ಜೂ.26ಕ್ಕೆ 'ನೇಮೊದ ಬೂಳ್ಯ' ಧ್ವನಿಸುರಳಿ ಬಿಡುಗಡೆ
ಮಂಗಳೂರು, ಜೂನ್ 24 : ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಿಸಿದ, ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶಿಸಿದ, 'ನೇಮೊದ ಬೂಳ್ಯ' ತುಳು ಸಿನಿಮಾದ ಧ್ವನಿ ಸುರಳಿ ಬಿಡುಗಡೆ ಸಮಾರಂಭವು ಜೂನ್ 26ರಂದು ಭಾನುವಾರ ಸಂಜೆ 4.30ಕ್ಕೆ ಮಂಗಳೂರು ಪುರಭವನದಲ್ಲಿ ಜರಗಲಿದೆ.
ಸಮಾರಂಭದಲ್ಲಿ ಡಾ.ಮೋಹನ್ ಆಳ್ವ, ಡಾ.ಆಶಾಜ್ಯೋತಿ ರೈ, ಡಾ.ಸಂಜೀವ ದಂಡೆಕೆರಿ, ಡಾ.ರಿಚರ್ಡ್ ಕ್ಯಾಸ್ಟಲಿನೋ, ಜಾನಕಿ ಬ್ರಹ್ಮಾವರ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇನ್ನೂರು ವರ್ಷಗಳ ಹಿಂದೆ ಪುತ್ತೂರು ಸಮೀಪದ ಬೆಟ್ಟಂಪಾಡಿ ಎಂಬಲ್ಲಿ ನಡೆದ ಸತ್ಯಘಟನೆಯನ್ನು ಆಧರಿಸಿದ ಕತೆಯನ್ನು, ಖ್ಯಾತ ನಾಟಕಕಾರ ಬಿ.ಕೆ.ಗಂಗಾಧರ ಕಿರೋಡಿಯನ್ ಅವರು ಈಗಾಗಲೇ ನಾಟಕರೂಪವನ್ನಾಗಿ 'ನೇಮೊದ ಬೂಳ್ಯ' ಎಂಬುದಾಗಿ ರಂಗಪರದೆಗೆ ತಂದಿದ್ದರು. ಇದೀಗ ಅದೇ ಕತೆಯನ್ನು ಅವರು ತುಳುವಿನಲ್ಲಿ ಸಿನಿಮಾ ಮಾಡಿದ್ದಾರೆ. [ತುಳುನಾಡಿನಲ್ಲೇ ತುಳು ಸಿನೆಮಾ ಪ್ರದರ್ಶನಕ್ಕೆ ಕಂಟಕ]

ಪರತಿಮಂಗಣೆ ಪಾಡ್ದನದ ಆಧಾರಿತ ಕತೆಯಾದ 'ನೇಮೊದ ಬೂಳ್ಯ' ಸಿನಿಮಾ ಸದ್ದುಗದ್ದಲವಿಲ್ಲದೆ ಚಿತ್ರೀಕರಣಗೊಂಡು ಈಗ ಬಿಡುಗಡೆಯ ಹಂತದಲ್ಲಿದೆ. ನವಮುಂಬಯಿಯ ಹೋಟೆಲ್ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ಅವರು ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಿದ್ದು, ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಬಿ.ಕೆ.ಗಂಗಾಧರ ಕಿರೋಡಿಯನ್ ಮಾಡಿದ್ದಾರೆ.
ಪರತಿಮಂಗಣೆ ದೈವದ ಪಾಡ್ದನ ಆಧರಿಸಿ ಸಿನಿಮಾ ತಯಾರಾಗಿದೆ. ವಿ.ಮನೋಹರ್ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಉಮಾಪತಿ ಬೆಂಗಳೂರು ಕ್ಯಾಮರಾ, ಪ್ರಕಾಶ್ ಕಾರಿಂಜ ಸಂಕಲನವಿದ್ದು, ಪ್ರತಾಪ್ ಸಾಲ್ಯಾನ್ ಕದ್ರಿ ಸಹ ನಿರ್ದೇಶಕರಾಗಿದ್ದಾರೆ. ಕಾರ್ಕಳ, ಕೆಮ್ಮಣ್ಣು, ನಿಟ್ಟೆ ಮೊದಲಾದ ಗ್ರಾಮೀಣ ಪರಿಸರದಲ್ಲಿ ಒಂದೇ ಹಂತದಲ್ಲಿ 32 ದಿನಗಳ ಕಾಲ ಸಿನಿಮಾಕ್ಕೆ ಸತತ ಚಿತ್ರೀಕರಣ ನಡೆದಿತ್ತು. [400 ದಿನ ಪೂರೈಸಿ ದಾಖಲೆ ನಿರ್ಮಿಸಿದ ಕರಾವಳಿಯ ಹೆಮ್ಮೆಯ 'ಚಾಲಿಪೋಲಿಲು']

ಸಿನಿಮಾದಲ್ಲಿ ಪ್ರೀತಂ ಶೆಟ್ಟಿ ಕಡಾರ್ ಪ್ರಧಾನ ಪಾತ್ರ ಮೈಂದನಾಗಿ ನಟಿಸಿದ್ದರೆ, ಪರತಿ ಮಂಗಣೆಯಾಗಿ ಕಿರುತೆರೆ ನಟಿ ರಜನಿ ಅಭಿನಯಿಸಿದ್ದಾರೆ. ಉಳಿದಂತೆ ಖಳನಾಯಕ ಅಣ್ಣಪ್ಪ ಬಲ್ಲಾಳನಾಗಿ ಪ್ರದೀಪ್ಚಂದ್ರ ಉಡುಪಿ ನಟಿಸಿದ್ದಾರೆ. ರಮೇಶ್ ಭಟ್, ಮಂಡ್ಯರಮೇಶ್, ವಿ.ಮನೋಹರ್, ರಘುರಾಮ ಶೆಟ್ಟಿ, ರಮೇಶ್ ಕಲ್ಲಡ್ಕ, ಮೋಹನ್ ಬೋಳಾರ್, ಜಯಶೀಲ, ಪವಿತ್ರ ಶೆಟ್ಟಿ, ವೀಣಾ ಶೆಟ್ಟಿ, ಪ್ರತಿಭಾ, ಜಲಜ ಬೆಂಗಳೂರು, ಇಂದಿರಾ, ಮಮತಾ, ಯೋಗಿತಾ, ಹರಿಣಿ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಿನಿಮಾ ಅಕ್ಟೋಬರ್ ನಲ್ಲಿ ತೆರೆಕಾಣಲಿದೆ.


Click it and Unblock the Notifications











