ಸ್ವಯಂಕೃಷಿ ಧ್ವನಿಸುರುಳಿಗೆ ಸಖತ್ ಡಿಮ್ಯಾಂಡ್ ಅಂತೆ
ಸಮಾಜದಲ್ಲಿ ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಸಂದೇಶವನ್ನು ಹೊತ್ತು ಬರುತ್ತಿರುವ ಚಿತ್ರ 'ಸ್ವಯಂಕೃಷಿ'. ಈಗಾಗಲೆ ಈ ಚಿತ್ರ ಶೇ.70ರಷ್ಟು ಚಿತ್ರೀಕರಣ ಪೂರೈಸಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ.
ಈ ಚಿತ್ರಕ್ಕೆ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ನಟ ವೀರೇಂದ್ರ ಬಾಬು. ಅವರು ಮೂಲತಃ ಶಿಡ್ಲಘಟ್ಟದವರು. ಸ್ವಯಂಕೃಷಿ ಚಿತ್ರೀಕರಣಕ್ಕೆ ಸ್ಥಳೀಯರು ಮುಗಿಬಿದ್ದಿದ್ದರು. ಈ ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು ಮತ್ತು ಮಂಡ್ಯದಲ್ಲಿ ನಡೆದಿದೆ. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಚಿತ್ರೀಕರಿಸಿರುವುದು ವಿಶೇಷ.
ಚಿತ್ರದ ಹಾಡುಗಳನ್ನು ಕೆಂಪುಕೋಟೆ, ತಾಜ್ ಮಹಲ್ ಮತ್ತು ಗೋವಾದಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ವೀರೇಂದ್ರ ಬಾಬು ತಿಳಿಸಿದ್ದಾರೆ.ನಂಬಿದರೆ ನಂಬಿ ಬಿಟ್ಟರೆ ಬಿಡಿ 'ಸ್ವಯಂಕೃಷಿ' ಚಿತ್ರದ ಆಡಿಯೋ ಸಿಡಿಗೆ ಸಖತ್ ಡಿಮ್ಯಾಂಡ್ ಅಂತೆ!. 2.5 ಲಕ್ಷ ಆಡಿಯೋ ಸಿಡಿಗಳನ್ನು ಬುಕ್ ಮಾಡಲಾಗಿದೆ ಎಂದು ವಿವರ ನೀಡಿದ್ದಾರೆ ವೀರೇಂದ್ರ ಬಾಬು. ಇದು 'ಸ್ವಯಂ' ಬೇಡಿಕೆಯೋ ಅಥವ 'ಕೃಷಿ'ಯೋ ಗೊತ್ತಿಲ್ಲ.
ಈ ಚಿತ್ರದಲ್ಲಿ ಉಮಾಶ್ರೀ ನಾಯಕನ ತಾಯಿಯಾಗಿ ಕಾಣಿಸುತ್ತಿದ್ದಾರೆ. ಸುಮಾರು ರು.3. ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆಯಂತೆ. ಪ್ರಿಯಾಂಕಾ ದೇಸಾಯಿ ಮತ್ತು ತಮನ್ನಾ ತನ್ವೀರ್ ಚಿತ್ರದ ಇಬ್ಬರು ನಾಯಕಿಯರು. ಚರಣ್ ರಾಜ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











