ಪುನೀತ್ ಅಭಿನಯದ ’ಪವರ್’ ಧ್ವನಿಸುರುಳಿ ವಿಮರ್ಶೆ
ತಮ್ಮ ಪವರ್ ಫುಲ್ ಅಭಿನಯದಿಂದಲೇ ಯುವ ಪ್ರೇಕ್ಷಕರ ಮನಗೆದ್ದ ಪುನೀತ್ ಕೌಟಂಬಿಕ ಚಿತ್ರಗಳಿಂದಲೂ ಎಲ್ಲಾ ಪ್ರೇಕ್ಷಕ ವರ್ಗವನ್ನು ಒಲಿಸಿಕೊಂಡವರು. ಹೀಗಿದ್ದರೂ ಪುನೀತ್ ಚಿತ್ರ ನೋಡ ಹೊರಟವರು ಹೆಚ್ಚಾಗಿ ನಿರೀಕ್ಷಿಸುವುದು ಭರ್ಜರಿ ಸಾಹಸ ದೃಶ್ಯಗಳನ್ನು ಮತ್ತು ಜಿಂಕೆಯಂತೆ ಬಳಕುತ್ತಾ ಹೆಜ್ಜೆ ಹಾಕುವ ಅವರ ನೃತ್ಯವನ್ನು.
ಪವರ್ ಚಿತ್ರ ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡ 'ದೂಕುಡು' ಚಿತ್ರದ ರಿಮೇಕ್. ರಿಮೇಕ್ ಚಿತ್ರಗಳನ್ನು ಮಾಡುವುದರಲ್ಲಿ ಪರಿಣಿತರಾದ ಕೆ ಮಾದೇಶ್ ರವರ ಸಾರಥ್ಯ ಹಾಗೂ ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ತಮನ್ ರವರ ಆಸರೆ ಚಿತ್ರಕ್ಕೆ ದೊರಕಿದೆ. (ಬಳ್ಳಾರಿಯಲ್ಲಿ ಧೂಳೆಬ್ಬಿಸಿದ ಪುನೀತ್ ರಾಜ್ ಪವರ್)
ಬಳ್ಳಾರಿಯ ಜನಸ್ತೋಮದ ಮುಂದೆ ಬಿಡುಗಡೆಯಾದ ಆಡಿಯೋ ಗೆ ಪ್ರತಿಕ್ರಿಯೆಯೂ ಪವರ್ ಫುಲ್ ಆಗಿತ್ತು. ಹಾಡುಗಳು ಹೇಗಿದೆ ನೋಡೋಣ :

ಧಂ ಪವರೇ ಧಂ ಪವರೇ
ಗಾಯಕರು: ರಂಜಿತ್ ಉನ್ನಿ, ನಿವಾಸ್, ಯಾಸಿನ್ ಚಂದನ್
ಸಾಹಿತ್ಯ : ಚಂದನ್
ಚಿತ್ರದ ಟ್ರೈಲರ್ ನಲ್ಲಿ ಬಳಕೆಯಾಗಿ ಇಷ್ಟವಾಗಿದ್ದ ಧಂ ಪವರೇ ನಿಜಕ್ಕೂ ಪವರ್ ಫುಲ್ ಗೀತೆ. ನಾಯಕ ಹಾಗೂ ಅತನ ಬಳಗದ ಧೈರ್ಯ, ಕಾರ್ಯ ವೈಖರಿಯನ್ನು ಬಣ್ಣಿಸುವ ಗೀತೆಗೆ ಜಬರ್ ದಸ್ತ್ ಸಂಗೀತ ನೀಡಿದ್ದಾರೆ ತಮನ್. ಚಂದನ್ ರವರ ಗಟ್ಟಿ ಸಾಹಿತ್ಯದ ನಡುವೆಯೂ ಇಂಗ್ಲೀಷ್ ಪದಗಳು ಜಾಸ್ತಿಯಾಯಿತೇನೋ ಎಂಬ ಭಾವ ಮೂಡುತ್ತದೆ. ಇಂತಹ ಗೀತೆಗೆ ಅದು ಬೇಕು ಎಂಬ ಸಮಜಾಯಿಷಿ ಕೊಟ್ಟು ಕೊಂಡರೇ ನಿಜಕ್ಕೂ ಇಷ್ಟವಾಗುವ ಶಕ್ತಿಶಾಲಿ ಗೀತೆ. ಚಿತ್ರದಲ್ಲಿ ಅಲ್ಲಲ್ಲಿ ಇದರ ಬಳಕೆಯಾಗಿರಬಹುದೇನೋ? ಪುನೀತ್ ಶೈಲಿಗೆ ಹೇಳಿ ಮಾಡಿಸಿದ ಗೀತೆ.

ಗುರುವಾರ
ಗಾಯಕರು: ಪುನೀತ್ ರಾಜ್ ಕುಮಾರ್
ಸಾಹಿತ್ಯ : ಕವಿರಾಜ್
ತಮಗೆ ಹೊಂದುವಂತ ಗೀತೆಯನ್ನು ಯಾವುದೇ ಪರಿಣತ ಗಾಯಕರಅಷ್ಟೇ ಉತ್ತಮವಾಗಿ ಹಾಡಬಲ್ಲೆ ಎಂಬುದನ್ನು ಪುನೀತ್ ಇಲ್ಲಿ ಸಾಬೀತು ಪಡಿಸಿದ್ದಾರೆ. ತಮನ್ ರವರ ಲವಲವಿಕೆಯ ಸಂಗೀತಕ್ಕೆ ಅಷ್ಟೇ ಚೇತೋಹಾರಿಯಾದ ತುಂಟ ಸಾಹಿತ್ಯವನ್ನು ಕವಿರಾಜ್ ನೀಡಿದ್ದಾರೆ. ಪುನೀತ್ ಇತ್ತೀಚಿನ ದಿನಗಳಲ್ಲಿ ಹಾಡಿರುವ ಅತ್ಯುತ್ತಮ ಗೀತೆ ಎನ್ನಲು ಅಡ್ಡಿಯಿಲ್ಲ. ಗೀತೆಯಲ್ಲಿ ಬರುವ ಎಲ್ಲಾ ಏರಿಳಿತಗಳಿಗೆ ಸಮರ್ಥವಾಗಿ ನಿಭಾಯಿಸುವಲ್ಲಿ ಅವರು ತೋರಿರುವ ಆತ್ಮವಿಶ್ವಾಸವೂ ಮೆಚ್ಚುವಂಥದ್ದೇ. ಹಿನ್ನಲೆಯಲ್ಲಿ ಅಷ್ಟೇ ಉತ್ತಮವಾಗಿ ಹಾಡಿರುವ ಫೀಮೇಲ್ ಕೋರಸ್ ನ ಹೆಸರು ಅದೇಕೋ ಎಲ್ಲೂ ಪ್ರಸ್ತಾಪವಾಗಿಲ್ಲ.

ಮೆಹಬೂಬ ಮೆಹಬೂಬ
ಗಾಯಕರು: ಸುಜಿತ್, ಪೂಜಾ ರಾಘವನ್
ಸಾಹಿತ್ಯ : ಡಾ.ನಾಗೇಂದ್ರ ಪ್ರಸಾದ್
ಸುಜಿತ್ ಹಾಗೂ ಪೂಜಾ ಹಾಡಿರುವ್ ಈ ಗೀತೆಯ ಸಂಗೀತವನ್ನು ಡ್ಯಾನ್ಸ್ ಗಾಗಿಯೇ ಮಾಡಿದಂತಿದೆ. ತಮ್ಮನ್ ತಮ್ಮ ಕಾರ್ಯವೈಖರಿ ತೋರಿದರೆ, ನಾಗೇಂದ್ರ ಪ್ರಸಾದರ ಸಾಹಿತ್ಯ ಸಂಗೀತದೊಳಕ್ಕೆ ತೂರಿಕೊಂಡು ಸಾಗುತ್ತದಷ್ಟೇ.
ತೆರೆಯ ಮೇಲೆ ನೃತ್ಯ ಹೇಗಿರುತ್ತದೆ ಎಂಬುದಷ್ಟೇ ಕುತೂಹಲ. ಸುಜಿತ್ ಧ್ವನಿ ಪುನೀತ್ ಗೆ ಹೊಂದುತ್ತದೆ.

ಜಗತ್ತೇ ನಮ್ಮದು
ಗಾಯಕರು: ನಕುಲ್, ಸಂತೋಷ್, ಅನುರಾಧ ಭಟ್, ಸ್ನೇಹ ರವಿಚಂದ್ರನ್
ಸಾಹಿತ್ಯ : ಡಾ.ನಾಗೇಂದ್ರ ಪ್ರಸಾದ್
ಮತ್ತೆ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯವಿರುವ ಗೀತೆ. ಈ ಬಾರಿ ಅವರ ಸಾಹಿತ್ಯವೇ ಗೀತೆಗೆ ಭೂಷಣ. ವೇಗದ ಧಾಟಿಯಲ್ಲಿ ನಾಗಲೋಟದಿಂದ ಸಾಗುವ ಸಂಗೀತವನ್ನು ತಮ್ಮ ಸಮರ್ಥ ಸಾಹಿತ್ಯದಿಂದ ನಾಗೇಂದ್ರ ಪ್ರಸಾದ್ ಹಿಡಿದಿಡುತ್ತಾರೆ. ಮತ್ತೆ ನೃತ್ಯಕ್ಕೆ ಹೇಳಿ ಮಾಡಿಸಿದಂಥ ಗೀತೆ. ನಕುಲ್, ಸಂತೋಷ್, ಅನುರಾಧ, ಸ್ನೇಹರವರ ದೊಡ್ದ ಪಡೆ ಧ್ವನಿ ನೀಡಿರುವ ಈ ಗೀತೆ ಕೇಳುತ್ತಾ ಕೇಳುತ್ತಾ ಇಷ್ಟವಾಗಬಹುದು.

ವೈ ವೈ
ಗಾಯಕರು: ಎಂ ಎಂ ಮಾನಸಿ ಮತ್ತು ನವೀನ್
ಸಾಹಿತ್ಯ: ಡಾ.ನಾಗೇಂದ್ರ ಪ್ರಸಾದ್
ಮಾನಸಿ ಹಾಗೂ ನವೀನರ ಕಂಠದಲ್ಲಿ ಮೂಡಿಬಂದಿರುವ ಈ ಗೀತೆ ಐಟಂ ಸಾಂಗ್ ನ ಎಲ್ಲಾ ಗುಣಗಳನ್ನು ಹೊಂದಿದೆ. ಸಾಹಿತ್ಯ, ಸಾಹಿತ್ಯದಲ್ಲಿನ ಮಾದಕತೆ, ಮಾದಕತೆಗೆ ತಕ್ಕ ಧ್ವನಿ, ಧ್ವನಿಗೆ ತಕ್ಕ ಸಂಗೀತ, ಸಂಗೀತಕ್ಕೆ ತಕ್ಕ ವಾದ್ಯ ಸಂಯೋಜನೆ, ಇವಲ್ಲಕ್ಕೂ ಬೇಕಾದ ಅಬ್ಬರ ಎಲ್ಲವೂ ಇದ್ದೂ ಇದೋಂದು ಪಕ್ಕ ಐಟಂ ಸಾಂಗ್ ನಂತಿದೆ.


Click it and Unblock the Notifications











