ಬಹು ನಿರೀಕ್ಷಿತ ಬಚ್ಚನ್ ಹಾಡು ಕೇಳಿದ್ರಾ, ಇಲ್ಲಿದೆ ಓದಿ ವಿಮರ್ಶೆ
ಸುದೀಪ್ ಅಭಿನಯದ ಬಚ್ಚನ್ ಚಿತ್ರಕ್ಕೆ ತನ್ನದೇ ಆದ ವಿಶೇಷತೆಗಳಿವೆ. ತುಂಬಾ ದಿನಗಳ ನಂತರ ಪೂರ್ಣ ಪ್ರಮಾಣದ ನಾಯಕನಾಗಿ ಸುದೀಪ್ ನಟಿಸುತ್ತಿರುವ ಚಿತ್ರ ಎನ್ನುವುದು ಒಂದು ಕಡೆಯಾದರೆ, ಇನ್ನೊಂದು ಕನ್ನಡದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಶಶಾಂಕ್ ಚಿತ್ರದ ನಿರ್ದೇಶಕರು ಎನ್ನುವುದು. ಒಂದೆರೆಡು ವರ್ಷಗಳಿಂದ ಟಾಪ್ ಸ್ಥಾನವನ್ನು ಕಾಯ್ದುಕೊಂಡೇ ಬಂದಿರುವ ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆಂದ ಮೇಲೆ ಹಾಡುಗಳನ್ನು ಕೇಳಲು ರಸಿಕರ ಕಿವಿಗಳು ತವಕಿಸುತ್ತಿರುತ್ತವೆ. ತಮ್ಮ ಚಿತ್ರಗಳಲ್ಲಿನ ಗೀತೆಗಳನ್ನು ಶಶಾಂಕ್ ವಿಭಿನ್ನ ಹಾಗೂ ಉತ್ತಮವಾಗಿ ತೆರೆಯ ಮೇಲೆ ತರುತ್ತಾರೆ ಎನ್ನುವುದನ್ನು ಅವರ ಹಿಂದಿನ ಚಿತ್ರಗಳು ತೋರಿಸಿವೆ.
ಒಂದಷ್ಟು ವೇಗ ಧಾಟಿಯ, ತುಂಟತನದ ಹಾಡುಗಳು, ಅದರಲ್ಲಿ ಕೆಲವೊಂದಕ್ಕೆ ಖುದ್ದು ಹರಿಕೃಷ್ಣರದೇ ಧ್ವನಿ , ಮಧ್ಯೆ ಒಂದೋ ಎರಡೋ ಸುಮಧುರ ಯುಗಳ ಗೀತೆಗಳು, ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಅದಕ್ಕೆ ತಕ್ಕುದ್ದಾದ ಮೈ ಮನ ಕುಣಿಸುವ ರಿದಂ ಬೀಟುಗಳು. ಇದು ಇತ್ತೀಚಿನ ವರ್ಷಗಳಲ್ಲಿನ ಹರಿಕೃಷ್ಣರ ಸಂಗೀತದ ಚಿತ್ರಗಳಲ್ಲಿ ಕಂಡು ಬರುವ ಪ್ಯಾಟರ್ನ್. ಅದು ಬಚ್ಚನ್ ನಲ್ಲೂ ಮುಂದುವರಿದಿದೆ.
ಮೊದಲ ಬಾರಿ ಕೇಳಿದಾಗಲೇ ವೇಗದ ಹಾಡುಗಳು ಇಷ್ಟವಾದರೇ, ಕೇಳುತ್ತಾ ಕೇಳುತ್ತಾ ಮೆಲೋಡಿಯಸ್ ಹಾಡುಗಳು ಮೊದಲ ಸ್ಥಾನ ಗಳಿಸುವುದು ಹರಿಕೃಷ್ಣ ಸಂಗೀತದ ಹೆಗ್ಗಳಿಕೆ. ಬಚ್ಚನ್ ಹಾಡುಗಳನ್ನು ಕೇಳಿದಾಗ ಮತ್ತೆ ನಿಮಗೆ ಆ ಅನುಭವವಾದರೂ ಹರಿಯ ಎಂದಿನ ಮ್ಯಾಜಿಕ್ ಸ್ವಲ್ಪ ಕಮ್ಮಿ ಆದಂತೆ ಅನಿಸುತ್ತದೆ. ಬಿಡುವಿಲ್ಲದೆ ದುಡಿಯುತ್ತಿರುವ ಹರಿ ಸ್ವಲ್ಪ ರೆಫ್ರೆಶ್ ಆಗಬೇಕು ಎಂದು ಈ ಹಾಡುಗಳನ್ನು ಕೇಳಿದಾಗ ಅನಿಸದಿರಲಾರದು.

ಹಲೋ ಹಲೋ ..ನನ್ನ ಮನಸ್ಸು ಇಲ್ಲೇ ಎಲ್ಲೋ
ಸಾಹಿತ್ಯ : ಕವಿರಾಜ್
ಹಾಡಿದವರು : ವಿಜಯ್ ಪ್ರಕಾಶ್
ಕವಿರಾಜ್ ಬರೆದಿರುವ ಈ ಹಾಡಿನ ಮೇಲೆ ಹರಿ ತಮ್ಮ ಟ್ರೇಡ್ ಮಾರ್ಕನ್ನು ಭದ್ರವಾಗಿ ಒತ್ತಿದ್ದಾರೆ. ಕೋರಸ್ ನಿಂದ ಪ್ರಾರಂಭವಾಗಿ, ಉತ್ತಮವಾದ ರಿದಂನ ಸಹಾಯ ಪಡೆದು ಲವಲವಿಕೆಯಿಂದ ಸಾಗುವ ಹಾಡು
ಕಳೆಗಟ್ಟುವುದು ವಿಜಯ್ ಪ್ರಕಾಶ್ ರವರ ಕಂಠದಿಂದಾಗಿ. ಹಾಡಿನ ರಾಗದ ಏರಿಳಿತವನ್ನು ತಮ್ಮ ಕಂಠದಿಂದ ಸರಾಗವಾಗಿ ಹತ್ತಿ ಇಳಿಯುವ ವಿಜಯ್ ಮೋಡಿ ಮಾಡುವುದಲ್ಲದೆ ಹಾಡನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಚಿತ್ರದ ಉತ್ತಮ ಎನ್ನಬಹುದಾದ ಹಾಡಿದು. ಸಾಹಿತ್ಯ ಪೂರಕವಾಗಿದೆ. ಕವಿರಾಜ್ ತಮ್ಮ ಪದ ಪ್ರಯೋಗದಿಂದ ಇಷ್ಟವಾಗುತ್ತಾರೆ.

ಒಂಚೂರು ಬಗ್ಗಿ ಮಾತಾಡು ಬಚ್ಚನು...
ಸಾಹಿತ್ಯ : ಶಶಾಂಕ್
ಹಾಡಿದವರು : ಸುದೀಪ್ ಹಾಗೂ ಇಂದು ನಾಗರಾಜ್
ಹರಿಕೃಷ್ಣರ ಎಂದಿನ ಲವಲವಿಕೆ ಈ ಹಾಡಿನಲ್ಲಿ ಎದ್ದು ಕಾಣುತ್ತದೆ. ಶಶಾಂಕರ ಸಾಹಿತ್ಯದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಹಿಂದಿ ನುಸುಳಿಕೊಂಡಿದೆ. ಇದು ಚಿತ್ರದಲ್ಲಿನ ನಾಯಕನ ವ್ಯಕ್ತಿತ್ವಕ್ಕೆ ಅವಶ್ಯವೇ ಎಂಬುದು
ಚಿತ್ರ ನೋಡಿದ ಮೇಲೆಯೇ ತಿಳಿದು ಕೊಳ್ಳಬೇಕಾಗುತ್ತದೆ. ಇಷ್ಟೆಲ್ಲದರ ನಡುವೆ ಕೇಳುಗರ ಗಮನ ಸೆಳೆಯುವುದು ಸುದೀಪ್ ಗಾಯನ. ಸುದೀಪ್ ತಮ್ಮ ಗಾಯನದಿಂದ ಅಚ್ಚರಿ ಮೂಡಿಸುವ ಹಾಡಿದು. ಹಾಡಿನಲ್ಲಿನ
ಸುದೀಪರ ಆತ್ಮ ವಿಶ್ವಾಸ ಎದ್ದು ಕಾಣುತ್ತದೆ. ವೇಗವಾಗಿ ಕೇಳಿಸಿಕೊಂಡು ಹೋಗುವ ಹಾಡಿನಲ್ಲಿ ಇಂದು ನಾಗರಾಜ್ ಸುದೀಪರೊಡನೆ ಉತ್ತಮವಾಗಿ ಧ್ವನಿಗೂಡಿಸಿದ್ದಾರೆ.

ಸದಾ ನಿನ್ನ ಕಣ್ಣಲ್ಲಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಹಾಡಿದವರು : ಸೋನು ನಿಗಮ್, ಶ್ರೇಯಾ ಘೋಷಾಲ್
ಹರಿ, ಜಯಂತ್ ಕಾಯ್ಕಿಣಿ, ಸೋನು ಹಾಗೂ ಶ್ರೇಯಾ ಘೋಷಾಲ್ ಸೇರಿದರೆಂದ ಮೇಲೆ ಅಲ್ಲೊಂದು ಸುಮಧುರವಾದ ಯುಗಳ ಗೀತೆ ಹುಟ್ಟಿಕೊಂಡಿತೆಂದೇ ಅರ್ಥ. "ಸದಾ ನಿನ್ನ ಕಣ್ಣಲ್ಲಿ ನಿನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ ತಯಾರಾದೇನು" ಎಂಬ ಸಾಲುಗಳಲ್ಲಿನ ಸಾಹಿತ್ಯದ ಚುಂಬಕ ಶಕ್ತಿ ಇಡೀ ಹಾಡನ್ನು ಆವರಸಿಕೊಂಡಿದೆ. ಉತ್ತಮವಾದ ಸಾಹಿತ್ಯಕ್ಕೆ ಮತ್ತೆಲ್ಲವೂ ಸುಲಲಿತವಾಗಿ ಸೇರಿಕೊಂಡಿದೆ. ಇಷ್ಟಾದ ಮೇಲೆ ಹಾಡಿಗೆ
ಯಶಸ್ಸು ಕಟ್ಟಿಟ್ಟ ಬುತ್ತಿ.

ಮೈಸೂರು ಪಾಕಿನಲ್ಲಿ ಟೋಟಲಾಗಿ
ಸಾಹಿತ್ಯ : ಯೋಗರಾಜ್ ಭಟ್
ಹಾಡಿದವರು : ಅನುರಾಧ ಭಟ್
ಮೈಸೂರು ಪಾಕಿನಲ್ಲಿ ಟೋಟಲಾಗಿ ಎಷ್ಟು ತೂತಿದೆ ಎಂದು ಪ್ರಾರಂಭವಾಗುವ ಹಾಡನ್ನು ಅನುರಾಧ ಭಟ್ ಮಾದಕವಾಗಿ ಹಾಡಿದ್ದಾರೆ. ಜೊತೆಯಲ್ಲಿ ಬರುವ ಕೋರಸ್ ಗಾಯನ ಸಹಾ ವಿಭಿನ್ನವಾಗಿ ಇದ್ದು, ಹರಿ ಕುಣಿಸುವಂಥ
ತಾಳ ಸಂಯೋಜನೆ ಮಾಡಿದ್ದಾರೆ. ಆದರೂ ಭಟ್ಟರ ಸಾಹಿತ್ಯ ಮಾತ್ರ ಅಲ್ಲಲ್ಲಿ ಕಿರಿಕಿರಿ ಎನಿಸುತ್ತದೆ. ಯುವಕರನ್ನು ಮೆಚ್ಚಿಸುವದಕ್ಕಾಗಿ ಎಂಬ ಸಮಜಾಯಿಶಿ ಕೊಟ್ಟರೂ "ಇಂಟರ್ ನೆಟ್ಟಿನಲ್ಲಿ ಇಡ್ಲಿ ಡೌನ್ ಲೋಡ್ ಮಾಡೋದು
ಹೇಗೆ" ಎಂಬಂಥ ಸಾಲುಗಳು ಸವಕಲಾಗಿ ಕಾಣುತ್ತದೆ. ಯುವಕರೂ ಈಗ ಪ್ರಬುದ್ಧರಾಗಿದ್ದರೆ ಎಂಬುದನ್ನು ಮರೆಯಲಾಗದು. ಆದರೂ ಹಾಡು ಹರಿಕೃಷ್ಣರ ಸಂಗೀತದಿಂದಾಗಿ ಕೇಳಲು ಮೋಸವಿಲ್ಲ.

ಬಚ್ಚನ್ ಬಚ್ಚನ್
ಸಾಹಿತ್ಯ : ಶಶಾಂಕ್
ಧ್ವನಿ : ಸುದೀಪ್
ಇನ್ನು ಕೊನೆಯಲ್ಲಿ ಬರುವುದು "ಬಚ್ಚನ್ ಬಚ್ಚನ್" ಎಂಬ ಶೀರ್ಷಿಕೆ ಹಾಡು. ಹಾಡು ಎನ್ನುವದಕ್ಕಿಂತ ನಾಯಕನ ಸ್ವಗತಕ್ಕೆ ಹಿನ್ನಲೆ ಸಂಗೀತದ ಲೇಪನ ಎನ್ನುವುದು ಸೂಕ್ತ. ನಾಯಕನ ಯೋಚನಾ ಲಹರಿಯನ್ನು, ವ್ಯಕ್ತಿತ್ವವನ್ನು
ಹಾಡಿನ(?) ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಇದು. ಹಿನ್ನಲೆಯಲ್ಲಿ ಬರುವ ಸಂಗೀತ ಮಾತಿಗೆ ಪೂರಕವಾಗಿದೆ. ಸುದೀಪ್ ತಮ್ಮ ಎಂದಿನ ಗಡಸು ಧ್ವನಿಯಲ್ಲಿ ಮಾತಾನಾಡಿರುವುದು ಅಭಿಮಾನಿಗಳಿಗೆ ಖುಷಿ ತರಬಲ್ಲದು.


Click it and Unblock the Notifications











