'ಕಾಂತಾರ' ಮೇಲೆ ಕೇಸು! ಸಂಗೀತ ಕದ್ದ ಆರೋಪ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಭಾರಿ ಯಶಸ್ಸು ಗಳಿಸಿದೆ. ದೇಶ-ವಿದೇಶದ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ.
ಇದರ ನಡುವೆ ಈ ಸಿನಿಮಾವು ಹಲವು ಚರ್ಚೆಗಳನ್ನು ಸಹ ಹುಟ್ಟುಹಾಕಿದೆ. 'ಕಾಂತಾರ' ಸಿನಿಮಾವನ್ನು ಕೇಂದ್ರವಾಗಿರಿಸಿಕೊಂಡು, ವೈದಿಕ್-ಅವೈದಿಕ, ಬ್ರಾಹ್ಮಣ್ಯ-ಆದಿವಾಸಿಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಕೆಲವು ಈ ಸಿನಿಮಾದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನೂ ನೀಡಿದ್ದಾರೆ. ಇದರ ನಡುವೆ ಸಿನಿಮಾದ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.
'ಕಾಂತಾರ' ಸಿನಿಮಾ ನೋಡಿದವರೆಲ್ಲ ಸಿನಿಮಾದ ಸಂಗೀತದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ 'ವರಾಹ ರೂಪಂ' ಹಾಡಂತೂ ಭಾರಿ ಹಿಟ್ ಆಗಿದೆ. ಆದರೆ ಈ ಹಾಡಿನ ರಾಗ ಹಾಗೂ ಇದರಲ್ಲಿ ಬಳಸಲಾಗಿರುವ ಸಂಗೀತ ಒರಿಜಿನಲ್ ಅಲ್ಲವೆಂಬ ಆರೋಪ ಮೊದಲಿನಿಂದಲೂ ಇತ್ತು. ಇದೀಗ ಅದೇ ವಿಷಯವಾಗಿ ಮಲಯಾಳಂ ಸಂಗೀತ ತಂಡವೊಂದು 'ಕಾಂತಾರ' ಸಿನಿಮಾದ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿದೆ.

'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡು ಸ್ವಂತದ್ದಲ್ಲ, ಅದೇ ಮಾದರಿಯ ಹಾಡು ಹಾಗೂ ಸಂಗೀತ ಮಲಯಾಳಂನಲ್ಲಿದೆ ಎಂದು 'ಫಿಲ್ಮಿಬೀಟ್' ಸಹ ವರದಿ ಮಾಡಿತ್ತು. ಇದೀಗ ಮಲಯಾಳಂ ಸಂಗೀತ ತಂಡವು 'ಕಾಂತಾರ' ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದೆ.
ಮಲಯಾಳಂನ 'ನವರಸಂ' ಹೆಸರಿನ ಸಂಗೀತ ಆಲ್ಬಂನಲ್ಲಿನ ಸಂಗೀತವನ್ನು ಬಹುತೇಕ ಯಥಾವತ್ತು 'ಕಾಂತಾರ'ದಲ್ಲಿ ಬಳಸಲಾಗಿದೆ. 'ನವರಸಂ' ಆಲ್ಬಂ ಅನ್ನು ಥೈಕುಡ್ಡಮ್ ಬ್ರಿಗೇಡ್ ತಂಡ ನಿರ್ಮಿಸಿದ್ದರು. ಇದೀಗ ಇವರೇ 'ಕಾಂತಾರ' ಸಿನಿಮಾದ ನಿರ್ಮಾಣ ಸಂಸ್ಥೆ ಹಾಗೂ ಸಂಗೀತ ನಿರ್ದೇಶಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ 'ತೈಕ್ಕುಡಂ ಬ್ರಿಡ್ಜ್' ''ನಾವು ಯಾವುದೇ ರೀತಿಯಲ್ಲಿ "ಕಾಂತಾರ" ಸಿನಿಮಾದೊಂದಿಗೆ ಸಹಯೋಗ ಹೊಂದಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಸಬಯಸುತ್ತೇವೆ. ಆಡಿಯೋ ವಿಷಯದಲ್ಲಿ ನಮ್ಮ "ನವರಸಂ" ಮತ್ತು "ವರಾಹ ರೂಪಂ" ಹಾಡಿನ ನಡುವೆ ಹೋಲಿಕೆಗಳಿವೆ ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಮ್ಮ ಪ್ರಕಾರ 'ಪ್ರೇರಣೆ' ಮತ್ತು 'ಚೌಕಟ್ಟಿನ' ನಡುವಿನ ಗೆರೆಯು ಸೂಕ್ಷ್ಮವಾಗಿದೆ ಮತ್ತು ನಿರ್ವಿವಾದವಾಗಿದೆ ಮತ್ತು ಆದ್ದರಿಂದ ನಾವು ಇದಕ್ಕೆ ಕಾರಣವಾದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಯೋಜಿಸಿದ್ದೇವೆ. ನಮ್ಮ ಅನುಮತಿ ಇಲ್ಲದೆ ಚಲನಚಿತ್ರದ ನಿರ್ದೇಶಕರು, ಸಂಗೀತ ನಿರ್ದೇಶಕರು ಹಾಡನ್ನು ಬಳಸಿಕೊಂಡಿದ್ದಾರೆ. ಈ ವಿಷಯದಲ್ಲಿ ನಮ್ಮ ಕೇಳುಗರ ಬೆಂಬಲವನ್ನು ನಾವು ಕೇಳುತ್ತಿದ್ದೇವೆ. ಸಂಗೀತದ ಹಕ್ಕುಗಳನ್ನು ರಕ್ಷಿಸುವ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹೆಚ್ಚಿಸಲು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತಿದ್ದೇವೆ'' ಎಂದಿದ್ದಾರೆ.
5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಅಲ್ಬಮ್ ಹಾಡೊಂದನ್ನು ರಿಲೀಸ್ ಮಾಡಿದ್ದರು. ಥೈಕ್ಕುಡಂ ಬ್ರಿಡ್ಜ್ ಅನ್ನೋ ತಂಡ ಈ ಸಾಂಗ್ ಅನ್ನು ಟ್ಯೂನ್ ಹಾಕಿ, ಕಂಪೋಸ್ ಮಾಡಿದೆ. ಮಾತೃಭೂಮಿ ಕಪ್ಪಾ ಟಿವಿಯಲ್ಲಿ ಈ ನವರಸಂ ಸಾಂಗ್ ಅನ್ನು ಲಭ್ಯವಿದೆ. ಅಸಲಿಗೆ ಈ ನವರಸಂ ಸಾಂಗ್ ಹಾಗೂ 'ಕಾಂತಾರ'ದ 'ವರಹ ರೂಪಂ' ಸಾಂಗ್ ಎರಡಕ್ಕೂ ಸಾಕಷ್ಟು ಸಾಮ್ಯತೆ ಇದೆ. ಹೀಗಾಗಿ ಸಂಗೀತ ಅಜನೀಶ್ ಬಿ ಲೋಕನಾಥ್ ಈ ಹಾಡನ್ನು ಕಾಪಿ ಮಾಡಿದ್ದಾರೆ ಅಂತ ನೆಟ್ಟಿಗರು ಆರೋಪ ಮಾಡಿದ್ದಾರೆ. ಇದೀಗ ಥೈಕ್ಕುಡಂ ಬ್ರಿಡ್ಜ್ ತಂಡವು ಕಾನೂನು ಕ್ರಮಕ್ಕೆ ಮುಂದಾಗಿದೆ.


Click it and Unblock the Notifications











