ಕಾಪಿರೈಟ್ ತಿದ್ದುಪಡಿ ಮಸೂದೆಗೆ ಸಂಸತ್ತು ಅನುಮೋದನೆ

ಸಂಗೀತ ಸಂಯೋಜಕರು, ಗೀತಸಾಹಿತಿಗಳು ಹಾಗೂ ಗಾಯಕರಿಗೆ ಈ ಸುದ್ದಿ ಸಂತಸ ತಂದಿದ್ದರೂ ಆಡಿಯೋ ಕಂಪನಿಗಳ ಕಿವಿಗೆ ಕಾದಸೀಸ ಸುರಿದಂತಾಗಿದೆ. ಆಡಿಯೋ ಕಂಪನಿಗಳು ಮಸೂದೆಯನ್ನು "ಅನ್ಯಾಯ ಪರಮಾವಧಿ" ಎಂದು ತಮ್ಮ ಸಿಟ್ಟು, ಅಸಮಾಧಾನವನ್ನು ಹೊರಹಾಕಿವೆ.
ಈ ಮಸೂದೆ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ದೇಶದ ಎಲ್ಲಾ ಜಾನಪದ, ಶಾಸ್ತ್ರೀಯ ಸೇರಿದಂತೆ ಪ್ರತಿಯೊಬ್ಬ ಸಂಗೀತಗಾರರಿಗೂ ಅನ್ವಯಿಸುತ್ತದೆ. ಅಂತಾರಾಷ್ಟ್ರೀಯ ನಿಯಮಗಳು ಹಾಗೂ ನಿಬಂಧನೆಗಳನ್ನು ಈ ಮಸೂದೆ ಜಾರಿಗೆ ತಂದಂತಾಗಿದೆ ಎಂದು ಸಂಗೀತ ಸಂಯೋಜಕ ಲಾಯ್ ಮೆಂಡೋಸಾ ಸಂತಸ ವ್ಯಕ್ತಪಡಿಸಿದ್ದಾರೆ.
ಮೇ 17ರಂದು ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇಂದು ಸಂಸತ್ತು ಅನುಮೋದನೆ ಸಿಕ್ಕಿದೆ. ಪಕ್ಷಭೇದ ಮರೆತು ಎಲ್ಲಾ ರಾಜಕೀಯ ಪಕ್ಷಗಳು ಮಸೂದೆಗೆ ಸರ್ವಸಮ್ಮತಿ ಸೂಚಿಸುವ ಮೂಲಕ ಸೃಜನಶೀಲ ಕಲಾವಿದರ ಬೌದ್ಧಿಕ ಹಕ್ಕು ಸ್ವಾಮ್ಯವನ್ನು ಎತ್ತಿಹಿಡಿದಿವೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಾಲ್ ಮಾತನಾಡುತ್ತಾ, ಮಸೂದೆಯಿಂದ ಹಿರಿಯರು ಇನ್ನೂ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ. ಅವರಿಗೆ ಬರಬೇಕಾಗಿದ್ದ ಹಳೆಯ ರಾಯಧನ (ಸ್ವಾಮ್ಯಪಾಲು) ಇನ್ನು ಮುಂದೆಯೂ ಸಂದಾಯವಾಗುತ್ತದೆ ಎಂದಿದ್ದಾರೆ. ಮಸೂದೆಯ ಪ್ರಮುಖ ಅಂಶಗಳು ಹೀಗಿವೆ.
ರೇಡಿಯೋ ಮತ್ತು ಟಿವಿ ವಾಹಿನಿಗಳು ಪ್ರತಿ ಬಾರಿ ಪ್ರಸಾರ ಮಾಡಿದಾಗಲೂ ಕಾಪಿರೈಟ್ ಮಾಲೀಕರಿಗೆ ರಾಯಧನ ನೀಡಬೇಕಾಗುತ್ತದೆ. 2012ರ ಕಾಪಿರೈಟ್ (ತಿದ್ದುಪಡಿ) ಮಸೂದೆ ಪ್ರಕಾರ ರಾಯಧನ ಈ ರೀತಿಯಾಗಿ ಹಂಚಿಕೆಯಾಗಲಿದೆ. ಶೇ. 50ರಷ್ಟು ಆಡಿಯೋ ಕಂಪನಿಗೆ; ಶೇ.25ರಷ್ಟು ನಿರ್ಮಾಪಕರಿಗೆ; ಶೇ.25ರಷ್ಟು ಸಂಗೀತ ಸಂಯೋಜಕ ಹಾಗೂ ಗೀತಸಾಹಿತಿಗಳಿಗೆ ಹಂಚಿಕೆಯಾಗಲಿದೆ. ಈ ಹಿಂದೆ ಶೇ.100 ರಾಯಧನ ಆಡಿಯೋ ಕಂಪನಿಗಳಿಗೇ ಸಂದಾಯವಾಗುತ್ತಿತ್ತು. (ಒನ್ಇಂಡಿಯಾ ಕನ್ನಡ)


Click it and Unblock the Notifications











