ಗಣೇಶ್ ಗಿಂತಲೂ ದೇವಿಶ್ರೀ ಸಂಭಾವನೆ ಹೆಚ್ಚು
*ಜಯಂತಿ
ಕೆಲವರು ಹೀಗೂ ಇರುತ್ತಾರೆ- ಎಸ್.ವಿ.ಬಾಬು ಹಾಗೆ. ನಿರ್ಮಾಪಕ ಎಸ್.ವಿ.ಬಾಬು ಹೈದರಾಬಾದಿನಲ್ಲೊಂದು, ಬೆಂಗಳೂರಿನಲ್ಲಿ ಇನ್ನೊಂದು ಕಾಲು ಇಟ್ಟವರು. ಸೋಲು ಬಂದರೆ ಕಣ್ಣು ಸಣ್ಣಗಾಗುವಂತೆ ನಗುತ್ತಾರೆ. ಗೆಲುವು ಸಿಕ್ಕರೆ ನಗುವಿನ ಜೊತೆಗೆ ಕಣ್ಣೂ ಅರಳುತ್ತದೆ. ಗಣೇಶನ ಕಾಲ್ಷೀಟ್ ಬೇಟೆಯಲ್ಲಿ ಬೇಗ ಯಶಸ್ವಿಯಾದವರ ಸಾಲಿನಲ್ಲಿ ಅವರಿದ್ದದ್ದು ಅಗ್ಗಳಿಕೆ. ಹೊಸಬರೆಂದರೆ ಅವರಿಗೆ ಅಚ್ಚುಮೆಚ್ಚು. ಅದಕ್ಕೇ ಶಿವಮಣಿ ಕೈಲಿ ಎಲ್ಲಾ ಹೊಸಬರನ್ನೇ ಹಾಕಿ ಜೋಶ್ ಸಿನಿಮಾ ನಿರ್ಮಿಸಿರೋದು.
ಗಣೇಶ ನಾಯಕನಾಗಿದ್ದ ಸಂಗಮ' ಚಿತ್ರ ನೋಡಿದವರು ಪಂಗನಾಮ ಅಂತ ಬೇಸರ ಪಟ್ಟುಕೊಂಡರೂ, ಬಾಬು ಅವರಿಗೇನೂ ಬೇಜಾರಾಗಿಲ್ಲ. ಯಾಕೆಂದರೆ, ಈ ಚಿತ್ರದಿಂದ ಅವರಿಗೆ ನಷ್ಟವೇನೂ ಆಗಿಲ್ಲವಂತೆ. ಆದರೆ, ಬಜೆಟ್ ಜಾಸ್ತಿಯಾಗಲು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮುಖ್ಯ ಕಾರಣವಂತೆ. ಬಡಿದದ್ದೇ ವಾದ್ಯ, ಕೇಳಿಸಿದ್ದೇ ರಾಗಗಳನ್ನು ಕೊಡಲು ಅವರು ಮಾಡಿಸಿದ ಖರ್ಚು ಬರೋಬ್ಬರಿ 80 ಲಕ್ಷ. ಗಣೇಶ ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಇದು ಹೆಚ್ಚು ಅನ್ನೋದು ವಿಶೇಷ!
ಅಂದಹಾಗೆ, ಬಾಬು ಮತ್ತೊಂದು ಕನ್ನಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸವಿಸವಿ ನೆನಪು' ಫ್ಲಾಪ್ ಸಿನಿಮಾ ನಿರ್ದೇಶಿಸಿದ್ದ ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ಅಂದುಕೊಂಡಂತೆ ಆದರೆ ಫೆಬ್ರುವರಿಯಲ್ಲಿ ಈ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











