'ಗಾಳಿಪಟ 2' ಹಾಡು ಬಿಡುಗಡೆ: ಮತ್ತೊಮ್ಮೆ ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ
ಗಣೇಶ್-ಯೋಗರಾಜ್ ಭಟ್ ಕಾಂಬಿನೇಶನ್ನ ಮೂರನೇ ಸಿನಿಮಾ 'ಗಾಳಿಪಟ 2' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿದ್ದು, ಇಂದು ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಗಾಳಿಪಟ 2' ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.
'ನಾನಾಡದ ಮಾತನ್ನೆಲ್ಲ ಕದ್ದಾಲಿಸು' ಎಂದು ಪ್ರಾರಂಭವಾಗುವ ಈ ಸುಂದರ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಒದಗಿಸಿದ್ದು ಸಂಗೀತ ಅರ್ಜುನ್ ಜನ್ಯರದ್ದು. ಹಾಡಿರುವುದು ಸೋನು ನಿಗಮ್.
ಜಯಂತ್ ಕಾಯ್ಕಿಣಿ ಮತ್ತೊಂದು ಸುಂದರ ಸಾಹಿತ್ಯವನ್ನು ಸಿನಿಮಾ ಹಾಡಿಗೆ 'ನಾನಾಡದ ಮಾತನ್ನೆಲ್ಲ ಕದ್ದಾಲಿಸು' ಮೂಲಕ ನೀಡಿದ್ದಾರೆ. ಪ್ರೇಮಿಯೊಬ್ಬ ತನ್ನ ಹುಡುಗಿ ಬಳಿ ಮಾಡುತ್ತಿರುವ ಮನವಿಗಳ ಸಾಲು 'ನಾನಾಡದ ಮಾತನ್ನೆಲ್ಲ ಕದ್ದಾಲಿಸು' ಹಾಡಿನಲ್ಲಿದೆ.

ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಹಾಡು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಏಳು ಗಂಟೆಗಳಲ್ಲಿ ಹಾಡನ್ನು 2.80 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ಹಿಂದೆ 'ಗಾಳಿಪಟ' ಸಿನಿಮಾದ ಮೂಲಕ ಜಯಂತ್ ಕಾಯ್ಕಿಣಿ, ಸೋನು ನಿಗಮ್ ಜೋಡಿ ಮೋಡಿ ಮಾಡಿತ್ತು ಆಗ ಸಂಗೀತ ನಿರ್ದೇಶಕರಾಗಿದ್ದಿದ್ದು ಹರಿಕೃಷ್ಣ. ಆದರೆ ಈ ಬಾರಿ ಅರ್ಜುನ್ ಜನ್ಯ ಜೊತೆ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ.
'ಗಾಳಿಪಟ' ಸಿನಿಮಾದ 'ಮಿಂಚಾಗಿ ನೀನು ಬರಲು' ಹಾಡಿಗಿಂತಲೂ 'ನಾನಾಡದ ಮಾತನ್ನೆಲ್ಲ ಕದ್ದಾಲಿಸು' ಹಾಡು ಚೆನ್ನಾಗಿರಲಿದೆ ಎಂದು ಯೋಗರಾಜ್ ಭಟ್ಟರು ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಹಾಡು ಚೆನ್ನಾಗೇನೋ ಇದೆ, ಆದರೆ ಸಾಹಿತ್ಯದಷ್ಟು ಮಧುರವಾಗಿ ಸಂಗೀತ ಇಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು 'ಮಿಂಚಾಗಿ ನೀನು ಬರಲು' ಹಾಡಿನ ಸಮೀಪಕ್ಕೆ ಸಹ ಈ ಹಾಡು ಬರಲಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
'ಗಾಳಿಪಟ 2' ಸಿನಿಮಾದಲ್ಲಿ ಗಣೇಶ್, ದಿಗಂತ್ ಹಾಗೂ 'ಲೂಸಿಯಾ' ಪವನ್ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ 'ಗಾಳಿಪಟ' ಸಿನಿಮಾದಂತೆ ಈ ಸಿನಿಮಾ ಸಹ ಮೂವರು ಗೆಳೆಯರ ಕತೆಯನ್ನು ಹೊಂದಿರಲಿದೆ. ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನಂತ್ ನಾಗ್ ಸಹ ಇದ್ದಾರೆ. ಸಿನಿಮಾದ ನಿರ್ದೇಶನ ಯೋಗರಾಜ್ ಭಟ್ ಅವರದ್ದು, ನಿರ್ಮಾಣ ರಮೇಶ್ ರೆಡ್ಡಿಯವರದ್ದು.


Click it and Unblock the Notifications











