ಶಿವಣ್ಣ 'ಬಳೆಗಾರ'ನ ಹಾಡುಗಳ ದಿಬ್ಬಣ

ಬನ್ನೇರುಘಟ್ಟದ ಆಸುಪಾಸಿನ ಮಾಳಗಾಳ, ವಿರುಪಾಕ್ಷಪುರ ಮುಂತಾದೆಡೆಗಳಲ್ಲಿ ನಾಯಕ ಶಿವರಾಜಕುಮಾರ್ ಹಾಗೂ ನವ್ಯಾನಾಯರ್ ಜೊತೆ ಅಭಿನಯಿಸಿದ
'ಝಲುಝಲ್ಲು ಕೈಬಳೆ - ಘಲ್ಲುಘಲ್ಲು ಕೈಬಳೆ ಹೆಂಗಂತ ಹೇಳುತೀನಿ...
ಬಣ್ಣಬಣ್ಣದ ಕೈಬಳೆ ಭಾಗ್ಯ ನೀಡೋ ಕೈ ಬಳೆ ಯಾರಂತ ಹೇಳುತೀನಿ'
ಎಂಬ ಗೀತೆಯನ್ನು ಚಿತ್ರೀಕರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ಓಂಸಾಯಿಪ್ರಕಾಶ್ ಬಳೆಗಾರನ ಹಾಡಿನ ಚಿತ್ರೀಕರಣಕ್ಕೆ ನಾಂದಿ ಹಾಡಿದ್ದಾರೆ. ನಾಗೇಂದ್ರಪ್ರಸಾದ್ ರಚಿಸಿ ಕುನಾಲ್ ಗಾಂಜಾವಾಲ ಕಂಠಸಿರಿಯಲ್ಲಿ ಮೂಡಿ ಬಂದಿರುವ ಮೇಲಿನ ಗೀತೆಗೆ ತಾರಾ ನೃತ್ಯ ಸಂಯೋಜಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಯೋಜಿಸಿರುವ ಚಿತ್ರದ ಎಂಟು ಹಾಡುಗಳು ಕರ್ನಾಟಕದ ರಮ್ಯ ತಾಣಗಳಲ್ಲಿ ಚಿತ್ರೀಕೃತವಾಗಲಿದೆ ಎಂದು ನಿರ್ಮಾಪಕ ರಮೇಶ್ ಕಶ್ಯಪ್ ತಿಳಿಸಿದ್ದಾರೆ.
ಓಂಸಾಯಿಪ್ರಕಾಶ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಅವರ ಛಾಯಾಗ್ರಹಣವಿದೆ. ಕಳೆದ ಸಾಲಿನ ಯಶಸ್ವಿ ಚಿತ್ರಗಳಲೊಂದಾದ 'ನಂದ ಲವ್ಸ್ ನಂದಿತಾ' ಚಿತ್ರದ ಕತೆಗಾರರಾಗಿದ್ದ ಅಜಯಕುಮಾರ್ ಈ ಚಿತ್ರಕ್ಕೂ ಕತೆ, ಚಿತ್ರಕತೆ ರಚಿಸಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರಪ್ರಸಾದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ನವ್ಯಾ ನಾಯರ್, ಆದಿ ಲೋಕೇಶ್, ಸತ್ಯಜಿತ್, ಅಮೃತ, ಪದ್ಮಾವಾಸಂತಿ, ಪ್ರಕಾಶ್ ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿ ಸಾಯಿಕೃಷ್ಣ, ಸುರೇಶ್ ಮಂಗಳೂರು, ರಮೇಶ್ ಕಶ್ಯಪ್ ಮುಂತಾದವರಿದ್ದಾರೆ.
ಗ್ಯಾಲರಿ: ಶಿವರಾಜ್ ಕುಮಾರ್ | ನವ್ಯಾ ನಾಯರ್ |
ಪೂರಕ ಓದಿಗೆ: ಇಳಯರಾಜ ಸಂಭಾವನೆ ಬರೋಬ್ಬರಿ ರು.70 ಲಕ್ಷ!!


Click it and Unblock the Notifications











