ಚೈತ್ರದ ಸಂಜೆ ರಂಗಿನಲಿ ರಾಜ್ ಕಂಠಕ್ಕೆ ಸನ್ಮಾನ!

ಆ ಸಂಪುಟದ ಪ್ಲಾಟಿನಂ ಡಿಸ್ಕ್ ಬಿಡುಗಡೆ ಹಾಗೂ ರಾಜನ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಏರ್ ಟೆಲ್ ಕರುನಾಡ ಸಂಗೀತ ವೈಭವ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಘಟಕರು ಸಿ.ಡಿ.ಯಿಂದ ಆಯ್ದ ಮಧುರ ಗೀತೆಗಳನ್ನು ಆ ಗಾಯಕರ ಧ್ವನಿಯಲ್ಲಿ ಕೇಳುವ ಸೌಭಾಗ್ಯ ಕಲ್ಪಿಸಿದ್ದರು. ಗಾಯಕರು ಸಿ.ಡಿಯಲ್ಲಿ ತಾವು ಹಾಡಿದ ಗೀತೆಗಳನ್ನು ಹಾಡಿ ಕಲಾರಸಿಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದರು. ಒಟ್ಟಿನಲ್ಲಿ ಅದು ಚೈತ್ರದ ಸಂಜೆಯಲ್ಲಿ ಮರೆಯದ ಸಮಾರಂಭ.
ಪಾರ್ವತಮ್ಮ ರಾಜಕುಮಾರ್, ರಾಘವೇಂದ್ರರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಅದ್ಯಕ್ಷೆ ಡಾ.ಜಯಮಾಲ,ದ್ವಾರಕೀಶ್, ಸಾ.ರಾ.ಗೋವಿಂದು, ಸಾಹಿತಿ ದೊಡ್ಡರಂಗೇಗೌಡ, ನಿರ್ದೇಶಕರುಗಳಾದ ಭಾರ್ಗವ, ಗೀತಪ್ರಿಯ, ಸಿದ್ದಲಿಂಗಯ್ಯ ಹಾಗೂ ಗಾನ ಗಾರುಡಿಗ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸೇರಿದಂತೆ ಅಪಾರ ಕಲಾರಸಿಕರು ಈ ಸುಂದರ ಸಂಜೆಗೆ ಸಾಕ್ಷಿಯಾದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದ್ವಾರಕೀಶ್ ಸ್ವಾಗತ ಭಾಷಣ ಮಾಡಿದರೆ ವೇದಿಕೆಯಲ್ಲಿ ನೆರದಿದ್ದ ಅತಿಥಿಗಳು ಹಿತನುಡಿಗಳಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜನ್ ಇಂತಹ ಸತ್ಕಾರ್ಯ ಮಾಡಿದ ಇಂಡಿಯಾ ಟೇಲ್ಸ್ ಸಂಸ್ಥೆಯನ್ನು ಶ್ಲಾಘಿಸಿ ತಮ್ಮ ಸನ್ಮಾನವನ್ನು ಅಭಿಮಾನಿಗಳಿಗೆ ಅರ್ಪಿಸಿದರು.
ರಾಘವೇಂದ್ರರಾಜಕುಮಾರ್ ಮಾತನಾಡಿ ರಾಜನ್ ಮತ್ತು ರಾಜಕುಮಾರರ ಸಂಬಂಧಗಳನ್ನು ಬಣ್ಣಿಸಿದರು. ಸಿ.ಡಿ ಬಿಡುಗಡೆ ಸಮಾರಂಭದಲ್ಲಿ ಹಾಡುವುದಿಲ್ಲ ಎಂದಿದ್ದ ಎಸ್.ಪಿ.ಬಿ ರಾಜನ್ ಅವರಿಗಾಗಿ ಶಪಥ ಮುರಿದು, ಶ್ರೀನಿವಾಸ ಕಲ್ಯಾಣ ಚಿತ್ರದ 'ಪವಡಿಸು ಪರಮಾತ್ಮ' ಗೀತೆಯನ್ನು ಭಾವಪರವಶರಾಗಿ ಹಾಡಿದರು.
ಕಳೆದವರ್ಷ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರ ಸಂಗೀತದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ 'ಮಣಿಕಂಠ ಗೀತಾಮೃತ' ಎಂಬ ಸಿಡಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಸಂಗೀತ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ಇಂಡಿಯಾ ಟೇಲ್ಸ್ ಸಂಸ್ಥೆ ಹೊರ ತಂದಿರುವ ಈ ಸಂಪುಟ ಗಾಯಕರ ಸಮುಖದಲ್ಲೇ ತಂತ್ರಜ್ಞರನ್ನು ಇಟ್ಟುಕೊಂಡು ತಯಾರಿಸಲಾಗಿದೆ. ಎಲ್ಲಾ ಗೀತೆಗಳಿಗೂ ಸ್ವತಃ ರಾಜನ್ ಅವರೇ ಸಂಗೀತ ಸಂಯೋಜಿಸಿದ್ದಾರೆ. ಇದು ರೀಮಿಕ್ಸ್ ಅಲ್ಲ. ರೀಮೇಡ್. ಖ್ಯಾತ ಗಾಯಕರುಗಳಾದ ಚಿತ್ರಾ, ರಾಜೇಶ್ ಕೃಷ್ಣನ್, ಅಜಯ್ ವಾರಿಯರ್, ಅನುರಾಧ ಭಟ್, ಬದರಿ ಪ್ರಸಾದ್, ಎಂ.ಡಿ.ಪಲ್ಲವಿ, ಸುಬ್ಬಲಕ್ಷ್ಮೀ, ದಿವ್ಯಾ ರಾಘವನ್, ಅರ್ಚನಾ ಉಡುಪ, ಸಿಂಚನಾ ದೀಕ್ಷಿತ್, ರಂಗಸ್ವಾಮಿ, ಅನೂಕ್ ಸಂಪುಟದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ರಾಜನ್ ನಾಗೇಂದ್ರ ಹಳೆ ಗೀತೆಗಳಿಗೆ ಹೊಸ ಸ್ಪರ್ಶ
ಎಲೆಮರೆಯ ಹಾಡು ಹಕ್ಕಿಗಳಿಗೆ ವಿಷ್ಣು ಆಹ್ವಾನ!
ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?
ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ
ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ


Click it and Unblock the Notifications











