ಭಾರತಿ ವಿಷ್ಣುವರ್ಧನ್ ಗೆ ಗೌರವ ಡಾಕ್ಟರೇಟ್
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವವು ಮೈಸೂರು ಮಾನಸ ಗಂಗೋತ್ರಿ ಆವರಣದಲ್ಲಿ ಮಾರ್ಚ್ 4ರಂದು ಸಂಜೆ 4ಗಂಟೆಗೆ ನಡೆಯಲಿದೆ. ಬಹು ಭಾಷಾ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಅಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕೆಎಸ್ ಓಯು ಉಪಕುಲಪತಿ ಕೆಎಸ್ ರಂಗಪ್ಪ ಮಂಗಳವಾರ ತಿಳಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗಡೆ ಅವರು ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 11 ಮಂದಿಗೆ ಪಿಎಚ್ ಡಿ ಪದವಿಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು.

ಈ ಬಾರಿಯ ಘಟಿಕೋತ್ಸವದಲ್ಲಿ 13,065(6950 ಮಹಿಳೆಯರು) ವಿವಿಧ ಪದವಿ ಹಾಗೂ 1377 ಡಿಪ್ಲೊಮಾಗಳನ್ನು ನೀಡಲಾಗುತ್ತಿದೆ. 22 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 22 ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ ಎಂದು ರಂಗಪ್ಪ ವಿವರ ನೀಡಿದರು.
ಕನ್ನಡದ ಮೇರು ನಟ ಡಾ.ರಾಜ್, ರೆಬೆಲ್ ಸ್ಟಾರ್ ಅಂಬರೀಷ್ ಸೇರಿದಂತೆ ಹಲವರ ಜತೆ ನಟಿಸಿದ ಕೀರ್ತಿ ಭಾರತಿ ವಿಷ್ಣುವರ್ಧನ್ ಅವರದು. ಬಂಗಾರದ ಮನುಷ್ಯ, ದೂರದ ಬೆಟ್ಟ, ಗಂಡೊಂದು ಹೆಣ್ಣಾರು, ಬಂಗಾರದ ಜಿಂಕೆ, ಭಾಗ್ಯ ಜ್ಯೋತಿ, ಮೇಯರ್ ಮುತ್ತಣ್ಣ ಸೇರಿದಂತೆ 100ಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ಅವರ ಸಾಧನೆಗೆ ಗೌರವ ಡಾಕ್ಟರೇಟ್ ಹುಡುಕಿಕೊಂಡು ಬಂದಿರುವುದು ಹೆಮ್ಮೆಪಡುವ ಸಂಗತಿ.


Click it and Unblock the Notifications











