ಉಲ್ಲಾಸ ಉತ್ಸಾಹದಲ್ಲಿ ಪುನೀತನಾದ ಗಣೇಶ!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಧ್ವನಿಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾನುವಾರ ಬೆಳಗ್ಗ್ಗೆ ಬೆಂಗಳೂರಿನ ಸಿಟಿ ಇನಿಸ್ಟಿಟ್ಯೂಟ್ ನಲ್ಲಿ ಬಿಡುಗಡೆ ಮಾಡಿದರು. ತೆಲುಗಿನ 'ಉಲ್ಲಾಸಂಗಾ ಉತ್ಸಾಹಂಗ' ಚಿತ್ರರೀಮೇಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ಯಶೋಸಾಗರ್ ಮತ್ತು ಸ್ನೇಹಾ ಉಲ್ಲಾಳ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಉಲ್ಲಾಸ ಉತ್ಸಾಹಕ್ಕೆ ಗಣೇಶ್ ಗೆ ಜತೆಯಾಗಿ ಯಾಮಿ ಗೌತಮ್ ಅಭಿನಯಿಸಿರುವುದು ಗೊತ್ತೇ ಇದೆ. ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಪುನೀತ್, ನನ್ನ ಆತ್ಮೀಯ ಗೆಳೆಯರಲ್ಲಿ ಗಣೇಶ್ ಸಹ ಒಬ್ಬ,. ನಿರ್ಮಾಪಕರಾದ ಸೋಮು ಮತ್ತು ತ್ಯಾಗು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರು. ಕುಟುಂಬ ಪ್ರಧಾನವಾದ ಈ ಚಿತ್ರದಲ್ಲಿ ಹಾಸ್ಯವೂ ಮಿಳಿತವಾಗಿದೆ. ಈ ಚಿತ್ರ ಖಂಡಿತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
''ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮುಖ್ಯ ಅತಿಥಿಯ ಯಾರೆಂಬುದನ್ನು ತಿಳಿಸಿರಲಿಲ್ಲ.ಪುನೀತ್ ಎಂದು ಗೊತ್ತಾದ ತಕ್ಷಣಖುಷಿಯಾಯಿತು. ನಮ್ಮ್ಮ ಉತ್ಸಾಹ ಇಮ್ಮಡಿಸಿದೆ'' ಎಂದು ಗಣೇಶ್ ಹೇಳಿದರು. ಚಿತ್ರದಲ್ಲಿನ ''ಕನಸೊಂದು ನಿಜವಾಗುವಂತ ಕನಸಾಗಿದೆ...''ಎಂಬ ಹಾಡು ನನ್ನ ಮೆಚ್ಚಿನ ಹಾಡುಗಳಲ್ಲೊಂದು ಎಂದರು.
ಸಂಗೀತ ನಿರ್ದೇಶಕ ಪ್ರಕಾಶ್ ವಿದೇಶ ಪ್ರವಾಸದಲ್ಲಿರುವ ಕಾರಣ ವೇದಿಕೆ ಮೇಲೆ ಅವರ ತಂದೆ ಆಸೀನರಾಗಿದ್ದರು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಪುನೀತ್ ಆಗಮಿಸಿದ್ದಕ್ಕೆ ನಿರ್ಮಾಪಕ ತ್ಯಾಗರಾಜ್ ಧನ್ಯವಾದಗಳನ್ನು ತಿಳಿಸಿದರು. ಧ್ವನಿಸುರುಳಿಯನ್ನು ಹೈದರಾಬಾದ್ ನ ಆದಿತ್ಯಾ ಮ್ಯೂಸಿಕ್ಸ್ ಹೊರತಂದಿದೆ.
ಉಲ್ಲಾಸ ಉತ್ಸಾಹ ಚಿತ್ರಕ್ಕೆ ಜಯಂತ ಕಾಯ್ಕಿಣಿ, ಕವಿರಾಜ್, ರಾಮನಾರಾಯಣ್ ಅವರ ಸಾಹಿತ್ಯ, ಸೋನು ನಿಗಂ, ಕೀರ್ತಿ, ನಾಗೇಶ್ ಅಯ್ಯರ್, ಟಿಪ್ಪು, ರೀಟಾ, ಬಿನ್ನಿ ದಯಾಳ್, ಪ್ರಕಾಶ್ ಕುಮಾರ್, ಅಂದ್ರಿಯಾ, ಪ್ರಸನ್ನ ರಾವ್ ಮತ್ತು ಪ್ರಶಾಂತಿನಿ ಅವರ ಸುಮಧುರ ಕಂಠ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











