"ಭಾಷೆ ಎಲ್ಲದಕ್ಕಿಂತ ಶ್ರೇಷ್ಠ.. ಎಲ್ಲಾ ತರಹದ ಸಿನಿಮಾಗಳು ಬರಬೇಕು": ರಿಷಬ್ ಶೆಟ್ಟಿ ಕನ್ನಡ ಕಹಳೆ!
ಕನ್ನಡ ಚಿತ್ರರಂಗದತ್ತ ಮತ್ತೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡ್ತಿದೆ. ನಿರ್ದೇಶಕ- ನಟ ರಿಷಬ್ ಶೆಟ್ಟಿ 'ಕಾಂತಾರ' ಎನ್ನುವ ಅದ್ಭುತ ಸಿನಿಮಾ ಕಟ್ಟಿಕೊಟ್ಟು ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಸೇರಿದಂತೆ ಕನ್ನಡ ಚಿತ್ರರಂಗ ಬೆಳವಣಿಗೆಯ ಬಗ್ಗೆ ರಿಷಬ್ ಶೆಟ್ಟಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
ಕನ್ನಡ ಮಣ್ಣಿನ ಕಥೆಯನ್ನು ಕನ್ನಡದಲ್ಲೇ ಇಡೀ ಪ್ರಪಂಚ ನೋಡಬೇಕು ಎನ್ನುವುದು ರಿಷಬ್ ಶೆಟ್ಟಿ ಹೆಬ್ಬಯಕೆ ಆಗಿತ್ತು. ಅದೇ ಕಾರಣಕ್ಕೆ 'ಕಾಂತಾರ' ಚಿತ್ರವನ್ನು ಅವರು ಬೇರೆ ಭಾಷೆಗಳಿಗೆ ಡಬ್ ಮಾಡಲು ಮುಂದಾಗಿರಲಿಲ್ಲ. ಇಂಗ್ಲಿಷ್ ಸಬ್ಟೈಟಲ್ ಜೊತೆಗೆ ವಿಶ್ವದಾದ್ಯಂತ ಸಿನಿಮಾ ತೆರೆಗೆ ತಂದಿದ್ದರು. ಅದಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ವಿಚಾರದಲ್ಲಿ ಅವರು ಗೆದ್ದಿದ್ದರು ಕೂಡ. ಕೊನೆಗೆ ಹೊರ ರಾಜ್ಯಗಳ ಹೊರ ದೇಶಗಳ ಪ್ರೇಕ್ಷಕರ ಬೇಡಿಕೆಯಂತೆ ಸಿನಿಮಾವನ್ನು ಡಬ್ ಮಾಡಿ ರಿಲೀಸ್ ಮಾಡಲು ಮನಸ್ಸು ಮಾಡಿದರು.
ಇನ್ನು ಎಲ್ಲ ತರಹದ ಸಿನಿಮಾಗಳು ಬರಬೇಕು. ಮಾಮೂಲಿ ಕಮರ್ಷಿಯಲ್ ಸಿನಿಮಾಗಳು ಕೂಡ ಮುಖ್ಯ. ಇವತ್ತಿನ ಕಾಲಕ್ಕೆ ತಕ್ಕಂತೆ ನಮ್ಮ ಸಾಹಿತ್ಯವನ್ನು ಬಳಸಿಕೊಂಡು ಸಿನಿಮಾಗಳನ್ನು ಮಾಡಬೇಕು ಎಂದು ರಿಷಬ್ ಶೆಟ್ಟಿ ಹೇಳುತ್ತಾರೆ.

ಕನ್ನಡ ಭಾಷೆ ಬೆಳವಣಿಗೆಗೆ ಚಿತ್ರರಂಗದ ಕೊಡುಗೆ?
"ಒಂದು ರಾಜ್ಯ ಎಂದು ಬಂದಾಗ ಅಲ್ಲಿನ ಭಾಷೆ, ಅಲ್ಲಿನ ಕಲಾ ಪ್ರಕಾರಗಳು ಒಂದನ್ನು ಬಿಟ್ಟು ಒಂದು ಇರುವುದಿಲ್ಲ. ಸಿನಿಮಾ ಕೂಡ ಭಾಷೆಯನ್ನು ಬಿಟ್ಟಿಲ್ಲ. ನಮ್ಮ ಬದುಕೇ ಭಾಷೆ ಅಲ್ಲವಾ. ಭಾಷೆಯಿಂದಲೇ ನಮ್ಮ ಅಸ್ತಿತ್ವ, ಐಡೆಂಟಿಟಿ. ನಾವು ಯಾರು ಎಂದು ಹೇಳಲು ನಮ್ಮ ಜನ ಜೀವನ ಎಲ್ಲದಕ್ಕೂ ಭಾಷೆ ಮುಖ್ಯವಾಗಿರುತ್ತದೆ. ಚಿತ್ರರಂಗ ಅಂದಾಗಲೂ ಒಂದಕ್ಕೊಂದು ಅಂಟಿಕೊಂಡು ಇದೆ. 'ಕಾಂತಾರ' ಮಾಡಿದಾಗಲೂ ಕನ್ನಡದಲ್ಲೇ ಎಲ್ಲಾ ಕಡೆ ಹೋಗಬೇಕು ಎಂದುಕೊಂಡಿದ್ದು ಅದಕ್ಕೆ. ನಮ್ಮ ಮಣ್ಣಿನ ನಮ್ಮ ಕಥೆಗಳನ್ನು ಹೇಳುವಂತಹ ಸಿನಿಮಾ ಆಗಿರುವುದರಿಂದ ಕನ್ನಡದಲ್ಲೇ ಅದು ಎಲ್ಲರಿಗೂ ತಲುಪಬೇಕು. ಕನ್ನಡ ಸಿನಿಮಾ ಆಗಬೇಕ. ಇದರಿಂದ ಸಿನಿಮಾ ಘನತೆ ಹೆಚ್ಚುತ್ತದೆ. ಅದು ಆದ ಮೇಲೆ ಅಲ್ಲಿನ ಪ್ರೇಕ್ಷಕರ ಆಸೆಯಂತೆ ನಾವು ಡಬ್ ಮಾಡಬೇಕಾಯಿತು. ಚಿತ್ರರಂಗ ಭಾಷೆಯನ್ನು ಬಿಟ್ಟು ಇಲ್ಲವೇ ಇಲ್ಲ. ನಮ್ಮ ಸಿನಿಮಾಗಳು ಈ ರೀತಿ ಕಾಣಲು ನಮ್ಮ ಭಾಷೆಯೇ ಮುಖ್ಯ."

ಸಿನಿಮಾಗಳಿಂದ ಭಾಷೆಯ ಬೆಳವಣಿಗೆ ಸಾಧ್ಯ?
"ಭಾಷೆ ಬಹಳ ಶ್ರೇಷ್ಠವಾದದ್ದು. ಭಾಷೆಯ ಕೆಳಗೆ ಎಲ್ಲವೂ ಬರುತ್ತದೆ. ನನ್ನ ಪ್ರಕಾರ ಭಾಷೆಯನ್ನು ಮೀರಿದಂಥದ್ದು ಯಾವುದು ಇಲ್ಲ. ಭಾಷೆಯನ್ನು ಬಳಸಬೇಕು. ಯಾರು ಬೆಳೆಸೋಕೆ ಸಾಧ್ಯವಿಲ್ಲ. ಭಾಷೆಯನ್ನು ಬಳಸುವುದು ಗೌರವದಿಂದ ನಡೆದುಕೊಳ್ಳುವುದು ಮುಖ್ಯ. ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಕನ್ನಡ ಬಳಸುವುದರಿಂದ ಕನ್ನಡದ ಬೇರೆ ಬೇರೆ ಶೈಲಿಯನ್ನು ಬಳಸುತ್ತೇವೆ. ಉತ್ತರ ಕರ್ನಾಟಕ, ಮೈಸೂರು, ಮಂಗಳೂರು ಹೀಗೆ ಎಲ್ಲಾ ಮೂಲೆಗಳ ಬೇರೆ ಬೇರೆ ಶೈಲಿಯನ್ನು ಬಳಸುವುದರಿಂದ ಅಲ್ಲಿನ ಸಂಸ್ಕೃತಿಯನ್ನು ಹೇಳುವುದಕ್ಕೆ ಸಹಾಯ ಆಗುತ್ತದೆ. ಅಣ್ಣಾವ್ರು, ವಿಷ್ಣು ಸರ್, ಅಂಬರೀಶ್ ಅಣ್ಣನಂತಹ ಎಷ್ಟೋ ಜನರು ಮಾಡಿದ ಸಿನಿಮಾಗಳಿಂದ ನಮ್ಮ ಭಾಷೆಯ ಗುರುತಿಸುವಿಕೆ ಹೆಚ್ಚಾಗಿದೆ."

ಪ್ಯಾನ್ ಇಂಡಿಯಾ ಸಿನಿಮಾಗಳು ಸಕ್ಸಸ್.. ಮುಂದೆ?
"ಎಲ್ಲಾ ತರಹದ ಸಿನಿಮಾಗಳು ಬರಬೇಕು. ಈ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗ್ತಿದೆ. ಬೇರೆ ಭಾಷೆಗೆ ಡಬ್ ಆಗ್ತಿದೆ ಅನ್ನುವುದನ್ನು ಅಷ್ಟೇ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಮುಂದುವರೆಯಬೇಕು, ಬೆಳೆಯಬೇಕು ಅಂದರೆ ಎಲ್ಲಾ ರೀತಿಯ ಸಿನಿಮಾಗಳು ಬರಬೇಕು. ಒಂದು ಸಿನಿಮಾ ತಲುಪುತ್ತದೆ ಎಂದರೆ ಖುಷಿಯ ವಿಚಾರ. ನಿರ್ಮಾಪಕರಿಗೆ ಅದರಿಂದ ಧೈರ್ಯ ಬರುತ್ತದೆ. ಇಂತಹ ಸಿನಿಮಾ ಮಾಡಿ ಹೆಚ್ಚಿನ ಜನರಿಗೆ ತಲುಪಿಸಬಹುದು ಎನ್ನುವ ವಿಚಾರ ಒಳ್ಳೆಯದು. ಆದರೆ ಎಲ್ಲಾ ರೀತಿಯ ಸಿನಿಮಾ ಬಂದಾಗಲೇ ಎಲ್ಲಾ ಪ್ರೇಕ್ಷಕರನ್ನು ತೃಪ್ತಿಪಡಿಸಲು ಸಾಧ್ಯ."

ಇವತ್ತಿಗೆ ತಕ್ಕಂತೆ ಸಾಹಿತ್ಯವನ್ನು ಬಳಸಿಕೊಳ್ಳಬೇಕು
"ಕನ್ನಡ ಸಾಹಿತ್ಯವನ್ನು ಸಿನಿಮಾಗಳಲ್ಲಿ ಮೊದಲು ಬಹಳ ಬಳಸಿಕೊಳ್ಳುತ್ತಿದ್ದರು. 80-90 ದಶಕದವರೆಗೂ ಇದು ಇತ್ತು. ಇತ್ತೀಚೆಗೆ ಕೊಂಚ ಕಡಿಮೆ ಇದೆ. ಹಾಗಾಗಿ ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ಸಾಹಿತ್ಯ ಹೆಚ್ಚು ಬಳಸಿದಷ್ಟು ಸಿನಿಮಾ ಕಥೆ ಹಾಗೂ ಸ್ಕ್ರೀನ್ಪ್ಲೇ, ಬರವಣಿಗೆಯಲ್ಲಿ ಗಟ್ಟಿತನ ಕಾಣಿಸಿಕೊಳ್ಳುತ್ತದೆ. ಮೊದಲು ಒಳ್ಳೆ ಸಿನಿಮಾಗಳು ಬರುತ್ತಿತ್ತು. ಮೊದಲು ಬಳಸಿಕೊಳ್ಳುತ್ತಿದ್ದ ರೀತಿಯಲ್ಲಿ ಈಗ ಬಳಸಿಕೊಳ್ಳಲು ಸಾಧ್ಯವಿಲ್ಲ. ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ಎಲ್ಲಾ ರೀತಿಯ ಸಿನಿಮಾಗಳನ್ನು ನೋಡುವಂತಹ ಜನರು ಇದ್ದಾರೆ. ಕಮರ್ಷಿಯಲ್ ಸಿನಿಮಾಗಳನ್ನು ಮಾಡುವುದು ತಪ್ಪಲ್ಲ. ಅಂತಹ ಸಿನಿಮಾ ನೋಡುವ ಪ್ರೇಕ್ಷಕರು ಇದ್ದೇ ಇರುತ್ತಾರೆ. ಅವರಿಗೂ ಸಿನಿಮಾ ಮಾಡಬೇಕು, ಬೇರೆಯವರಿಗೂ ಸಿನಿಮಾ ಮಾಡಬೇಕು. ಪ್ರಯೋಗಾತ್ಮಕ ಸಿನಿಮಾ, ಕಂಟೆಂಟ್ ಬೇಸ್ಡ್ ಸಿನಿಮಾ ಹೀಗೆ ಎಲ್ಲಾ ರೀತಿಯ ಸಿನಿಮಾಗಳು ಆಗಬೇಕು.

ಕನ್ನಡದಲ್ಲಿ ವೆಬ್ಸೀರಿಸ್ ಕಮ್ಮಿ ಅಲ್ವಾ?
"ಓಟಿಟಿ ಫ್ಲಾಟ್ಫಾರ್ಮ್ ಅವರು ಅವಕಾಶ ಕೊಟ್ಟರೆ ಖಂಡಿತ ಕನ್ನಡದಲ್ಲೂ ಹೆಚ್ಚು ಹೆಚ್ಚು ವೆಬ್ಸೀರಿಸ್ಗಳು ನಿರ್ಮಾಣ ಆಗುತ್ತದೆ. ಅವಕಾಶಗಳು ಸಿಕ್ಕರೆ ಎಲ್ಲವೂ ಸಾಧ್ಯ. ಬೇಡಿಕೆ ತಕ್ಕಂತೆ ಪೂರೈಕೆ ಇರುತ್ತದೆ." ಎನ್ನುತ್ತಾರೆ ನಟ-ನಿರ್ದೇಶಕ ರಿಷಬ್ ಶೆಟ್ಟಿ.


Click it and Unblock the Notifications











