'ಮನಸಾರೆ' ಪುಳಕಗೊಂಡ ಶ್ರೇಯಾ ಘೋಶಾಲ್!
ಬೆಂಗಳೂರಿನಿಂದ 40 ಕಿ.ಮೀ ದೂದರ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಹುನಿರೀಕ್ಷಿತ 'ಮನಸಾರೆ' ಚಿತ್ರದ ಧ್ವನಿಸುರುಳಿ ಮತ್ತು ಸಿಡಿಗಳು ಬಿಡುಗಡೆಯಾದವು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಶಾಲ್ ಆಗಮಿಸಿದ್ದರು.
ತಮ್ಮ ಹಾಡುಗಳಿಗೆ ಕನ್ನಡದಲ್ಲಿ ಭಾರಿ ಬೇಡಿಕೆಗೆ ಇರುವ ಬಗ್ಗೆ ಸ್ವತಃ ಶ್ರೇಯಾ ಘೋಶಾಲ್ ಅವರೇ ಪುಳಕಗೊಂಡಿದ್ದರು. ಪಶ್ಚಿಮ ಬಂಗಾಲದಲ್ಲೂ ತಾವು ಹಾಡಿರುವ ಕನ್ನಡ ಹಾಡುಗಳಿಗೆ ಸಖತ್ ಡಿಮ್ಯಾಂಡ್ ಇದೆ ಎಂದು ಶ್ರೇಯಾ ತಿಳಿಸಿದರು. ತಾವು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಇದೇ ಮೊದಲು. ಕನ್ನಡದಲ್ಲಿ ತಾವು ಹಾಡಿರುವ ಹಾಡುಗಳ ಸಂಖ್ಯೆ ನೂರರ ಗಡಿ ತಲುಪುತ್ತಿದೆ ಎಂದು ಹೇಳಿ 'ಮನಸಾರೆ' ಚಿತ್ರದ ಹಾಡಿನ ಚರಣವೊಂದನ್ನು ಹಾಡಿ ರಂಜಿಸಿದರು.
ಮನಸಾರೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಜೈಹೋ...ಖ್ಯಾತಿಯ ವಿಜಯಪ್ರಕಾಶ್, ನಿರ್ದೇಶಕ ಯೋಗರಾಜಭಟ್, ಸಂಗೀತ ನಿರ್ದೇಶಕ ಮನೋ ಮೂರ್ತಿ, ಛಾಯಾಗ್ರಾಹಕ ಸತ್ಯ ಹೆಗಡೆ, ಚಿತ್ರದ ನಾಯಕ ಮತ್ತು ನಾಯಕಿಯರಾದ ದಿಗಂತ್, ಐಂದ್ರಿತಾ ರೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಿತ್ರದ ಹಕ್ಕುಗಳನ್ನು ಹೈದರಾಬಾದ್ ಮೂಲದ ಆದಿತ್ಯಾ ಮ್ಯೂಸಿಕ್ ಖರೀದಿಸಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











