ಕಣ್ಣೀರ ಕೋಡಿ ಹರಿಸಲಿದ್ದಾರೆ 'ನಮ್ಮ ಕಲ್ಯಾಣಿ' ಶ್ರುತಿ
ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ನಟಿ ಶ್ರುತಿ ಕೆಳಗಿಳಿದ ಮೇಲೆ ಬೆಳ್ಳಿತೆರೆಗೆ ಮತ್ತೆ ಮರಳಿದ್ದರು. ಅವರ ಚಿತ್ರವೊಂದು ಘೋಷಣೆಯಾಗಿ ನಂತರ ಕಾರಣಾಂತರಗಳಿಂದ ನಾಪತ್ತೆಯಾಗಿತ್ತು. ಇದೀಗ ಮತ್ತೆ ಬಹಳ ದಿನಗಳ ನಂತರ ಶ್ರುತಿ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಚಿತ್ರದ ಹೆಸರು 'ನಮ್ಮ ಕಲ್ಯಾಣಿ'.
ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಂತೆ. ಈ ಕುಟುಂಬ ಪ್ರಧಾನ ಚಿತ್ರದಲ್ಲಿ ಹೆತ್ತ ತಾಯಿ ಹಾಗೂ ಸಾಕು ತಾಯಿ ನಡುವೆ ಮಗುವೊಂದು ಅನುಭವಿಸುವ ಮಾನಸಿಕ ಕಿರಿಕಿರಿ, ನೋವು ಚಿತ್ರದ ಕಥಾವಸ್ತು. ಜೂನ್.18ರಿಂದ 'ನಮ್ಮ ಕಲ್ಯಾಣಿ' ಚಿತ್ರ ಸೆಟ್ಟೇರಲಿದೆ.
ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ ವಾಸು ಆಲೂರು. ರಾಜು ಸಂಗೀತ ಸಂಯೋಜನೆ, ಎಸ್ ಎನ್ ಬಿ ಮೂರ್ತಿ ಛಾಯಾಗ್ರಹಣ, ರಾಜಶೇಖರ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಚಿತ್ರದ ನಿರ್ಮಾಪಕರು ಎಸ್ ಎನ್ ಬಿ ಮೂರ್ತಿ, ಗೀತಾ ಆಲೂರು, ರಮೇಶ್ ಕಲ್ಲೂರು, ಡಾ.ಎಚ್ ಅಂಜಿನಪ್ಪ.
ಚಿತ್ರದ ತಾರಾಗಣದಲ್ಲಿ ರಿಯಾ, ನಕ್ಷತ್ರ, ಬ್ಯಾಂಕ್ ಜನಾರ್ದನ್, ಸುಶೀಲ್ ಮೊಕಾಶಿ, ಜಿ ಕೃಷ್ಣ ಮತ್ತಿತರರಿದ್ದಾರೆ. ಈ ಚಿತ್ರವನ್ನು ಬೆಳ್ಳಿಚುಕ್ಕಿ ಲಾಂಛನದಲ್ಲಿ ತೆರೆಗೆ ತರಲಾಗುತ್ತಿದೆ. 'ಮಾಯದಂಥ ಮಳೆ' ಎಂಬ ಚಿತ್ರದಲ್ಲೂ ಶ್ರುತಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ವೀರೇಶ್ ದೊಡ್ಡಬಳ್ಳಾಪುರ.


Click it and Unblock the Notifications











