೀನಿ. ಇಂತಹ ಪಾತ್ರ ಇದಕ್ಕೂ ಮೊದಲು ಮಾಡಿಲ್ಲ. ಎಲ್ಲೋ ಒಂದು ಕಡೆ ವಿಭಿನ್ನ ಪಾತ್ರಗಳನ್ನು ಮಾಡುವುದು ಮುಖ್ಯ ಆಗುತ್ತೆ. ಕಮರ್ಷಿಯಲ್ ಚಿತ್ರಗಳು ನನಗೆ ಅಷ್ಟಾಗಿ ಖುಷಿ ಕೊಡಲ್ಲ. ಮತ್ತೆ ಉದ್ಭವ ಕಥೆ ವಿಭಿನ್ನ ಮತ್ತು ನನಗೆ ಇಷ್ಟ ಆಯ್ತು. ಹಾಗಾಗಿ ಆ ಚಿತ್ರ ಆಯ್ಕೆ ಮಾಡಿಕೊಂಡೆ'
ಚಿತ್ರತಂಡದ ಬಗ್ಗೆ ಹೇಳಿ?
'ಕೊಡ್ಲು ರಾಮಕೃಷ್ಣ ಅವರ ಚಿತ್ರದಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. ಚಿತ್ರತಂಡ ಕೂಡ ತುಂಬಾ ಚೆನ್ನಾಗಿತ್ತು. ನಿರ್ಮಾಪಕರು, ಪ್ರೊಡಕ್ಷನ್ ತಂಡ, ಸಿನಿಮಾ ಮಾಡುವುದಕ್ಕೆ ಕಥೆ ಮಾತ್ರವಲ್ಲ ಒಳ್ಳೆಯ ತಂಡ ಇರಬೇಕು. ನಾನು ಕೆಲಸ ಮಾಡಿದ ತಂಡಗಳ ಪೈಕಿ ಇದು ಅತ್ಯುತ್ತಮ ತಂಡ ಅಂತಾಲೇ ಹೇಳುತ್ತೇನೆ'

ಪ್ರಮೋದ್ ಜೊತೆ ನಟಿಸಿದ್ದು ಹೇಗಿತ್ತು?
'ಪ್ರಮೋದ್ ಜೊತೆ ನಟನೆ ಮಾಡಿದ್ದು ಚೆನ್ನಾಗಿತ್ತು. ಪ್ರಮೋದ್ ಅವರಲ್ಲಿ ಸಾಧಿಸಬೇಕು ಎಂಬ ಹಠ, ಛಲ ಇದೆ. ಯಾವುದೇ ಒಂದು ಕೆಲಸ ಮಾಡಬೇಕು ಅಂದ್ರೆ ಅದರ ಬಗ್ಗೆ ಹೆಚ್ಚು ಫೋಕಸ್ ಇರಬೇಕು. ಅದು ಪ್ರಮೋದ್ ಅವರಲ್ಲಿ ಇದೆ'

ತುಂಬಾ ಗ್ಯಾಪ್ ಆಯ್ತು ಏಕೆ?
'ಕನ್ನಡ ಸಿನಿಮಾನೇ ಮಾಡಬೇಕು ಎನ್ನುವುದು ನನಗೆ ಇಷ್ಟ. ಆದರೆ ಸಿಕ್ಕ ಸಿಕ್ಕ ಚಿತ್ರಗಳೆಲ್ಲಾ ಮಾಡುವುದಿಲ್ಲ. ಸೂಕ್ತವೆನಿಸುವುದನ್ನು ಮಾತ್ರ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ತಮಿಳಿಗೆ ಹೋಗಿ ಬಂದಿಲ್ಲ. ನಾನು ಕನ್ನಡದಲ್ಲೇ ಇದ್ದೇನೆ. ಆದರೆ, ಒಳ್ಳೆಯ ಕಥೆ ಸಿಕ್ಕಾಗ ಅದನ್ನ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ಹಾಗಾಗಿ, ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ, ಒಳ್ಳೆಯ ಪಾತ್ರಗಳನ್ನ ಮಾಡುತ್ತೇನೆ'
'ತಮಿಳಿನಲ್ಲೂ ಸುಮಾರು 20 ಕಥೆಗಳನ್ನು ರಿಜೆಕ್ಟ್ ಮಾಡಿದ್ದೀನಿ. ಆಮೇಲೆ ಒಂದು ಸಿನಿಮಾ ಒಪ್ಪಿಕೊಂಡಿರುವುದು' ಎಂದು ಹೇಳಿದ್ರೆ ಯಾರೂ ನಂಬಲ್ಲ ಎಂದು ಹೇಳಿದರು.


Click it and Unblock the Notifications











