ಕಣ್ಮರೆಯಾದ ಗಾನ ಕೋಗಿಲೆ: ಯಾರು ಹೇಗೆ ನೆನಪಿಸಿಕೊಂಡರು?
ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅನಾರೋಗ್ಯದಿಂದಾಗಿ ಇಂದು ನಿಧನರಾಗಿದ್ದಾರೆ. ಹಲವು ದಶಕಗಳಿಂದ ಕೋಟ್ಯಂತರ ಜನರನ್ನು ತಮ್ಮ ಹಾಡುಗಳ ಮೂಲಕ ರಂಜಿಸುತ್ತಾ, ಭಾವುಕಗೊಳಿಸುತ್ತಾ ಬಂದಿದ್ದ ಹಿರಿಯ ಜೀವ ಇಂದು ಕಣ್ಮರೆಯಾಗಿದೆ.
ಹಿರಿಯ ಜೀವ ಕಣ್ಮರೆಯಾಗಿರುವುದು ಭಾರತ ಕಲಾ ಪ್ರಪಂಚಕ್ಕೆ ದೊಡ್ಡ ಆಘಾತ ತಂದಿದ್ದು, ಸಿನಿಮಾ ಸೆಲೆಬ್ರಿಟಿಗಳು, ಹಾಡುಗಾರರು, ಕ್ರಿಕೆಟಿಗರು, ರಾಜಕಾರಣಿಗಳು ಲತಾ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಾರಂಭವಾಗಿ ಹಲವು ಮಂದಿ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ''ಹೇಳಲಾಗದಷ್ಟು ದುಃಖದಲ್ಲಿ ನಾನಿದ್ದೇನೆ. ಅತೀವ ದಯೆ ಮತ್ತು ಸಕಲ ಜೀವಗಳ ಬಗ್ಗೆ ಕಾಳಜಿಯುಳ್ಳ ಲತಾ ದೀದಿ (ಅಕ್ಕ) ನಮ್ಮನ್ನು ಅಗಲಿದ್ದಾರೆ. ಲತಾ ಅವರ ಅಗಲಿಕೆ ತುಂಬಲಾರದ ನಿರ್ವಾತವೊಂದನ್ನು ಭಾರತದಲ್ಲಿ ಸೃಷ್ಟಿಸಿದೆ. ಮುಂದಿನ ಪೀಳಿಗೆಯು ಲತಾ ಅವರನ್ನು ಭಾರತದ ಸಾಂಸ್ಕೃತಿಕ ಹೆಗ್ಗುರುತಾಗಿ ನೆನಪಿನಲ್ಲಿಟ್ಟುಕೊಳ್ಳಲಿದೆ'' ಎಂದಿದ್ದಾರೆ.
''ಲತಾ ದೀದಿಯ ಹಾಡುಗಳು ಹಲವು ಭಾವಗಳನ್ನು ಸ್ಪುರಿಸುತ್ತಿದ್ದವು. ಭಾರತೀಯ ಸಿನಿಮಾ ರಂಗ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದ್ದನ್ನು ಹಲವು ದಶಕಗಳಿಂದ ಅವರು ಬಹಳ ಹತ್ತಿರದಿಂದ ನೋಡಿದ್ದಾರೆ. ಸಿನಿಮಾ ಮಾತ್ರವೇ ಅಲ್ಲ ಭಾರತದ ಅಭಿವೃದ್ಧಿಯ ಬಗ್ಗೆಯೂ ಅವರಿಗೆ ಕಾಳಜಿ, ಕನಸುಗಳು ಇದ್ದವು. ಭಾರತವು ಸಶಕ್ತ ಅಭಿವೃದ್ಧಿಶೀಲ ರಾಷ್ಟ್ರವಾಗುವುದನ್ನು ಕಾಣಲು ಅವರು ಸದಾ ಕಾತರಿಸುತ್ತಿದ್ದರು'' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನಾನು ತೀವ್ರ ದುಃಖಿತನಾಗಿದ್ದೇನೆ: ಮೋದಿ
''ಅವರಿಂದ ಸಾಕಷ್ಟು ಪ್ರೀತಿಯನ್ನು ನಾನು ಪಡೆದಿದ್ದೇನೆ. ಇದು ನನ್ನ ಭಾಗ್ಯವೆಂದು ನಾನು ಭಾವಿಸಿದ್ದೇನೆ. ಅವರೊಂದಿಗೆ ನಾನು ಆಡಿದ ಮಾತುಗಳು, ಭೇಟಿ ನಾನು ಎಂದೂ ಮರೆಯಲಾರೆ. ಇತರ ಭಾರತೀಯರಂತೆ ಲತಾ ಅವರ ಅಗಲಿಕೆಗೆ ನಾನು ದುಃಖಿಸುತ್ತೇನೆ. ಲತಾ ದೀದಿ ಅವರ ಕುಟುಂಬದೊಡನೆ ಮಾತನಾಡಿದೆ. ನನ್ನ ಸಂತಾಪಗಳನ್ನು ವ್ಯಕ್ತಪಡಿಸಿದ್ದೇನೆ'' ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.

ನನ್ನ ಧ್ವನಿಯೇ ನನ್ನ ಗುರುತು ಎಂದಿದ್ದ ಲತಾ ದೀದಿ
''ನೆನಪಿಸಿಕೊಳ್ಳುವುದಾದರೆ ನನ್ನ ಧ್ವನಿಯೇ ನನ್ನ ಗುರುತು' ಎಂದಿದ್ದರು ಲತಾ ದೀದಿ. ಆ ಧ್ವನಿಯನ್ನು ಮರೆಯಲಾದರೂ ಆದೀತೆ. ಲತಾ ಮಂಗೇಶ್ಕರ್ ಅಗಲಿಕೆಯಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಆಕೆಯದ್ದು ದೇವತೆಯ ಧ್ವನಿ: ಬೊಮನ್
''ಆಕೆಯದ್ದು ದೇವಲೋಕದ ಧ್ವನಿ, ಈಗ ಆಕೆಯೇ ದೇವಲೋಕ ಸೇರಿದ್ದಾಳೆ. ಲತಾ ದೀದಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜನಪ್ರಿಯ ನಟ ಬೊಮನ್ ಇರಾನಿ ಟ್ವೀಟ್ ಮಾಡಿದ್ದಾರೆ.

ನಟ ಚಿರಂಜೀವಿ ಟ್ವೀಟ್
ತೆಲುಗು ನಟ ಚಿರಂಜೀವಿ ಟ್ವೀಟ್ ಮಾಡಿ, ''ಭಾರತದ ಗಾನ ಕೋಗಿಲೆ. ಭಾರತದ ದಂತಕತೆಗಳಲ್ಲಿ ಒಬ್ಬರು ಲತಾ ಮಂಗೇಶ್ಕರ್ ನಿಧನದಿಂದ ಭಾರತದ ಕಲಾ ಜಗತ್ತಿನಲ್ಲಿ ಶೂನ್ಯ ಆವರಿಸಿದಂತಾಗಿದೆ. ಅವರು ಬಿಟ್ಟು ಹೋಗಿರುವ ಸ್ಥಳವನ್ನು ಯಾರೂ ತುಂಬಲಾಗದು. ಅವರು ನೀಡಿರುವ ಸಂಗೀತ, ಭೂಮಿಯ ಮೇಲೆ ಸಂಗೀತ ಇರುವವರೆಗೂ ಬದುಕಿರಲಿವೆ'' ಎಂದಿದ್ದಾರೆ.

ಸಂಗೀತ ಕ್ಷೇತ್ರದ ಸುವರ್ಣ ಕಾಲ ಮುಗಿಯಿತು: ಮನೋಜ್ ಭಾಜಪೇಯಿ
ಸಂಗೀತ ಕ್ಷೇತ್ರದ ಸುವರ್ಣ ಕಾಲ ಲತಾ ಮಂಗೇಶ್ಕರ್ ಅಗಲಿಕೆಯಿಂದ ಮುಗಿದಂತಾಗಿದೆ. ಕೋಟ್ಯಂತರ ಜನ ಲತಾ ದೀದಿಯವರನ್ನು ಸದಾ ಕಾಲ ಮಿಸ್ ಮಾಡಿಕೊಳ್ಳಲಿದ್ದಾರೆ. ಮುಂದೆ ಬರುವ ಹಲವು ತಲೆಮಾರುಗಳು ಲತಾ ಮಂಗೇಶ್ಕರ್ ಸಂಗೀತವನ್ನು ಕೇಳಿ ಅವರನ್ನು ನೆನಪಿಸಿಕೊಳ್ಳಲಿವೆ ಎಂದು ನಟ ಮನೋಜ್ ಬಾಜಪೇಯಿ ಟ್ವೀಟ್ ಮಾಡಿದ್ದಾರೆ.

ಇಡೀ ಭಾರತವನ್ನೇ ಪ್ರತಿನಿಧಿಸುತ್ತಿದ್ದ ವ್ಯಕ್ತಿ ಲತಾ ದೀದಿ: ಗೌತಮ್ ಅದಾನಿ
ಆಕೆಯ ಧ್ವನಿ, ಆಕೆಯ ಧ್ವನಿಯ ಮೋಡಿ ತಲೆತಲೆಮಾರುಗಳ ವರೆಗೆ ಉಳಿದುಕೊಳ್ಳಲಿದೆ. ಮುಂದಿನ ಹಲವು ತಲೆಮಾರುಗಳು ಅವರನ್ನು ನೆನಪಿಸಿಕೊಳ್ಳುವುದಕ್ಕಿಂತಲೂ ದೊಡ್ಡ ಗೌರವ ಇನ್ನೊಂದು ಇರಲಾರದು. ಇಡೀಯ ಭಾರತವನ್ನೇ ಪ್ರತಿನಿಧಿಸುವ ಯಾರಾದರೂ ವ್ಯಕ್ತಿ ಇದ್ದರೆ ಅದು ಲತಾ ದೀದಿ ಮಾತ್ರವೇ ಆಗಿದ್ದರು. 36 ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಹಾಡು ಹಾಡಿದ್ದರು. ಕೋಟ್ಯಂತರ ಜನರು ಆಕೆಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಅದಾನಿ ಗ್ರೂಪ್ನ ಗೌತಮ್ ಅದಾನಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











