ವಿ ಮನೋಹರ್ ಕನಸಿನ ಕೂಸು 'ಭೂಮಿ ಗೀತ'
ಚಿತ್ರಸಾಹಿತಿ, ಸಂಗೀತ ನಿರ್ದೇಶಕ ವಿ. ಮನೋಹರ್ ಮೊದಲಿನಿಂದಲೂ ಜಾನಪದ ಕಲೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದಾರೆ. ಜಾನಪದ ಕಲೆಯನ್ನು ಇನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬುಡಕಟ್ಟು ಜನರ ಹಾಡುಗಾರಿಕೆ, ಕಲೆಯ ಬಗ್ಗೆ ಅಧ್ಯಯನ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ 'ಭೂಮಿ ಗೀತ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಕುರಿತು ಕೆಲ ವಿವರಣೆಗಳನ್ನು ವಿ ಮನೋಹರ್ ನೀಡಿದ್ದಾರೆ.
ಬಾಲ್ಯದಲ್ಲಿ ಕೋಲಾಟದ ದಲಿತರ ಒಂದು ಹಾಡನ್ನು (ಕಥನ ಗೀತೆ) ಕೇಳಿದ್ದೆ. ಅದರ ಒಂದು ಸಾಲು ಮಾತ್ರ ನನಗೆ ನೆನಪಿತ್ತು. ನಾನು ಮತ್ತೆ 5 ವರ್ಷದ ನಂತರ ಅದನ್ನು ಹುಡುಕಿಕೊಂಡು ಹೋದಾಗ ಆ ಹಾಡೂ ಇರಲಿಲ್ಲ. ಅದನ್ನು ಹಾಡುವವರೂ ಇರಲಿಲ್ಲ. ಆ ಹಾಡನ್ನು ಹಾಡಿದರೆ ನಮ್ಮನ್ನು ಕೀಳುಜಾತಿಯವರೆಂದು ನಿರ್ಲಕ್ಷಿಸುತ್ತಾರೆ ಎಂದು ಆ ದಲಿತ ಬುಡಕಟ್ಟು ಜನಾಂಗದವರು ಆ ಹಾಡು ಹಾಡುವುದನ್ನು ಬಿಟ್ಟುಬಿಟ್ಟರು.
ಆ ರೀತಿಯ ಪ್ರದರ್ಶನ ಕೀಳರಿಮೆಯ ಕಾರಣದಿಂದ ನಾಶವಾಗುತ್ತ ಹೋಗುತ್ತದೆ. ಆ ಕಲೆಯನ್ನು ಉಳಿಸಿಕೊಂಡವರನ್ನು ಪ್ರೋತ್ಸಾಹಿಸಿ ಪುನಃ ಬೆಳೆಸಿ ಉಳಿಸಲು ನಮ್ಮ ಸಂಸ್ಥೆಯಿಂದ ಪ್ರಯತ್ನಿಸುತ್ತೇನೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ನನ್ನ ಸ್ಟುಡಿಯೋದಲ್ಲಿ ಅವರನ್ನು ಕರೆಸಿ ಹಾಡಿಸಿ ಎಂದುನಮಗೆ ಬೆಂಬಲ ಸೂಚಿಸಿದ್ದಾರೆ.
ಸೋಲಿಗರು, ಹಕ್ಕಿ-ಪಿಕ್ಕಿ ವಂಶಜರು ಎಲ್ಲಾ ಸೇರಿ ಹೀಗೆ 45 ರೀತಿಯ ಕೈ-ಕಸುಬುದಾರರಿದ್ದಾರೆ. ಅಂಥವರೆಲ್ಲರ ಸಾಂಸ್ಕೃತಿಕ ಕಲೆಯನ್ನು ಪುನರುಜ್ಜೀವನಗೊಳಿಸಲು ಭೂಮಿಗೀತ ಪ್ರಯತ್ನಿಸುತ್ತದೆ ಎಂದು ತಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿ. ಮನೋಹರ ವಿವರಿಸಿದರು.ಹೆಸರಾಂತ ಜನಪದ ಕಲಾವಿದ ಮೈಸೂರು ಜನ್ನಿ ಮಾತನಾಡಿ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ನಾವು ನಿಕೃಷ್ಟವಾಗಿ ಕಾಣುತ್ತಿದ್ದೇವೆ. ಅದನ್ನು ಮತ್ತೆ ಜೀವಂತವಾಗಿರಿಸಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ, ಬೆಂಬಲ ಕೂಡ ಅತ್ಯಗತ್ಯವಾಗಿದೆ ಎಂದರು.


Click it and Unblock the Notifications











