ಪುನೀತ್ ಪಾಲಿನ ಅದೃಷ್ಟದ ನಟ ರವಿ : ರಾಘಣ್ಣ
ಅಪ್ಪಾಜಿ ಅಭಿನಯದ 'ದಾರಿ ತಪ್ಪಿದಮಗ' ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಬಾಲನಟನಾಗಿ ಕಾಣಿಸಿಕೊಂಡಿದ್ದರು. ರವಿ ಅಭಿನಯದ ಚೊಚ್ಚಲ ಚಿತ್ರ ಅದಾಗಿತ್ತು. ಅದೇ ಚಿತ್ರದ ಜನಪ್ರಿಯ ಹಾಡು "ನಾರಿಯ ಸೀರೆ ಕದ್ದ..." ಈಗ ಶೀರ್ಷಿಕೆಯಾಗುತ್ತಿರುವ ಬಗ್ಗೆ ನಟ ರಾಘವೇಂದ್ರ ರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದರು.
ಕ್ರೇಜಿ ಸ್ಟಾರ್ ಮುಖ್ಯಭೂಮಿಕೆಯಲ್ಲಿರುವ 'ನಾರಿಯ ಸೀರೆ ಕದ್ದ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮಾತನಾಡುತ್ತಿದ್ದರು. ರವಿಚಂದ್ರನ್ ಅವರ ಚಿತ್ರಗಳಲ್ಲಿ ಅಭಿನಯಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಪುನೀತ್ ರಾಜ್ ಕುಮಾರ್ ಅವರ ಬಹುತೇಕ ಚಿತ್ರಗಳಿಗೆ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ. ಅವರು ಕ್ಲಾಪ್ ಮಾಡಿರುವ ಎಲ್ಲಾ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿವೆ. ಪುನೀತ್ ಪಾಲಿಗೆ ರವಿಚಂದ್ರನ್ ಅದೃಷ್ಟದ ನಟ ಎಂದು ರಾಘವೇಂದ್ರ ರಾಜ್ ಕುಮಾರ್ ಬಣ್ಣಿಸಿದರು.
ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ನಟ ನವೀನ್ ಕೃಷ್ಣ ಸಹ ಸಂತಸ ವ್ಯಕ್ತಪಡಿಸಿದರು. ಇದು ಶೇಕಡ ನೂರರಷ್ಟು ಮನರಂಜನಾತ್ಮಕ ಚಿತ್ರ. ಚಿತ್ರದ ಪ್ರಮುಖ ಆಕರ್ಷಣೆ ಹರ್ಷಿಕಾ ಪೂಣಚ್ಚ ಮಾತನಾಡುತ್ತಾ, ಕನಸುಗಾರನ ಚಿತ್ರಗಳಲ್ಲಿ ನಟಿಸುವುದೆಂದರೆ ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ವಿ ಮನೋಹರ್ ಸಂಗೀತ ನಿರ್ದೇಶನದ 'ನಾರಿಯ ಸೀರೆ ಕದ್ದ' ಧ್ವನಿಸುರುಳಿಯನ್ನು ಮನೋರಂಜನ್ ಆಡಿಯೋ ಹೊರತಂದಿದೆ. ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ಯಶಸ್ಸು ಸಾಧಿಸಲಿ ಎಂದು ಹೆಸರಾಂತ ನಿರ್ಮಾಪಕ ಕೆ ಮಂಜು ಶುಭ ಕೋರಿದರು. ಚಿತ್ರದ ನಾಯಕ ನಟ ರವಿಚಂದ್ರನ್, ಸಂಗೀತ ನಿರ್ದೇಶಕ ವಿ ಮನೋಹರ್, ನಿರ್ಮಾಪಕ ಕುಮಾರಸ್ವಾಮಿ ಉಪಸ್ಥಿತರಿದ್ದರು.


Click it and Unblock the Notifications











